ಮಂಗಳೂರು: ಹಲವು ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ (Moodbidri Police Inspector Case) ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಮೇಲೆ ಬಂದಿರುವ ಎಲ್ಲ ಆರೋಪಗಳು ಸುಳ್ಳು. ಈಗಾಗಲೇ ಬಂದಿರುವ ದೂರುಗಳ ಬಗ್ಗೆ ಮೇಲಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ನಾನು ಯಾರಿಗೂ ಲೈಂಗಿಕ ಕಿರುಕುಳ ಕೊಟ್ಟಿಲ್ಲ, ಯಾರಿಗೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಅವರು, ನಾನು ಕಳೆದ ವರ್ಷ 2025ರ ಮೇ ತಿಂಗಳಲ್ಲಿ ಈ ಸ್ಟೇಷನ್ಗೆ ಬಂದಾಗ ಇಲ್ಲಿ ಗಲಾಟೆಯೊಂದು ನಡೆಯುತ್ತಿತ್ತು. ಆಗ ಹೆಡ್ ಕಾನ್ಸ್ಟೇಬಲ್ ರವೀಂದ್ರ ಅವರನ್ನು ಕೇಳಿದಾಗ, ಅವರದ್ದು ಗಂಡ-ಹೆಂಡತಿ ಗಲಾಟೆ ಎಂದು ಹೇಳಿದರು. ಈ ವೇಳೆ ಮಹಿಳೆ (ದೂರುದಾರೆ) ಬೊಬ್ಬೆ ಹೊಡೆಯುತ್ತಿದ್ದಳು. ಅವರು ಯಾರು ಎಂದು ಕೇಳಿದಾಗ ಆಕೆಯ ಸಹೋದರಿ, ಅವಳು ನನ್ನ ತಂಗಿ, ವೇಶ್ಯಾವಾಟಿಕೆ ದಂಧೆಯವಳು, ಆಕೆ ಸರಿ ಇಲ್ಲಾ ಎಂದು ಹೇಳಿದರು. ಹೀಗಾಗಿ ಗಂಡ-ಹೆಂಡತಿ ನಡುವೆ ಏಕೆ ಬರುತ್ತೀಯಾ ಎಂದು ಕೇಳಿದಾಗ, ನನ್ನ ಅಕ್ಕನ ಗಂಡನನ್ನು ನಾನು ನೋಡಿಕೊಳ್ತೇನೆ ಎಂದು ಹೇಳಿದರು. ಹೀಗಾಗಿ ಇದೆಲ್ಲವೂ ಸರಿಯಲ್ಲ ಎಂದು ಗದರಿಸಿ ಹೇಳಿ ಕಳಿಸಿದ್ದೆ ಎಂದು ಇನ್ಸ್ಪೆಕ್ಟರ್ ಸಂದೇಶ್ ಹೇಳಿದ್ದಾರೆ.
ಇನ್ನು ನೆನ್ನೆ ದೂರು ನೀಡಿದ ಮಹಿಳೆಯ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಮಹಿಳೆ ಕಿರುಕುಳ ಕೊಟ್ಟಿದ್ದೇವೆ ಎಂಬ ಆರೋಪ ಬಂದಿದೆ. ಆದರೆ, ನಾನು ಯಾವುದೇ ಕಿರುಕುಳ ಕೊಟ್ಟಿಲ್ಲ, ಈ ಬಗ್ಗೆ ಮೇಲಧಿಕಾರಿಗಳು ತನಿಖೆ ಮಾಡಿದ್ದಾರೆ ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ.
ಅದೇ ರೀತಿ ಮತ್ತೊಬ್ಬ ಮಹಿಳೆ ದೂರಿನ ಬಗ್ಗೆ ಮಾತನಾಡಿ, ಅವರ ಗಂಡನ ಮೇಲೆ ಕಿಡ್ನಿ ಟ್ರಾನ್ಸ್ಪ್ಲ್ಯಾಂಟ್ ವಿಚಾರಕ್ಕೆ ಕೇಸ್ ಆಗಿತ್ತು. ತಾಕೋಡೆ ಚರ್ಚ್ನಲ್ಲಿ ಕಿಡ್ನಿ ಟ್ರಾನ್ಸ್ಪ್ಲ್ಯಾಂಟ್ ಮಾಡುವುದಕ್ಕೆ ಲೆಟರ್ ಕೊಟ್ಟಿದ್ದರು. ಆಗ ಹಣವನ್ನು ಕೊಟ್ಟಿದ್ದಾಗ ಮಹಿಳೆಯ ಗಂಡ ಲೆಟರ್ ಅನ್ನು ಹಾಗೆಯೇ ನೀಡಿ, ಅವರ ಅಕೌಂಟ್ ನಂಬರ್ ಹಾಕಿದ್ದರು. ಹೀಗಾಗಿ ಅವರನ್ನು ಸ್ಟೇಷನ್ಗೆ ಕರೆದುಕೊಂಡು ಬಂದಿದ್ದೆವು. ರಾತ್ರಿ ಅವರನ್ನು ಕರೆಸಿ ಮಾತನಾಡಿದ ಸಿಸಿಟಿವಿ ಫುಟೇಜ್ ಕೂಡ ನಮ್ಮ ಬಳಿ ಇದೆ. ಅವರು ಹೇಳಿದಂತೆ ಶೆಡ್ ಹತ್ತಿರ ಬಂದು ಮಾತನಾಡಿಲ್ಲ. ಅವರ ಲಾಯರ್, ಸಂಬಂಧಿಕರು ಬಂದು ಮಾತನಾಡಿದ್ದರು. ನಂತರ ಅವರನ್ನ ಕಳುಹಿಸಿದೆವು ಎಂದು ತಿಳಿಸಿದ್ದಾರೆ.
ಆ ಸಮಯದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟಿಲ್ಲ, ಅವರ ಬಳಿ ಯಾವುದೇ ಹಣವನ್ನೂ ನಾನು ಕೇಳಿಲ್ಲ, ಇದು ಸತ್ಯಕ್ಕೆ ದೂರವಾದ ವಿಷಯ ಅದು. ಇನ್ನು ಆಡಿಯೊ ಬಗ್ಗೆ ಮೇಲಧಿಕಾರಿಗಳು ತನಿಖೆ ಮಾಡ್ತಾರೆ ಎಂದರು.
ಕಾಂಪೌಂಡ್ ಹಾರಿದ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಸಂಬಂಧಿಕರ ಮಹಿಳೆಯೊಬ್ಬರು ಫೋನ್ ರಿಸೀಲ್ ಮಾಡುತ್ತಿಲ್ಲ ಎಂಬ ಮಾಹಿತಿ ಬಂತು. ಗಂಡ-ಹೆಂಡತಿ ಕಲಹ ಇದ್ದ ಹಿನ್ನೆಲೆಯಲ್ಲಿ ಸೂಸೈಡ್ ಮಾಡಿಕೊಂಡಿದ್ದಾರಾ ಎಂದು ನೋಡಲು ಕಾಂಪೌಂಡ್ ಹತ್ತಿ ಹೋಗಿದ್ದ ಎಂದು ತಿಳಿಸಿದ್ದಾರೆ. ಇನ್ನು ಆ ಮಹಿಳೆ ಜತೆ ಡಾನ್ಸ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಅವರು ನನಗೆ ಆಪ್ತರು, ಹೀಗಾಗಿ ಆ ರೀತಿ ನಡೆದಿತ್ತು ಎಂದು ತಿಳಿಸಿದ್ದಾರೆ.