ಕೊಪ್ಪಳ, ಜ.28 : ರಾಜ್ಯದಲ್ಲಿ ಯುವಜನತೆಯಲ್ಲಿ ಹೃದಯಾಘಾತದಿಂದ (Heart Attack) ಸಂಭವಿಸುತ್ತಿರುವ ಸಾವಿನ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. 18 ವರ್ಷದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppala news) ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಕೊಕನೂರು ತಾಲೂಕಿನ ರ್ಯಾವಣಕಿ ಗ್ರಾಮದಲ್ಲಿ ಹೃದಯಾಘಾತದಿಂದ 18 ವರ್ಷದ ಯುವತಿ ಬಲಿಯಾದ ಘಟನೆ ನಡೆದಿದೆ. ಕಾವ್ಯಾ ಚಲವಾದಿ (18) ಕಳೆದ 2 ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಮಂಗಳವಾರ ಸಂಜೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಹೃದಯಾಘಾತದಿಂದ ಎಳೆಯ ಪ್ರಾಯದವರ ಸಾವಿನ ಪ್ರಮಾಣ ಮುಂದುವರಿದಿದೆ. ಒಂದು ತಿಂಗಳ ಹಿಂದೆ ಚಿಕ್ಕಮಗಳೂರಿನ ಶೃಂಗೇರಿ ತಾಲ್ಲೂಕಿನ 22 ವರ್ಷದ ಬಿಕಾಂ ವಿದ್ಯಾರ್ಥಿನಿ ದಿಶಾ ಹೃದಯಾಘಾತಕ್ಕೆ ಬಲಿಯಾಗಿದ್ದಳು. ಕೆಲ ತಿಂಗಳ ಹಿಂದೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕಾಳಿಂಗೇರಿಯಲ್ಲಿ 6ನೇ ತರಗತಿಯ ವಿದ್ಯಾರ್ಥಿನಿ ದೀಕ್ಷಾ (12) ಎಂಬಾಕೆ ಶಾಲೆಗೆ ತೆರಳುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಳು.
ಗಣರಾಜ್ಯೋತ್ಸವ ದಿನವೇ ಘೋರ ದುರಂತ; ಧ್ವಜ ಇಳಿಸುವಾಗ ವಿದ್ಯುತ್ ಸ್ಪರ್ಶಿಸಿ 10ನೇ ತರಗತಿ ವಿದ್ಯಾರ್ಥಿ ಸಾವು
ಸಣ್ಣ ವಯಸ್ಸಿನವರಲ್ಲಿ ಹೃದಯಾಘಾತದ ಸಾವಿನ ಪ್ರಮಾಣದ ಕಾರಣ ಕಂಡುಹಿಡಿಯಲು ತಜ್ಞರ ಸಮಿತಿಯನ್ನು ಸರಕಾರ ರಚಿಸಿತ್ತು. ಕೋವಿಡ್ ವ್ಯಾಕ್ಸೀನ್ಗೂ ಈ ಸಾವುಗಳಿಗೂ ಸಂಬಂಧವಿಲ್ಲ. ಜೀವನಶೈಲಿ ಹಾಗೂ ಆನುವಂಶಿಕತೆಯ ಕಾರಣಗಳಿಂದ ಈ ಸಾವುಗಳು ಸಂಭವಿಸುತ್ತಿವೆ ಎಂದು ಸಮಿತಿ ವರದಿ ತಿಳಿಸಿತ್ತು.