ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೊ ವೈರಲ್ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ಹಾಸನದ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ 13,712 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್ಶೀಟ್ನಲ್ಲಿ 52 ಜನರ ಹೆಸರು ಉಲ್ಲೇಖಿಸಲಾಗಿದ್ದು, ಇವರಲ್ಲಿ 39 ಮಂದಿ ವಿರುದ್ಧ ಆರೋಪಗಳು ಸಾಬೀತಾಗಿವೆ ಎಂದು ಎಸ್ಐಟಿ ತಿಳಿಸಿದೆ.
2024ರ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ಈ ತನಿಖೆ ಆರಂಭವಾಗಿತ್ತು. ಅಶ್ಲೀಲ ವಿಡಿಯೊಗಳನ್ನು ಹಂಚಲು ಆರೋಪಿಗಳು ಹಾಸನದಲ್ಲೇ ಸುಮಾರು 70 ಪೆನ್ಡ್ರೈವ್ಗಳನ್ನು ಖರೀದಿಸಿದ್ದ ವಿಚಾರ ತನಿಖೆಯ ವೇಳೆ ಬಹಿರಂಗವಾಗಿದೆ. 277 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ತಾಂತ್ರಿಕ ಸಾಕ್ಷ್ಯ ಹಾಗೂ ಎಫ್ಎಸ್ಎಲ್ ವರದಿ ಆಧರಿಸಿ ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿದೆ.
ಈ ಪ್ರಕರಣದಲ್ಲಿ ಎ1 ನವೀನ್, ಎ2 ಪ್ರಜ್ವಲ್ ಅವರ ಕಾರು ಚಾಲಕರಾಗಿದ್ದ ಕಾರ್ತಿಕ್ ಎನ್, ಎ3 ಚೇತನ್ ಬಿಸಿ, ಎ4 ಚೇತನ್ ವೈ ಎಸ್, ಎ5 ಲಿಖಿತ್ ಗೌಡ ಸೇರಿ ಒಟ್ಟು 39 ಆರೋಪಿಗಳ ವಿರುದ್ಧ ದೋಷಾರೋಪಣೆ ಮಾಡಲಾಗಿದೆ. ಇವರಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹೆಸರುಗಳೂ ಸೇರಿವೆ. ಅದರಲ್ಲೂ ಬಿಜೆಪಿ ನಾಯಕ ಪ್ರೀತಂಗೌಡ, ಸಂಸದ ಶ್ರೇಯಸ್ ಅತ್ಯಾಪ್ತರ ವಿರುದ್ಧದ ಆರೋಪ ಸಾಬೀತುಪಡಿಸಲಾಗಿದೆ.
ಪೆನ್ಡ್ರೈವ್ ಹಂಚಿಕೆ ಕೇಸ್ನಲ್ಲಿ ಪ್ರಜ್ವಲ್ ಕೂಡ ಆರೋಪಿಯಾಗಿದ್ದಾರೆ. ಅಲ್ಲದೆ, ಮಹಿಳೆಯರ ಸಮ್ಮತಿಯಿಲ್ಲದೆ ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿ, ಅದನ್ನು ಪೆನ್ಡ್ರೈವ್ ಮೂಲಕ ಹಂಚಿಕೆ ಮಾಡಿದ ಆರೋಪಗಳನ್ನು ಎಸ್ಐಟಿ ದೃಢಪಡಿಸಿದೆ. ಕೆಲ ಆರೋಪಿಗಳು ತಮ್ಮ ಮೊಬೈಲ್ಗಳಿಂದ ಇತರರಿಗೆ ವಿಡಿಯೋ ಹಂಚಿರುವುದನ್ನು ತನಿಖಾ ತಂಡ ದೃಢಪಡಿಸಿದೆ.
ಆಪ್ತರಿಂದಲೇ ಖೆಡ್ಡಾ
ಪ್ರಜ್ವಲ್ ರೇವಣ್ಣಗ ಮಾಜಿ ಆಪ್ತರೇ ಖೆಡ್ಡಾ ತೋಡಿದ್ದರು ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ. ಹಲವು ವರ್ಷಗಳ ಕಾಲ ಪ್ರಜ್ವಲ್ ಜತೆಯಲ್ಲೇ ಇದ್ದ ನವೀನ್ ಗೌಡ, ಕಾರ್ತಿಕ್, ಚೇತನ್ ಹಾಗೂ ಹರೀಶ್ ಮಾಜಿ ಸಂಸದನ ವಿಡಿಯೊ ವೈರಲ್ ಹಿಂದಿನ ಪ್ರಮುಖ ರೂವಾರಿಗಳು ಎನ್ನಲಾಗಿದೆ. ಪ್ರಜ್ವಲ್ ಕುರಿತು ಎಲ್ಲ ಮಾಹಿತಿ ಗೊತ್ತಿದ್ದ ಕಾರು ಚಾಲಕ ಕಾರ್ತಿಕ್, ಮಾಜಿ ಸಂಸದನ ಮೊಬೈಲ್ನಿಂದ ವಿಡಿಯೋ ಕದ್ದಿದ್ದ. ಇನ್ನು ರೇವಣ್ಣ ಕುಟುಂಬದ ವ್ಯವಹಾರ ಆಡಿಟಿಂಗ್ ಕೆಲಸವನ್ನು ನವೀನ್ ಮಾಡುತ್ತಿದ್ದರೆ, ಇತ್ತ ಜೆಡಿಎಸ್ನಲ್ಲಿಯೇ ಇದ್ದ ಚೇತನ್ ತನಗೆ ಹಾಗೂ ತಾಯಿಗೆ ಚುನಾವಣೆಯಲ್ಲಿ ಸಹಾಯ ಮಾಡಲಿಲ್ಲ ಎಂದು ಪಕ್ಷ ತೊರೆದಿದ್ದ. ಪ್ರಜ್ವಲ್ ಜತೆ ಗುರುತಿಸಿಕೊಂಡಿದ್ದ ಈತ ಬೇಲೂರು ಯುವ ಜೆಡಿಎಸ್ ಅಧ್ಯಕ್ಷನೂ ಆಗಿದ್ದ. 2019ರಲ್ಲಿ ನವೀನ್ ಕಾಂಗ್ರೆಸ್ ಸೇರಿದ್ದರೆ, 2020ರಲ್ಲಿ ಚೇತನ್ ‘ಕೈ’ ಹಿಡಿದಿದ್ದ. ಈ ಇಬ್ಬರ ಜತೆ ಹರೀಶ್ ಕೂಡ ಪ್ರಜ್ವಲ್ ರೇವಣ್ಣ ಕಾರು ಚಾಲಕ ಕಾರ್ತಿಕ್ ಜತೆ ಆತ್ಮೀಯತೆ ಹೊಂದಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೊ ಇರೋದಾಗಿ ದೇವರಾಜೇಗೌಡ ಸುದ್ದಿಗೊಷ್ಠಿ ನಡೆಸಿ ಆರೋಪಿಸಿದ ಬಳಿಕ ಚೇತನ್, ನವೀನ್ ಹಾಗೂ ಹರೀಶ್ ಸೇರಿಕೊಂಡು ಕಾರ್ತಿಕ್ ಸಂಪರ್ಕ ಮಾಡಿದ್ದರು. ಆ ಬಳಿಕ ಪೆನ್ಡ್ರೈವ್ ಖರೀದಿಸಿ ಅದರಲ್ಲಿ ಅಶ್ಲೀಲ ವಿಡಿಯೊಗಳನ್ನು ತುಂಬಿ ಜೆಡಿಎಸ್ನ ಮಾಜಿ ಕಾರ್ಯಕರ್ತರೇ ಹಂಚಿಕೆ ಮಾಡಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಮತ್ತೊಂದೆಡೆ ಈ ಪ್ರಕರಣದಲ್ಲಿ, ಶಾಸಕ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್ ಅವರ ಆಪ್ತರಿಗೆ ದೊಡ್ಡ ಮಟ್ಟದ ರಿಲೀಫ್ ಸಿಕ್ಕಿದೆ. ಪ್ರೀತಂ ಗೌಡ ಆಪ್ತರಾದ ಶರತ್ ಮತ್ತು ಕಿರಣ್, ಹಾಗೆಯೇ ಶ್ರೇಯಸ್ ಪಟೇಲ್ ಆಪ್ತರಾಗಿರುವ ಪುಟ್ಟರಾಜು ಅವರಿಗೆ ಆರೋಪಗಳಿಂದ ಮುಕ್ತಿ ದೊರೆತಿದೆ. ಇವರು ಅಶ್ಲೀಲ ಪೆನ್ ಡ್ರೈವ್ ವಿಡಿಯೊಗಳ ಹಂಚಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ, ತನಿಖೆಯಲ್ಲಿ ಇವರು ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದು ದೃಢಪಟ್ಟಿರೋದಾಗಿ ಎಸ್ಐಟಿ ಉಲ್ಲೇಖಿಸಿದೆ.