ಬೆಂಗಳೂರು: ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಭಾರತೀಯರು ಸೇರಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಹೀಗಿರುವಾಗಲೇ ದಕ್ಷಿಣ ಭಾರತದಲ್ಲೂ ಇಂಥದ್ದೇ ಸ್ಥಿತಿಯ ಬಗ್ಗೆ ಕೋಡಿ ಮಠದ ಶ್ರೀಗಳು (Kodi Mutt Swamiji) ಭವಿಷ್ಯ ನುಡಿದಿದ್ದಾರೆ. ಹಾಸನದಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು, ಈ ವರ್ಷದಲ್ಲಿ ನಡೆಯಬಹುದಾದ ವಿದ್ಯಮಾನಗಳ ಬಗ್ಗೆ ಮಾತನಾಡಿದ್ದಾರೆ.
ದಕ್ಷಿಣ ಭಾರತದಲ್ಲಿ ನೇಪಾಳದ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದಿರುವ ಶ್ರೀಗಳು, ಜನ ಜಂಗುಳಿ ಆಗುತ್ತದೆ. ಯುದ್ಧ ಆಗುತ್ತದೆ, ಜನ ನಿಯಂತ್ರಣ ತಪ್ಪುತ್ತದೆ, ಪ್ರಕೃತಿ ವಿಕೋಪ ಆಗುತ್ತದೆ. ದಕ್ಷಿಣ ಭಾರತದಲ್ಲಿ ನೇಪಾಳದಲ್ಲಿ ಆದಂತೆ ಆಗುತ್ತದೆ' ಎಂದು ಹೇಳಿದ್ದು, ಸದ್ಯ ಈ ವಿಡಿಯೊ ವೈರಲ್ ಆಗಿದೆ.
ಈ ವರ್ಷ ಮುಂಗಾರು ಮಳೆ ವಿರಳವಾಗಿ, ಹಿಂಗಾರು ಮಳೆ ಸಮೃದ್ಧಿಯಾಗಲಿದೆ ಎಂದು ತಾವು ಮುಂಚಿತವಾಗಿಯೇ ಹೇಳಿದ್ದನ್ನು ಸ್ಮರಿಸಿದ ಅವರು, ಬರುವ ದಿನಗಳಲ್ಲಿ ದಕ್ಷಿಣ ಭಾರತದಲ್ಲೂ ಭೀಕರ ಪ್ರಕೃತಿ ವಿಕೋಪಗಳು ಸಂಭವಿಸುವ ಲಕ್ಷಣಗಳಿವೆ. ಈ ಅನಾಹುತಗಳಿಗೆ ಮಾನವನು ಪ್ರಕೃತಿ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದೇ ಮುಖ್ಯ ಕಾರಣ ಎಂದು ಹೇಳಿದ್ದಾರೆ.
ಇನ್ನು ಮುಂದಿನ ಹಿಂಗಾರು ಮಳೆ ಶುಭ ತರಲಿದ್ದು, ಶೇ. 90 ರಷ್ಟು ಜನರಿಗೆ ಇದರಿಂದ ಪರಿಹಾರ ಸಿಗಲಿದೆ. ಕೆರೆ-ಕಟ್ಟೆಗಳು ತುಂಬಿ ಸಮೃದ್ಧಿಯಾಗಲಿದೆ. ಮುಂಬರುವ ಪ್ರಕೃತಿ ವಿಕೋಪಗಳಿಂದ ಪಾರಾಗಲು ಪ್ರತಿಯೊಬ್ಬರೂ ಭಗವಂತನಲ್ಲಿ ಪ್ರಾರ್ಥಿಸಬೇಕು ಎಂದು ಅವರು ಸಲಹೆ ನೀಡಿದರು.
ಇದೇ ವೇಳೆ ರಾಜ್ಯದ ನೂತನ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಿದ ಶ್ರೀಗಳು, ಹೊಸ ಮುಖ್ಯಮಂತ್ರಿಗಳಾಗಿ ಅನುಭವಿ ನಾಯಕ ಅಧಿಕಾರಕ್ಕೆ ಬಂದಿರುವುದು ಒಳ್ಳೆಯ ಬೆಳವಣಿಗೆ. ಅವರು ಸರಳ, ಸಜ್ಜನ ವ್ಯಕ್ತಿಯಾಗಿದ್ದು, ಬಡವರ ಪರ ಕಾಳಜಿ ಹೊಂದಿದ್ದಾರೆ. ಹಿಂದೆ ನಮ್ಮ ಬಳಿ ಬಂದಾಗ 'ಮುಖ್ಯಮಂತ್ರಿಯಾಗುತ್ತೀಯಾ' ಎಂದು ಹಾರೈಸಿದ್ದೆ. ಅವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಬದಲಾವಣೆ ಕಾಣಿಸುತ್ತಿದೆ. ಅವರಿಗೆ ಜನರೆಲ್ಲರೂ ಪ್ರೋತ್ಸಾಹ ನೀಡಬೇಕು ಹಾಗೂ ಆಶೀರ್ವದಿಸಬೇಕು" ಎಂದು ಎಂದು ಹೇಳಿದ್ದಾರೆ.