N. Ravikumar: ಡಿಸಿ ಬಗ್ಗೆ ಅವಹೇಳನಕಾರಿ ಹೇಳಿಕೆ; ಎಂಎಲ್ಸಿ ಎನ್.ರವಿಕುಮಾರ್ ವಿಚಾರಣೆಗೆ ಹಾಜರು
N. Ravikumar: ಹೈಕೋರ್ಟ್ ಸೂಚನೆ ಮೇರೆಗೆ ಎನ್.ರವಿಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ದಕ್ಷಿಣ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಜಿಲ್ಲಾಧಿಕಾರಿಗಳು ಪಾಕಿಸ್ತಾನದಿಂದ ಬಂದಿರಬಹುದು ಎಂದು ಹೇಳಿಕೆ ನೀಡಿದ್ದ ಹಿನ್ನೆಲೆ ಬಿಜೆಪಿ ಎಂಎಲ್ಸಿ ವಿರುದ್ಧ ಕೇಸ್ ದಾಖಲಾಗಿತ್ತು.


ಕಲಬುರಗಿ: ಜಿಲ್ಲಾಧಿಕಾರಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಅವರು ಸೋಮವಾರ ನಗರದ ದಕ್ಷಿಣ ಎಸಿಪಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಜಿಲ್ಲಾಧಿಕಾರಿಗಳು ಪಾಕಿಸ್ತಾನದಿಂದ ಬಂದಿರಬಹುದು ಎಂದು ಹೇಳಿಕೆ ನೀಡಿದ್ದ ಎನ್.ರವಿಕುಮಾರ್, ಪೊಲೀಸ್ ಅಧಿಕಾರಿಗಳ ವಿರುದ್ಧ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೂಡ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಅಲ್ಲದೆ ಜಾತಿ ನಿಂದನೆ ಮಾಡಿದ ಆರೋಪ ಹಿನ್ನೆಲೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿತ್ತು.

ಹೈಕೋರ್ಟ್ ಸೂಚನೆ ಮೇರೆಗೆ ಎನ್.ರವಿಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ದಕ್ಷಿಣ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆಗೂ ಮುನ್ನ ಪ್ರತಿಕ್ರಿಯಿಸಿದ ಎನ್.ರವಿಕುಮಾರ್, ವಿಚಾರಣೆಗೆ ಬಂದಿದ್ದೇನೆ, ವಿಚಾರಣಾಧಿಕಾರಿ ಮುಂದೆ ಹಾಜಾರಾಗುತ್ತೇನೆ. ವಿಚಾರಣೆಯ ಬಳಿಕ ಆ ಪ್ರಕರಣದ ಸಂಬಂಧ ಮಾತಾಡುತ್ತೇನೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Bank Robbery: ಮನಗೂಳಿ ಕೆನರಾ ಬ್ಯಾಂಕ್ನಲ್ಲಿ 53 ಕೋಟಿ ಮೌಲ್ಯದ ಚಿನ್ನಾಭರಣ ಕಳವು; ತನಿಖೆಗೆ 8 ತಂಡ ರಚನೆ
ಮನಗೂಳಿ ಕೆನರಾ ಬ್ಯಾಂಕ್ನಲ್ಲಿ 53 ಕೋಟಿ ಮೌಲ್ಯದ ಚಿನ್ನಾಭರಣ ಕಳವು; ತನಿಖೆಗೆ 8 ತಂಡ ರಚನೆ

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ಭಾರಿ ದರೋಡೆ (Bank Robbery) ನಡೆದಿದ್ದು, 58 ಕೆಜಿ 975 ಗ್ರಾಂ ಚಿನ್ನಾಭರಣ, 5.20 ಲಕ್ಷ ನಗದು ಕಳವಾಗಿದೆ. ಮೇ 25 ರಂದು ಬ್ಯಾಂಕ್ನಲ್ಲಿ ಅಂದಾಜು 53 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. 6 ರಿಂದ 8 ಕಳ್ಳರು ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇನ್ನೂ ಖದೀಮರ ಸುಳಿವು ಪತ್ತೆಯಾಗಿಲ್ಲ.
ಎರಡು ದಿನಗಳ ಕಾಲ ಹೊಂಚು ಹಾಕಿ ಕಳ್ಳತನ ಮಾಡಲಾಗಿದ್ದು, ಕಳ್ಳರು ಪಕ್ಕಾ ಮಾಸ್ಟರ್ ಪ್ಲ್ಯಾನ್ ಮಾಡಿಯೇ ಕೈಚಳಕ ತೋರಿದ್ದಾರೆ. ಲಾಕರ್ ತೆಗೆಯಲು ನಕಲಿ ಕೀ ಬಳಕೆ ಮಾಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಪ್ರವೇಶ ದ್ವಾರದ ಬೀಗ ಒಡೆದು ಬ್ಯಾಂಕ್ ಒಳಗೆ ನುಗ್ಗಿ, ಸೈರನ್ ಆಫ್ ಮಾಡಿ ಚಿನ್ನಾಭರಣ ಇಟ್ಟಿದ್ದ ಒಂದು ಲಾಕರ್ ಮಾತ್ರ ಓಪನ್ ಮಾಡಿ ಕದಿಯಲಾಗಿದೆ. ಮತ್ತೊಂದು ಲಾಕರ್ನಲ್ಲಿದ್ದ ಚಿನ್ನಾಭರಣಕ್ಕೆ ದುರುಳರು ಕೈ ಹಾಕಿಲ್ಲ.
ಕಳ್ಳತನದ ವೇಳೆ ಕಿಟಕಿ ಸರಳು ಮುರಿದಿದ್ದು, ಕಪ್ಪು ಬಣ್ಣದ ಬೊಂಬೆಗೆ ಪೂಜೆ ಮಾಡಿದ್ದಾರೆ. ತನಿಖೆ ದಾರಿ ತಪ್ಪಿಸಲು ವಾಮಾಚಾರ ಮಾಡಿದ್ದಾರೆಂದು ಬಿಂಬಿಸಲು ಕಳ್ಳರು ಈ ಪ್ಲ್ಯಾನ್ ಮಾಡಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪ್ರತಿಕ್ರಿಯಿಸಿ, ಮೇ 25ರಂದು ಬ್ಯಾಂಕ್ನಲ್ಲಿ ಕಳ್ಳತನ ಆಗಿದೆ ಎಂದು ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಕಲ್ಮೇಶ ಪೂಜಾರಿ ದೂರು ನೀಡಿದ್ದಾರೆ. ಹೀಗಾಗಿ ಕಳ್ಳರ ಪತ್ತೆಗೆ 8 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಪ್ರಕರಣದ ತನಿಖಾ ದೃಷ್ಟಿಯಿಂದ ಹೆಚ್ಚಿನ ಮಾಹಿತಿ ನೀಡಲ್ಲ ಎಂದು ತಿಳಿಸಿದ್ದಾರೆ.