Operation sindoor: ರಜೆಗೆ ಬಂದಿದ್ದ ಹಾವೇರಿಯ ಇಬ್ಬರು ಯೋಧರು ಮರಳಿ ಕರ್ತವ್ಯಕ್ಕೆ
Operation sindoor: ಪಹಲ್ಗಾಮ್ ದಾಳಿ ಪ್ರತೀಕಾರವಾಗಿ ಉಗ್ರರ ನಿಗ್ರಹಕ್ಕೆ ಭಾರತೀಯ ಸೇನೆ, ಅಪರೇಷನ್ ಸಿಂದೂರ ಕಾರ್ಯಚರಣೆ ಕೈಗೊಂಡಿದೆ. ಹೀಗಾಗಿ ಭಾರತೀಯ ಸೇನೆಯಿಂದ ಕರೆಬಂದ ಹಿನ್ನಲೆಯಲ್ಲಿ ಹಾವೇರಿ ನಗರದ ಬಿಎಸ್ಎಫ್ ಯೋಧ ಶಶಾಂಕ್ ಹಾಗೂ ಸಿಆರ್ಪಿಎಫ್ ಯೋಧ ಸಂಜೀವ ಸಂಗೂರ ಕರ್ತವ್ಯಕ್ಕೆ ಮರಳಿದ್ದಾರೆ.


ಹಾವೇರಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ವ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಜೆಯ ಮೇಲೆ ತೆರಳಿದ್ದ ಯೋಧರಿಗೆ ಕರ್ತವ್ಯಕ್ಕೆ ಮರು ಹಾಜರಾಗುವಂತೆ ಭಾರತೀಯ ಸೇನೆಯಿಂದ ಸೂಚನೆ ಬಂದಿದೆ. ಹೀಗಾಗಿ ಹಾವೇರಿ ನಗರದ ಇಬ್ಬರು ಯೋಧರು ಕರ್ತವ್ಯಕ್ಕೆ ಹಾಜರಾಗಲು ಶನಿವಾರ ಸಂಜೆ ಪ್ರಯಾಣ ಬೆಳೆಸಿದರು. ಕುಟುಂಬಸ್ಥರು ಹಾಗೂ ಸ್ಥಳೀಯರು ಯೋಧರನ್ನು ಸನ್ಮಾನಿಸುವ ಮೂಲಕ ರೈಲು ನಿಲ್ದಾಣದಲ್ಲಿ ಬೀಳ್ಕೊಟ್ಟರು.
ಪಹಲ್ಗಾಮ್ ದಾಳಿ ಪ್ರತೀಕಾರವಾಗಿ ಉಗ್ರರ ನಿಗ್ರಹಕ್ಕೆ ಭಾರತೀಯ ಸೇನೆ, ಅಪರೇಷನ್ ಸಿಂದೂರ ಕಾರ್ಯಚರಣೆ ಕೈಗೊಂಡಿದೆ. ಹೀಗಾಗಿ ಭಾರತೀಯ ಸೇನೆಯಿಂದ ಕರೆಬಂದ ಹಿನ್ನಲೆಯಲ್ಲಿ ಹಾವೇರಿ ನಗರದ ಬಿಎಸ್ಎಫ್ ಯೋಧ ಶಶಾಂಕ್ ಹಾಗೂ ಸಿಆರ್ಪಿಎಫ್ ಯೋಧ ಸಂಜೀವ ಸಂಗೂರ ಕರ್ತವ್ಯಕ್ಕೆ ಹಾಜರಾಗಲು ಶನಿವಾರ ಸಂಜೆ ಪ್ರಯಾಣ ಬೆಳೆಸಿದರು.
ಕಳೆದ ಕೆಲ ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶತ್ರು ರಾಷ್ಟ್ರವನ್ನು ಹಿಮ್ಮೆಟ್ಟಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಹೊಣೆಯಾಗಿದೆ. ಈ ಹಿನ್ನೆಲೆ ಭಾರತೀಯ ಸೇನೆಯು ರಜೆಯಲ್ಲಿರುವ ಸೈನಿಕರಿಗೆ ತುರ್ತಾಗಿ ಅಪರೇಷನ್ ಸಿಂದೂರ ಕಾರ್ಯಾಚರಣೆಯ ಕರ್ತವ್ಯಕ್ಕೆ ಹಾಜರಾಗುವಂತೆ ಸಂದೇಶ ಬಂದಿದ್ದರಿಂದ, ಹಾವೇರಿಯ ಸೈನಿಕರು ಕರ್ತವ್ಯಕ್ಕೆ ಹಾಜರಾಗಲು ಪ್ರಯಾಣ ಬೆಳೆಸಿದರು.
ನಗರದ ಇಬ್ಬರು ಯೋಧರಿಗೆ ಶನಿವಾರ ಸಂಜೆ ಹಾವೇರಿಯ ಮೈಲಾರ ಮಹದೇವಪ್ಪ ರೈಲು ನಿಲ್ದಾಣದಲ್ಲಿ ಕುಟುಂಬಸ್ಥರು, ಆಪ್ತರು, ಸ್ಥಳೀಯರು ಸನ್ಮಾನಿಸಿ, ಆತ್ಮಸ್ಥೆರ್ಯ ತುಂಬಿ ಬೀಳ್ಕೊಟ್ಟರು.
7 ದಿನದ ಮಗು, ಬಾಣಂತಿ ಹೆಂಡತಿಯನ್ನು ಬಿಟ್ಟು ದೇಶ ಸೇವೆಗೆ ತೆರಳಿದ ಕಲಬುರಗಿ ಯೋಧ!

ಕಲಬುರಗಿ: ಭಾರತ ಮತ್ತು ಪಾಕ್ ನಡುವೆ ಯುದ್ಧದ (Operation Sindoor) ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ರಜೆಯಲ್ಲಿದ್ದ ಸೈನಿಕರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಭಾರತೀಯ ಸೇನೆ ಬುಲಾವ್ ನೀಡಿದೆ. ಹೀಗಾಗಿ ವಿವಿಧ ಕಾರಣಗಳಿಗಾಗಿ ರಜೆ ಪಡೆದಿದ್ದ ಯೋಧರು ದೇಶ ರಕ್ಷಣೆಯ ಸೇವೆಗೆ ಮರಳುತ್ತಿದ್ದಾರೆ. ಈ ನಡುವೆ ಹೆಂಡತಿ ಹೆರಿಗೆ ಹಿನ್ನೆಲೆ ಊರಿಗೆ ಬಂದಿದ್ದ ಕಲಬುರಗಿ ಮೂಲದ ಸಿಆರ್ಪಿಎಫ್ ಯೋಧ ಹಣಮಂತರಾಯ್ ಔಸೆ ಅವರು, 7 ದಿನದ ಮಗು ಹಾಗೂ ಬಾಣಂತಿ ಪತ್ನಿಯನ್ನು ಬಿಟ್ಟು ವಾಪಸ್ ಸೇವೆಗೆ ತೆರಳಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಧುತ್ತರಗಾವ್ ಗ್ರಾಮದ ಯೋಧ ಹಣಮಂತರಾಯ್ ಅವರು ಕಳೆದ 20 ವರ್ಷಗಳಿಂದ ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಜಮ್ಮುವಿನ ಶ್ರೀನಗರದಲ್ಲಿ ನಿಯೋಜಿತರಾಗಿದ್ದಾರೆ. ಏಪ್ರಿಲ್ 25ರಂದು ರಜೆ ಪಡೆದು ತಮ್ಮ ತವರಿಗೆ ಬಂದಿದ್ದ ಅವರು, ಹೆಂಡತಿ ಹಾಗೂ ಹೊಸತಾಗಿ ಜನಿಸಿದ ಮಗುವಿನೊಂದಿಗೆ ಕೆಲವು ದಿನಗಳನ್ನು ಕಳೆಯುವ ನಿರೀಕ್ಷೆಯಲ್ಲಿ ಇದ್ದರು.
ವಾರದ ಹಿಂದಷ್ಟೇ ಹಣಮಂತರಾಯ್ ಅವರ ಪತ್ನಿಗೆ ಗಂಡು ಮಗು ಜನನವಾಗಿತ್ತು. ರಜೆ ಅವಧಿಯಲ್ಲಿ ಕೇವಲ 15 ದಿನ ಕಳೆದಿತ್ತು. ಭಾರತೀಯ ಸೇನೆ ತುರ್ತು ಸೇವೆಗೆ ಆಗಮಿಸುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ದೇಶ ಸೇವೆಗೆ ಯೋಧ ಮರಳುತ್ತಿದ್ದಾರೆ. ನನಗೆ ಮಗು, ಮನೆ, ಕುಟುಂಬಕ್ಕಿಂತ ದೇಶ ಮುಖ್ಯ. ನಾನು ಸೇನೆಗೆ ಸೇರುವ ಮುನ್ನ ನನಗೆ ಇದೇ ವೇದವಾಕ್ಯ. ಹಾಗಾಗಿ ದೇಶ ಸೇವೆಗಾಗಿ ತೆರಳುತ್ತಿದ್ದೇನೆ ಎಂದು ಯೋಧ ಹಣಮಂತರಾಯ್ ಹೇಳಿದ್ದಾರೆ. ಇವರ ಪತ್ನಿ ಸ್ನೇಹಾ ಕೂಡ ನನ್ನ ಗಂಡ ನಮಗೆ ಈ ಸ್ಥಿತಿಯಲ್ಲಿ ಬಿಟ್ಟು ಹೋಗುತ್ತಿರುವ ಬಗ್ಗೆ ಬೇಜಾರಿಲ್ಲ. ನನಗೆ ನನ್ನ ಗಂಡನ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Operation Sindoor : ʼಕಾಶ್ಮೀರದಲ್ಲಿ ನನ್ನ ತಂದೆಯನ್ನು ಭಯೋತ್ಪಾದಕರು ಹತ್ಯೆ ಮಾಡಿದರುʼ; ಭಾವುಕ ಕ್ಷಣಗಳು ಹಂಚಿಕೊಂಡ ನಟಿ
ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ, ದೇಶ ಸೇವೆಯನ್ನು ಆದ್ಯತೆಯನ್ನಾಗಿ ಮಾಡಿಕೊಂಡ ಯೋಧ ಹಣಮಂತರಾಯ್ ಅವರು ತಕ್ಷಣವೇ ಕರ್ತವ್ಯಕ್ಕೆ ತೆರಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹೈದರಾಬಾದ್ ಮೂಲಕ ಜಮ್ಮುವಿಗೆ ತೆರಳುತ್ತಿರುವ ಯೋಧನನ್ನು ಕಲಬುರಗಿ ರೈಲು ನಿಲ್ದಾಣದಲ್ಲಿ ಕುಟುಂಬಸ್ಥರು ಕಣ್ತುಂಬಾ ನೋಡುತ್ತಾ ಬೀಳ್ಕೊಟ್ಟಿದ್ದಾರೆ.
ಹಣಮಂತರಾಯ್ ಔಸೆ ಅವರು ವಾರದ ಹಿಂದಷ್ಟೇ ಜನಿಸಿದ ಮಗು ಹಾಗೂ ಇನ್ನಿಬ್ಬರು ಮಕ್ಕಳಿಗೆ ಸಿಹಿ ಮುತ್ತು ಕೊಟ್ಟು ಜಮ್ಮುವಿಗೆ ತೆರಳಿದ್ದಾರೆ. ಬಾಣಂತಿ ಪತ್ನಿ ಸ್ನೇಹಾ ಅವರು ಪತಿಗೆ ಭಾರವಾದ ಮನಸ್ಸಿನೊಂದಿಗೆ ನಗುತ್ತಲೇ ಕಳುಹಿಸಿಕೊಟ್ಟಿದ್ದಾರೆ. ಕಾಶ್ಮೀರಕ್ಕೆ ತೆರಳಿದ ಯೋಧನಿಗೆ ಸ್ನೇಹಿತರ ಬಳಗ ಸತ್ಕರಿಸಿ ಶುಭ ಹಾರೈಸಿ ಕಳುಹಿಸಿಕೊಟ್ಟಿದೆ.
‘ಕುಟುಂಬಕ್ಕಿಂತ ದೇಶ ಸೇವೆ ಮುಖ್ಯ’ ಎಂಬ ಧೋರಣೆಯೊಂದಿಗೆ ಯೋಧ ಮತ್ತೆ ಕರ್ತವ್ಯಕ್ಕೆ ಮರಳುತ್ತಿರುವುದು ಎಲ್ಲರಿಗೂ ಮಾದರಿ ಎನಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಯೋಧನ ಧೈರ್ಯ ಮತ್ತು ಬದ್ಧತೆಯು ಪ್ರಶಂಸೆ ಪಡೆಯುತ್ತಿದೆ.