Karnataka Rains: ದಕ್ಷಿಣ ಕನ್ನಡದಲ್ಲಿ ಮಳೆ ಅವಾಂತರಕ್ಕೆ ಒಂದೇ ದಿನ ಐವರ ಬಲಿ; ತಲಾ 6 ಲಕ್ಷ ಪರಿಹಾರ ಘೋಷಣೆ
Karnataka Rains: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಈ ನಡುವೆ ಮಳೆ ಅವಾಂತರ ಮೃತಪಟ್ಟಿದ್ದ ಐವರು ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 6 ಲಕ್ಷ ರೂ. ಪರಿಹಾರ ಘೋಷಿಸಿದೆ. ಇನ್ನೂ ಮುಂದಿನ ಎರಡು ದಿನ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.


ಮಂಗಳೂರು: ದಕ್ಷಿಣ ಕನ್ನಡದಲ್ಲಿ ಸುರಿದ ಮಹಾಮಳೆಗೆ (Karnataka Rains) ಒಂದೇ ದಿನ ಐವರು ಬಲಿಯಾಗಿದ್ದರು. ಇದೀಗ ಮೃತರ ಕುಟುಂಬಸ್ಥರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು 6 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಭೂಕುಸಿತದಿಂದ ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಮೃತಪಟ್ಟಿದ್ದರು. ಅದೇ ರೀತಿ ನೇರಳಕಟ್ಟೆ ಬಳಿ ಭಾರಿ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿತ್ತು. ಈ ವೇಳೆ ಮನೆಯ ಹಿಂದಿನ ಕಟ್ಟಡ ಕುಸಿದು ಆರು ವರ್ಷದ ಬಾಲಕಿ ಫಾತಿಮಾ ನಯೀಮ್ ಮೃತಪಟ್ಟಿದ್ದಳು. ಇನ್ನು ಓಡಿನ್ಮಾಡದಲ್ಲಿ ಟಿಸಿ ದುರಸ್ತಿ ಮಾಡುವ ವೇಳೆ ಮೆಸ್ಕಾಂ ನೌಕರ ವಿಜೇಶ್ ಜೈನ್ ವಿದ್ಯುತ್ ತಗುಲಿ ಮೃತಪಟ್ಟಿದ್ದರು. ಮೃತಪಟ್ಟ ಐವರ ಕುಟುಂಬಗಳಿಗೆ ತಲ 6 ಲಕ್ಷ ಪರಿಹಾರ ಪರಿಹಾರ ನೀಡುವುದಾಗಿ ದಿನೇಶ್ ಗುಂಡೂರಾವ್ ಘೋಷಣೆ ಮಾಡಿದ್ದಾರೆ.
ಮಂಗಳೂರಿನಲ್ಲಿ ದೋಣಿ ಮಗುಚಿ ಇಬ್ಬರ ಸಾವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಜತೆಗೆ ಕಡಲಬ್ಬರ ಕೂಡ ಜೋರಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮೀನುಗಾರಿಕೆಗೆ ನಿರ್ಬಂಧಿಸಿದೆ. ಆದರೆ, ಎಚ್ಚರಿಕೆ ನಡುವೆ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರು ನೀರುಪಾಲಾಗಿದ್ದಾರೆ. ಮಂಗಳೂರು ಕಡಲತೀರದ ತೋಟಬೆಂಗ್ರೆ ಅಳಿವೆ ಬಾಗಿಲು ಬಳಿ ಘಟೆನೆ ನಡೆದಿದೆ. ತೋಟಬೆಂಗ್ರೆ ನಿವಾಸಿಗಳಾದ ಯಶವಂತ್ ಮತ್ತು ಕಮಲಾಕ್ಷ ನೀರುಪಾಲಾದವರು.
ಈ ಸುದ್ದಿಯನ್ನೂ ಓದಿ | Karnataka Rains: ಗುಡ್ಡ ಕುಸಿತ; ತಕ್ಷಣ ದಕ್ಷಿಣ ಕನ್ನಡಕ್ಕೆ ತೆರಳಲು ಸಚಿವ ದಿನೇಶ್ ಗುಂಡೂರಾವ್ಗೆ ಸಿಎಂ ಸೂಚನೆ
ಈ ಇಬ್ಬರು ಮೀನುಗಾರರು ನಿಯಮ ಮೀರಿ ನಾಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಅವಘಡ ಸಂಭವಿಸಿದೆ. ನಾಡದೋಣಿಯ ಅವಶೇಷಗಳು ಕಡಲತೀರಕ್ಕೆ ತೇಲಿ ಬಂದಿವೆ. ಸಮುದ್ರದಲ್ಲಿ ನಾಪತ್ತೆಯಾಗಿರುವ ಮೀನುಗಾರರಿಗಾಗಿ ಶೋಧ ಕಾರ್ಯ ನಡೆದಿದೆ.
ಕರಾವಳಿಯಲ್ಲಿ ಮುಂದಿನ 2 ದಿನ ಭಾರಿ ಮಳೆ ನಿರೀಕ್ಷೆ
ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಗುಡುಗು, ಮಿಂಚು ಮತ್ತು ಜೋರಾದ ಗಾಳಿಯೊಂದಿಗೆ ಭಾರಿ ಮಳೆಯಾಗುವ (Karnataka Rains) ನಿರೀಕ್ಷೆ ಇದೆ. ಹೀಗಾಗಿ ಮೇ 31ರಂದು ಭಾರತ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇನ್ನು ಮುಂದಿನ 24ಗಂಟೆ ಕಾಲ ಧಾರಾಕಾರ ಮಳೆಯಿಂದ ಕರಾವಳಿ ಭಾಗದ ನದಿ, ತೊರೆಗಳಲ್ಲಿ ಒಳಹರಿವು ಹೆಚ್ಚಾಗುವ ಹಿನ್ನೆಲೆಯಲ್ಲಿ ಹಠಾತ್ ಪ್ರವಾಹದ ಪರಿಸ್ಥಿತಿ ತಲೆದೋರುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಹಗುರ ಮಳೆಯೊಂದಿಗೆ ನಿರಂತರ ಗಾಳಿ (ಗಾಳಿಯ ವೇಗ ಗಂಟೆಗೆ 40-50 ಕಿ.ಮೀ.) ಬೀಸಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27°c ಮತ್ತು 20°C ಇರುವ ಸಾಧ್ಯತೆ ಇದೆ.
ಮೇ 31ರಂದು ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ದಾವಣಗೆರೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ.