ಕಲಬುರಗಿ, ಮಾ.27: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಶುಕ್ರವಾರ ಕಲಬುರಗಿಯಲ್ಲಿ (Kalaburagi News) ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು. ಪ್ರತಿಭಟನೆಯಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿದ ಪ್ರತಿಭಟನಾಕಾರರು, "ನಮಗೆ ಬಿಟ್ಟಿ ಭಾಗ್ಯಗಳ ಭಿಕ್ಷೆ ಬೇಡ, ಗೌರವಯುತ ಬದುಕಿಗೆ ಉದ್ಯೋಗ ನೀಡಿ" ಎಂದು ಘೋಷಣೆ ಕೂಗಿ, ಆಗ್ರಹಿಸಿದರು.
38 ಡಿಗ್ರಿ ಸೆ. ಸುಡುವ ಬಿಸಿಲನ್ನೂ ಲೆಕ್ಕಿಸದೆ ಬೀದಿಗಿಳಿದ ಯುವಕರು, ಕೆಪಿಎಸ್ಸಿ ಹಗರಣದ ಸಿಬಿಐ ತನಿಖೆಗೆ ಹಾಗೂ ಖಾಲಿ ಇರುವ 2.84 ಲಕ್ಷ ಹುದ್ದೆಗಳ ತಕ್ಷಣದ ಭರ್ತಿಗೆ ಆಗ್ರಹಿಸಿದರು. ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸರ್ಕಾರ ವಚನ ಭ್ರಷ್ಟವಾಗಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಮುಖಂಡ ಕಾಂತಕುಮಾರ್ ಮಾತನಾಡಿದರು. 15 ದಿನಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಬೀಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆಯ ವೇಳೆ ಎಚ್ಚರಿಸಿದರು.
ಶಾಲೆಗಳಲ್ಲಿ ʼವಂದೇ ಮಾತರಂʼ 6 ಚರಣ ಹಾಡುವುದು ಕಡ್ಡಾಯ ಆದೇಶ ವಿರೋಧಿಸಿ ಅರ್ಜಿ; ಹೈಕೋರ್ಟ್ ಹೇಳಿದ್ದೇನು?
ಪ್ರತಿಭಟನೆಯಲ್ಲಿ ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ, ಪಾಳದ ಗುರುಮೂರ್ತಿ ಶಿವಾಚಾರ್ಯರು, ಬಿಜೆಪಿ ಮುಖಂಡ ಚಂದು ಪಾಟೀಲ್, ಸಿದ್ದರಾಮಯ್ಯ ಹಿರೇಮಠ್, ಎಂ.ಎಸ್. ಪಾಟೀಲ್ ನರಿಬೋಳ್, ಹಣಮಂತ ಶೇರಿ, ಮಲ್ಲಿಕಾರ್ಜುನ ಸಾರವಾಡ್, ಶಿವು ಅಷ್ಟಗಿ, ಗುರುಶಾಂತ್ ಟೆಂಗಳಿ, ಸಚಿನ್ ಕಡಗಂಚಿ, ಲಕ್ಷ್ಮಿಕಾಂತ್ ಪೂಜಾರಿ ಸೇರಿದಂತೆ ಸಾವಿರಾರು ಉದ್ಯೋಗಾಕಾಂಕ್ಷಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.