ಹಾವೇರಿ, ಡಿ.13: ನಟ ಝೈದ್ ಖಾನ್ (Actor Zaid Khan) ಅಭಿನಯದ 'ಕಲ್ಟ್ʼ (Cult Movie) ಸಿನಿಮಾ ಜನವರಿ 23ರಂದು ತೆರೆಗೆ ಬರಲು ಸಜ್ಜಾಗಿದೆ. ಸದ್ಯ ಚಿತ್ರ ತಂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಈ ನಡುವೆ ನಟ ದರ್ಶನ್ ಬಗ್ಗೆ ಝೈದ್ ಖಾನ್ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ಜನವರಿಯಲ್ಲಿ ನಟ ದರ್ಶನ್ಗೆ ಜಾಮೀನು ಸಿಕ್ಕೆ ಸಿಗುತ್ತದೆ. ಜನವರಿ 23ರೊಳಗೆ ಜಾಮೀನು ಸಿಗದಿದ್ದರೆ, ಜೈಲಿಗೆ ಹೋಗಿ ದರ್ಶನ ಅಣ್ಣನ ಆಶೀರ್ವಾದ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.
ಹಾವೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಟ ಝೈದ್ ಖಾನ್ ಮಾತನಾಡಿದ್ದಾರೆ. ನೋವಿನಲ್ಲೂ ಅಭಿಮಾನಿಗಳಿಗೆ ಸಕ್ಸಸ್ ಸಿನಿಮಾ ಕೊಡುವುದು ಹೇಗೆ?, ಕಥೆ ಹೇಗಾದರೂ ಇರಲಿ, ದರ್ಶನ್ ಎಂಬ ಹೆಸರಿನಿಂದ ಸಿನಿಮಾ ಸಕ್ಸಸ್ ಆಗಿಯೇ ಆಗುತ್ತದೆ. ಇವೆರಡನ್ನು ನಾನು ಡೆವಿಲ್ ನೋಡಿ ಕಲಿತುಕೊಂಡೆ. ಸಿನಿಮಾ ತುಂಬಾ ಚೆನ್ನಾಗಿದೆ ಎಂದು ಹೇಳಿದರು.
ಸಚಿವ ಜಮೀರ್ ಅಹ್ಮದ್ ಅವರ ಕಾಂಟ್ರವರ್ಸಿಗಳು ನಿಮ್ಮ ಸಿನಿಮಾಗೆ ಎಫೆಕ್ಟ್ ಆಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಖಂಡಿತ ಎಫೆಕ್ಟ್ ಆಗಿದೆ. ನನ್ನ ಹಿಂದಿನ ಸಿನಿಮಾ ಮೇಲೆ ಅವರ ರಾಜಕೀಯದ ಬೆಳವಣಿಗಯಿಂದ ಪರಿಣಾಮ ಉಂಟಾಗಿತ್ತು. ಅವರ ಕಾಂಟ್ರವರ್ಸಿಗಳಿಂದ ನನ್ನ ಸಿನಿಮಾ ಬಾಯ್ಕಾಟ್ ಮಾಡಿದ್ದರು. ಮನಸಲ್ಲಿ ಕೆಲವು ಮಾತುಗಳು ಇವೆ. ಅವುಗಳನ್ನು ಬಾಯಲ್ಲಿ ಈಗ ಹೇಳಲು ಆಗಲ್ಲ. ಚಿತ್ರ ಗೆದ್ದ ಮೇಲೆ ಹೇಳಿದರೆ ಅದಕ್ಕೆ ತೂಕ ಇರುತ್ತದೆ. ಹೀಗಾಗಿ ಗೆದ್ದಾದ ಬಳಿಕ ಎಲ್ಲಾ ಹೇಳುತ್ತೇನೆ ಎನ್ನುವ ಮೂಲಕ ಸಚಿವ ಜಮೀರ್ ಅಹ್ಮದ್ ಖಾನ್ ವಿರೋಧಿಗಳಿಗೆ ತಿರುಗೇಟು ನೀಡಿದರು.
ಪೈರಸಿ ಕಾಟ ತಡೆಯಲು ಕಾಯ್ದೆ ರೂಪಿಸಬೇಕಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಾಡಲಿ ಬಿಡಿ ಸಂತೋಷ. ಬೇಡ ಎಂದರೆ ಬಿಡ್ತಾರಾ?, ಅವರ ಕರ್ತವ್ಯ ಅವರು ಮಾಡಲಿ ಬಿಡಿ. ಆದರೆ ಅಪ್ಪಿತಪ್ಪಿ ಸಿಕ್ಕಿಹಾಕಿಕೊಂಡರೆ ನಾವು ಬಿಡಲ್ಲ. ಆದ್ದರಿಂದ ಹುಷಾರಾಗಿ ಇರಿ ಎಂದು ಪೈರಸಿ ಮಾಡೋರಿಗೆ ಎಚ್ಚರಿಕೆ ನೀಡಿದರು.
ಜನವರಿ 23ರಂದು ಬಿಡುಗಡೆ
ಕೆ.ವಿ.ಎನ್. ಪ್ರೊಡಕ್ಷನ್ಸ್ ಅರ್ಪಿಸುವ, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಬಹು ನಿರೀಕ್ಷಿತ ʼಕಲ್ಟ್ʼ ಚಿತ್ರದ ರಚನೆ ಹಾಗೂ ನಿರ್ದೇಶನ ಅನಿಲ್ ಕುಮಾರ್ ಅವರದು. ಜೆ.ಎಸ್. ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಈ ಸಿನಿಮಾ ಜನವರಿ 23ಕ್ಕೆ ಬಿಡುಗಡೆಯಾಗಲು ಸಿದ್ಧವಾಗಿದೆ.
ಅಖಂಡ 2 ಅಬ್ಬರ ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?
ʼಬನಾರಸ್ʼ ಚಿತ್ರದ ನಂತರ ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ʼಉಪಾಧ್ಯಕ್ಷʼ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ʼಕಲ್ಟ್ʼ ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ನಟಿ ರಚಿತರಾಮ್ ಹಾಗೂ ಮಲೈಕ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.