ಹಾವೇರಿ: ಫೀಸ್ ಕಟ್ಟಿಲ್ಲ ಎಂದು ದ್ವಿತೀಯ ಪಿಯುಸಿ ಪರೀಕ್ಷೆ (Second PUC exam 2026) ಬರೆಯಲು ವಿದ್ಯಾರ್ಥಿನಿಗೆ ಹಾಲ್ಟಿಕೆಟ್ ನೀಡದೆ ಸತಾಯಿಸಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರಿನ ಬಿಎಜೆಎಸ್ಎಸ್ ಕಾಲೇಜಿನಲ್ಲಿ ನಡೆದಿದೆ. ಸಾರಾ ಜೆಸ್ಸಿಕಾ ಎಂಬ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಬಿಎಜೆಎಸ್ಎಸ್ ಕಾಲೇಜಿಗೆ ಬಂದಿದ್ದಳು. ಈ ವೇಳೆ ಶಿಕ್ಷಕಿ ಸುನೀತಾ ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿನಿಯನ್ನು ಪರೀಕ್ಷಾ ಕೊಠಡಿಗೆ ಬಿಡದೇ ಸತಾಯಿಸಿದ್ದಾರೆ.
30 ಸಾವಿರ ರೂ. ಶುಲ್ಕ ಕಟ್ಟಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಹಾಲ್ ಟಿಕೆಟ್ ನೀಡಿಲ್ಲ. ಆದರೆ, ವಿದ್ಯಾರ್ಥಿನಿ ಇಂದು ಕನ್ನಡ ಪರೀಕ್ಷೆ ಬರೆಯಲು ಬಂದ ವೇಳೆ ವಿದ್ಯಾರ್ಥಿನಿ ಸಾರಾಳನ್ನು ಶಿಕ್ಷಕಿ ತಡೆದು, ಎಲ್ಲಾ ಕಾಲೇಜಿನವರೂ ಪುಕ್ಸಟ್ಟೆ ಕಲಿಸ್ತಾರಾ? ಎಂದಿದ್ದಾರೆ. ವಿದ್ಯಾರ್ಥಿನಿ ಎಷ್ಟೇ ಬೇಡಿಕೊಂಡರೂ ಹಾಲ್ಟಿಕೆಟ್ ನೀಡಿಲ್ಲ.
ಈ ವೇಳೆ ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಸ್ಥಳಕ್ಕೆ ಆಗಮಿಸಿ, ವಿದ್ಯಾರ್ಥಿನಿ ಭವಿಷ್ಯ ಹಾಳು ಮಾಡ್ತಿದ್ದೀರಿ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಬೈಕ್ ಅಡಮಾನ ಇಟ್ಟುಕೊಂಡು ನಂತರ ಹಾಲ್ ಟಿಕೆಟ್ ನೀಡಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬೆನ್ನಲ್ಲೇ ಈ ಕುರಿತು ಕಾರಣ ಕೇಳಿ ನೋಟಿಸ್ ಕೊಡುವುದಾಗಿ ರಾಣೇಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ್ ಅಡಿಗ ಅವರು ತಿಳಿಸಿದ್ದಾರೆ.
ಪರೀಕ್ಷೆ ಕೇಂದ್ರ ತಪ್ಪಾಗಿ ಮುದ್ರಣ; ವಿದ್ಯಾರ್ಥಿಗಳ ಅಲೆದಾಟ
ಯಾದಗಿರಿ: ಇಂದಿನಿಂದ ರಾಜ್ಯದಲ್ಲಿ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 20 ಪರೀಕ್ಷೆ ಕೇಂದ್ರಗಳಲ್ಲಿ ಪಿಯು ಪರೀಕ್ಷೆ ನಡೆಯುತ್ತಿದೆ. 11,760 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರಗೆ ಪರೀಕ್ಷೆ ನಡೆಯಿತು.
ಇಂದು ಕನ್ನಡ ಹಾಗೂ ಅರೇಬಿಕ್ ವಿಷಯದ ಪರೀಕ್ಷೆ ನಡೆದಿದ್ದು, ಪರೀಕ್ಷೆ ವೇಳೆ ಪಿಯು ಬೋರ್ಡ್ನಿಂದ ಮಹಾ ಎಡವಟ್ಟೊಂದಾಗಿದೆ. ಪರೀಕ್ಷೆ ಕೇಂದ್ರದ ವಿಳಾಸವನ್ನೇ ಬದಲಾಯಿಸಲಾಗಿದೆ. ಹಾಲ್ ಟಿಕೆಟ್ನಲ್ಲಿ ಪರೀಕ್ಷೆ ಕೇಂದ್ರದ ವಿಳಾಸದ ತಪ್ಪು ಮಾಹಿತಿ ಮುದ್ರಣವಾಗಿದ್ದರಿಂದ ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರ ಹುಡುಕಲು ಅಲೆದಾಡುವಂತಾಯಿತು.
ಯಾದಗಿರಿ ನಗರದ ಸಬಾ ಪಿಯು ಕಾಲೇಜು ಪರೀಕ್ಷೆ ಕೇಂದ್ರದ ವಿಳಾಸ ತಪ್ಪಾಗಿ ಮುದ್ರಣವಾಗಿದೆ. ಯಾದಗಿರಿಯ ಲುಂಬಿನಿ ಗಾರ್ಡನ್ ಸಮೀಪ ಇರುವ ಪರೀಕ್ಷೆ ಕೇಂದ್ರವಾದ ಸಬಾ ಪಿಯು ಕಾಲೇಜು ವಿಳಾಸವನ್ನು ಹಾಲ್ ಟಿಕೆಟ್ನಲ್ಲಿ ಕಾಲೇಜಿನ (ಕೇಂದ್ರ) ವಿಳಾಸ ಎರಡು ಕಿಮೀ ದೂರದ ಗಂಜ್ ರಸ್ತೆ ಎಂದು ನಮೂದಿಸಲಾಗಿದೆ. ಗಂಜ್ ರಸ್ತೆ ಮಾರ್ಗದಲ್ಲಿ ಪರೀಕ್ಷೆ ಕೇಂದ್ರ ಇಲ್ಲ, ಆದರೆ, ತಪ್ಪು ಮಾಹಿತಿ ಮುದ್ರಣವಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಗಂಜ್ ಪ್ರದೇಶದಲ್ಲಿ ಪರೀಕ್ಷೆ ಕೇಂದ್ರ ಹುಡುಕಿ ಸ್ಥಳೀಯರಿಂದ, ವಿಳಾಸ ಕೇಳಿ ಸಬಾ ಪರೀಕ್ಷೆ ಕೇಂದ್ರದತ್ತ ವಿದ್ಯಾರ್ಥಿಗಳು ಆಗಮಿಸಿ ಪರೀಕ್ಷೆಗೆ ಹಾಜರಾದ ಘಟನೆ ನಡೆದಿದೆ. ಕೆಲವರಿಗೆ ಪರೀಕ್ಷೆ ಕೇಂದ್ರ ಸಿಗದೇ ಪರೀಕ್ಷೆಯಿಂದ ಮಿಸ್ ಆಗುವ ಸಾಧ್ಯತೆ ಹೆಚ್ಚಾಗಿತ್ತು, ಆದರೆ ಸ್ಥಳಿಯರ ಸಹಾಯದಿಂದ ಸಬಾ ಕಾಲೇಜಿನ ದಾರಿ ಸಿಕ್ಕಂತಾಗಿದೆ.
ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ
ಪಿಯು ಬೋರ್ಡ್ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪರೀಕ್ಷೆ ಕೇಂದ್ರ ಹುಡುಕಿ ಅಲೆದಾಡುತ್ತಿದ್ದೇವೆ, ಓದಿದ್ದು ಮರೆತು ಹೋಗುತ್ತಿದೆ ಎಂದು ವಿದ್ಯಾರ್ಥಿ ಮಶೇಪ್ಪ ಹೇಳಿದ್ದಾನೆ.