ಬೆಂಗಳೂರು, ಫೆ.25: ರಾಜ್ಯ ಸರ್ಕಾರದ (Karnataka government) ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ (guarantee schemes) ಯೋಜನೆಗಳು ಕೇವಲ ಭರವಸೆಗಳಾಗಿ ಉಳಿಯದೆ, ಜನರ ಬದುಕಿನಲ್ಲಿ ಭರವಸೆಯ ಬೆಳಕಾಗಿ ಮೂಡಿಬಂದಿವೆ. ಈ ಕುರಿತು ಅಜೀಂ ಪ್ರೇಮ್ಜೀ ವಿಶ್ವವಿದ್ಯಾಲಯ (Azim Premji University) ನಡೆಸಿರುವ ಇತ್ತೀಚಿನ ಅಧ್ಯಯನ ವರದಿಯು ಗ್ಯಾರಂಟಿ ಯೋಜನೆಗಳ ಸಕಾರಾತ್ಮಕ ಪರಿಣಾಮಗಳನ್ನು ಅಂಕಿಅಂಶಗಳ ಸಮೇತ ಬಿಚ್ಚಿಟ್ಟಿದೆ ಎಂದು ಸಿಎಂ ಸಿದ್ದರಾಮಯ್ಯ (cm siddaramaiah) ತಿಳಿಸಿದ್ದಾರೆ.
ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಇಳಿಕೆ
ಸರ್ಕಾರದ ಗ್ಯಾರಂಟಿ ಯೋಜನೆಗಳ ಆಸರೆಯಿಂದಾಗಿ ಈ ಸಾಲಿನಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ ಎಂದು ವರದಿ ತಿಳಿಸಿದೆ. ಆರ್ಥಿಕ ಭದ್ರತೆಯು ರೈತರಲ್ಲಿ ಆತ್ಮವಿಶ್ವಾಸ ತುಂಬಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
ಗೃಹಲಕ್ಷ್ಮಿಯರ ಆರ್ಥಿಕ ಸ್ವಾತಂತ್ರ್ಯ: ‘ಗೃಹಲಕ್ಷ್ಮಿ’ ಯೋಜನೆಯಡಿ ನೆರವು ಪಡೆಯುತ್ತಿರುವ ಶೇ. 80ರಷ್ಟು ಮಹಿಳೆಯರು ತಮಗೆ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕುಟುಂಬದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಈಗ ತಾವು ಪ್ರಮುಖ ಪಾತ್ರ ವಹಿಸುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಸಾಲಮುಕ್ತರತ್ತ ಫಲಾನುಭವಿಗಳು: ವರದಿಯ ಪ್ರಕಾರ, ಶೇ. 37ರಷ್ಟು ಫಲಾನುಭವಿಗಳು ತಮಗೆ ಸಿಗುತ್ತಿರುವ ಗ್ಯಾರಂಟಿ ಹಣವನ್ನು ಹಳೆಯ ಸಾಲಗಳನ್ನು ಮರುಪಾವತಿ ಮಾಡಲು ಬಳಸುತ್ತಿದ್ದಾರೆ. ಇದು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಋಣಮುಕ್ತರಾಗಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.