ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)ಕ್ಕೆ ಸೇರಿದ ಬಸ್ವೊಂದನ್ನು ಹೆಡ್ಲೈಟ್ಗಳು ಕಾರ್ಯನಿರ್ವಹಿಸದ ಸ್ಥಿತಿಯಲ್ಲೇ ಚಲಾಯಿಸಿದ ಘಟನೆ ಬೆಳಕಿಗೆ ಬಂದಿದೆ. ಈ ವೇಳೆ, ಬಸ್ ನಿರ್ವಾಹಕ ಕೈಯಲ್ಲಿ (Viral Video) ಮೊಬೈಲ್ ಫೋನ್ ಹಿಡಿದು ಟಾರ್ಚ್ ಹಾಕುವ ದೃಶ್ಯ ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೊಗಳ ಬಳಿಕ ಪ್ರತಿಕ್ರಿಯಿಸಿರುವ ಸ್ಥಳೀಯ ಕೆಕೆಆರ್ಟಿಸಿ ಅಧಿಕಾರಿಗಳು, ಬಸ್ನ ಹೆಡ್ಲೈಟ್ ವೈರಿಂಗ್ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಈ ಸಮಸ್ಯೆ ಎದುರಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೂಲಗಳ ಪ್ರಕಾರ, ಕಲಬುರಗಿ-ಚಿಂಚೋಳಿ ಮಾರ್ಗದಲ್ಲಿ ರಾತ್ರಿ 7.30ಕ್ಕೆ ಕಲಬುರಗಿಯಿಂದ ಹೊರಡುವ ಏಂ-28 ಈ-1985 ಸಂಖ್ಯೆಯ ಕೆಕೆಆರ್ಟಿಸಿ ಬಸ್ ಇದಾಗಿದೆ. ಬಸ್ನಲ್ಲಿ ಹಲವು ಪ್ರಯಾಣಿಕರಿರುವುದೂ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಈ ಮಾರ್ಗದ ಬಸ್ನಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿದ್ದು, ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ, ಇದುವರೆಗೆ ದುರಸ್ತಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಲಬುರಗಿಯಿಂದ ಕಾಳಗಿವರೆಗೆ ಬಸ್ನ ಹೆಡ್ಲೈಟ್ ಮಂದವಾಗಿದ್ದರೂ, ಇತರೆ ವಾಹನಗಳ ಬೆಳಕು ಹಾಗೂ ಬೀದಿ ದೀಪಗಳ ನೆರವಿನಿಂದ ಬಸ್ ಸಂಚರಿಸಿತು. ಆದರೆ ಕಾಳಗಿಯಿಂದ ಮುಂದೆ ಹೆಡ್ಲೈಟ್ ಬೆಳಕು ಇನ್ನಷ್ಟು ಮಂದವಾದ ಕಾರಣ, ರಸ್ತೆ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಟ್ರಾಫಿಕ್ ಹಾಗೂ ಬೀದಿ ದೀಪಗಳ ಬೆಳಕು ಕೂಡ ಇಲ್ಲದ ಪರಿಸ್ಥಿತಿಯಲ್ಲಿ, ಅನಿವಾರ್ಯವಾಗಿ ಕಂಡಕ್ಟರ್ ಮೊಬೈಲ್ ಟಾರ್ಚ್ ಬಳಸಬೇಕಾಯಿತು.
'ಭಾರತೀಯರು ಮಾನಸಿಕವಾಗಿ ಬಡವರು’: ಬೆಂಗಳೂರಿನ ರೆಸ್ಟೊರೆಂಟ್ನಲ್ಲಿ ಫ್ರೀ ಊಟಕ್ಕೆ ಮುಗಿಬಿದ್ದ ಜನರ ವಿಡಿಯೋ ವೈರಲ್
ರಾತ್ರಿ 7.30ಕ್ಕೆ ಕಲಬುರಗಿಯಿಂದ ಹೊರಟ ಬಸ್ ತಡರಾತ್ರಿ ಚಿಂಚೋಳಿ ತಲುಪಿತು. ಬಸ್ಸಿನಲ್ಲಿ 8 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ಈ ಬಸ್ ಕಳೆದ ಮೂರು ದಿನಗಳಿಂದ ಇದೇ ಸ್ಥಿತಿಯಲ್ಲಿ ಓಡಿಸುತ್ತಿರುವುದು ಗೋಚರಿಸಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಯಾಣಿಕರು ಚಿತ್ರೀಕರಿಸಿದ ವಿಡಿಯೊಗಳು ವೈರಲ್ ಆದ ನಂತರ, ಈ ಭಾಗದಲ್ಲಿ ಸಂಚರಿಸುತ್ತಿರುವ ಶಿಥಿಲಾವಸ್ಥೆಯ ಬಸ್ಗಳ ಬಗ್ಗೆ ಸ್ಥಳೀಯರು ಹಾಗೂ ಹೋರಾಟಗಾರರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.