ಕಲಬುರಗಿ, ಆ. 19: ಕೆಕೆಆರ್ಟಿಸಿ ಬಸ್ನಲ್ಲಿ ನಿರ್ವಾಹಕನ ಬದಲಿಗೆ ವಿದ್ಯಾರ್ಥಿಯೊಬ್ಬ ಪ್ರಯಾಣಿಕರಿಗೆ ಟಿಕೆಟ್ ವಿತರಿಸಿರುವ ಘಟನೆ ಕಲಬುರಗಿಯಲ್ಲಿ (Kalaburagi News) ನಡೆದಿದ್ದು, ಸಾರಿಗೆ ಸಂಸ್ಥೆಯ ಮತ್ತೊಂದು ಎಡವಟ್ಟು ಬೆಳಕಿಗೆ ಬಂದಿದೆ. ಕಲಬುರಗಿ ಸಿಟಿ ಬಸ್ ನಿಲ್ದಾಣದಿಂದ ಕಾಳಗಿಗೆ ತೆರಳುತ್ತಿದ್ದ KA-28 F-2066 ಸಂಖ್ಯೆಯ ಕೆಕೆಆರ್ಟಿಸಿ ಬಸ್ನಲ್ಲಿ ವಿದ್ಯಾರ್ಥಿಯೊಬ್ಬ ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಿರುವ ದೃಶ್ಯ ಪ್ರಯಾಣಿಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಸ್ ಕಾಳಗಿ ತಾಲೂಕಿನ ಡಿಪೋಗೆ ಸೇರಿದ್ದು, ನಿರ್ವಾಹಕ ಸಿದ್ದು ಬಿರಾದರ್ ಅವರ ಬದಲಿಗೆ ವಿದ್ಯಾರ್ಥಿ ಟಿಕೆಟ್ ಹಂಚಿಕೆ ಮಾಡುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.
ಸಾರ್ವಜನಿಕ ಸಾರಿಗೆ ಬಸ್ನಲ್ಲಿ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ವಿತರಿಸುವುದು ನಿರ್ವಾಹಕರ ಕರ್ತವ್ಯವಾಗಿರುವಾಗ, ವಿದ್ಯಾರ್ಥಿಯೊಬ್ಬರಿಗೆ ಈ ಕೆಲಸ ಮಾಡಲು ಅವಕಾಶ ನೀಡಿದ್ದು ಹೇಗೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಘಟನೆ ಕುರಿತು ಕೆಕೆಆರ್ಟಿಸಿ ಅಧಿಕಾರಿಗಳು ಪರಿಶೀಲನೆ ನಡೆಸಿ, ತಪ್ಪಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿ ಟಿಕೆಟ್ ವಿತರಿಸಿದ ದೃಶ್ಯ:
ಒಂದು ತಿಂಗಳ ಹಿಂದಷ್ಟೇ ಕೆಕೆಆರ್ಟಿಸಿ ಬಸ್ ಚಾಲಕನೊಬ್ಬ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ನಿರ್ವಾಹಕನ ಬದಲಿಗೆ ವಿದ್ಯಾರ್ಥಿಯಿಂದ ಟಿಕೆಟ್ ವಿತರಿಸಿರುವ ಘಟನೆ ಸಾರಿಗೆ ಸಂಸ್ಥೆಯ ಕಾರ್ಯವೈಖರಿ ಕುರಿತು ಮತ್ತೊಮ್ಮೆ ಪ್ರಶ್ನೆ ಮೂಡಿಸಿದೆ.
ಪ್ರಯಾಣಿಕರ ಸುರಕ್ಷತೆ ಹಾಗೂ ಸಾರಿಗೆ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಇಂತಹ ಯಡವಟ್ಟುಗಳು ಮರುಕಳಿಸದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.