ಬೆಂಗಳೂರು, ಆ. 17: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ (Chamarajanagara Shootout Case) ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ವಿಧಾನಸಭೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕಲಾಪದಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಈಗಾಗಲೇ ಅರಣ್ಯ ಸಿಬ್ಬಂದಿ ಘಟನಾ ಸ್ಥಳದಲ್ಲಿದ್ದ ಬೇಟೆಗಾರರಿಂದ ಬಂದೂಕು ಹಾಗೂ ಬರೋಬ್ಬರಿ 34.25 ಕೆಜಿ ಜಿಂಕೆ ಮಾಂಸ ತುಂಬಿದ್ದ ಚೀಲಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಸಚಿವರು ಮೃತಪಟ್ಟವರು ತಮ್ಮ ಜಮೀನಿಗೆ ಹೋಗಿರಲಿಲ್ಲ. ಬದಲಾಗಿ ಅರಣ್ಯದೊಳಗೆ 5ರಿಂದ 8 ಕಿಲೋ ಮೀಟರ್ ಅಕ್ರಮವಾಗಿ ಪ್ರವೇಶಿಸಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.
ʼʼಅರಣ್ಯ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಶೂಟೌಟ್ ಮಾಡಿಲ್ಲ. ಆತ್ಮರಕ್ಷಣೆಗಾಗಿ ಹಾಗೂ ಕತ್ತಲಿನಲ್ಲಿ ಈ ಘಟನೆ ನಡೆದಿದೆ. ಸಿಬ್ಬಂದಿಯ ತಪ್ಪು ಕಂಡುಬಂದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆʼʼ ಎಂದು ಭರವಸೆ ನೀಡಿದ್ದಾರೆ.
ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡ ವಸ್ತುಗಳು:
ಸಚಿವರು ಹೇಳಿದ್ದೇನು?
ʼʼಹನೂರು ವ್ಯಾಪ್ತಿಯ ಶಾಗ್ಯ ಬಳಿ ಕಳ್ಳ ಬೇಟೆಗಾರರು ಅಕ್ರಮವಾಗಿ ಅರಣ್ಯ ಪ್ರವೇಶಿಸಿರುವ ಕುರಿತು ಹಿಂದಿನ ದಿನ ರಾತ್ರಿ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ 10 ಸಿಬ್ಬಂದಿಯನ್ನೊಳಗೊಂಡ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಮುಂಜಾನೆ 5 ಗಂಟೆಯ ಸುಮಾರಿಗೆ ಅರಣ್ಯದ ಬಂಡೆಯೊಂದರ ಬಳಿ ಬೇಟೆಗಾರರಿರುವ ವಿಚಾರ ತಿಳಿದು ಬಂತು. ಆರಂಭದಲ್ಲಿ ಸಿಬ್ಬಂದಿ ಶರಣಾಗುವಂತೆ ಮನವಿ ಮಾಡಿದ್ದರುʼʼ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಹನೂರಿನಲ್ಲಿ ಮೂವರ ಎನ್ಕೌಂಟರ್: ಮೃತರ ಕುಟುಂಬಸ್ಥರ ಮನವೊಲಿಸಲು ಶಾಸಕ ಮಂಜುನಾಥ್ ಕೊನೆಗೂ ಯಶಸ್ವಿ
ಮುಂದುವರಿದು, ʼʼಅರಣ್ಯ ಸಿಬ್ಬಂದಿಯ ಮಾತನ್ನು ನಿರ್ಲಕ್ಷಿಸಿ ಬೇಟೆಗಾರರು ಸಿಬ್ಬಂದಿಯತ್ತ ಗುಂಡಿನ ದಾಳಿ ನಡೆಸಿದರು. ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿದಾಳಿ ಮಾಡಿದರು. ಈ ವೇಳೆ ಅರಣ್ಯ ಸಿಬ್ಬಂದಿಗೂ ಗಾಯಗಳಾಗಿವೆ. ಗುಂಡಿನ ದಾಳಿ ನಿಂತ ಬಳಿಕ ಅರಣ್ಯ ಸಿಬ್ಬಂದಿ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದರು. ಈ ಪೈಕಿ ಮೂವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಮೃತದೇಹಗಳನ್ನು ಮೈಸೂರಿಗೆ ರವಾನಿಸಲಾಗಿದೆʼʼ ಎಂದು ಮಾಹಿತಿ ನೀಡಿದ್ದಾರೆ.
ʼʼಘಟನಾ ಸ್ಥಳದಲ್ಲಿದ್ದ ಬೇಟೆಗಾರರ ಬಳಿ 2 ನಾಡಬಂದೂಕುಗಳು, ಕಾಡತೂಸುಗಳು, ಪಟಾಕಿ, ಚೀಲದಲ್ಲಿದ್ದ ಸುಮಾರು 35 ಕೆಜಿಯಷ್ಟು ಜಿಂಕೆ ಮಾಂಸ ಪತ್ತೆಯಾಗಿದೆʼʼ ಎಂದು ಅವರು ತಿಳಿಸಿದ್ದಾರೆ.
15 ಲಕ್ಷ ರುಪಾಯಿ ಪರಿಹಾರ ಘೋಷಣೆ
ಹನೂರು ಶಾಸಕ ಎಂ.ಆರ್. ಮಂಜುನಾಥ್ ಭಾನುವಾರ (ಆಗಸ್ಟ್ 16) ಗುಂಡಿನ ದಾಳಿಯಲ್ಲಿ ಮೃತಪಟ್ಟ ಮೂವರ ಕುಟುಂಬಗಳಿಗೆ ಒಟ್ಟು 15 ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ತಿಳಿಸಿದರು. ಈ ಪೈಕಿ ಸರ್ಕಾರದಿಂದ 5 ಲಕ್ಷ ರುಪಾಯಿ ಹಾಗೂ ಮಂಜುನಾಥ್ ವೈಯಕ್ತಿಕವಾಗಿ 10 ಲಕ್ಷ ರುಪಾಯಿ ಒದಗಿಸುವುದಾಗಿ ಹೇಳಿದರು.
ಹನೂರು ಎನ್ಕೌಂಟರ್ ಪ್ರಕರಣ; ಜಿಂಕೆ ಮಾಂಸ ಸೇರಿ ಹಲವು ಸಾಕ್ಷ್ಯ ಬಿಡುಗಡೆ ಮಾಡಿದ ಅರಣ್ಯ ಇಲಾಖೆ
ಸದ್ಯ ರಾಜ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಮ್ಯಾಜಿಸ್ಟ್ರೇಟ್ಗೆ ವಹಿಸಿದೆ. ತಪ್ಪಿತಸ್ಥ ಅಧಿಕಾರಿಗಳ ಅಮಾನತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದೆ. ಈಗಾಗಲೇ ತನಿಖೆಯೂ ಆರಂಭವಾಗಿದೆ. ಸದ್ಯ ಅಧಿಕಾರಿಗಳು ಬಿಡುಗಡೆ ಮಾಡಿರುವ ಸಾಕ್ಷ್ಯ ಪ್ರಕರಣಕ್ಕೆ ಬಹುದೊಡ್ಡ ತಿರುವು ನೀಡಲಿದೆ.
ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.