ಮಂಡ್ಯ, ಮಾ. 2: ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಮುಂತಾದ ಗ್ರಾಮ ಪಂಚಾಯತ್ಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಿರುವುದನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿ ಮಂಡ್ಯ ಲೋಕಸಭೆ ಕ್ಷೇತ್ರದ ಸಂಸದ, ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಪತ್ರ ಬರೆದಿದ್ದಾರೆ.
ಗೆಜ್ಜಲಗೆರೆ, ಗೊರನಹಳ್ಳಿ, ಚಾಮನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮ ಪಂಚಾಯತ್ಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಿರುವ ನಿರ್ಣಯವನ್ನು ವಿರೋಧಿಸಿ ಗ್ರಾಮಸ್ಥರು 70 ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಡನೆ ನಡೆಸುತ್ತಿದ್ದಾರೆ. ಈ ವಿಚಾರವನ್ನು ಎಚ್.ಡಿ. ಕುಮಾರಸ್ವಾಮಿ ಮುಖ್ಯಂತ್ರಿ ಗಮನ ಸೆಳೆದಿದ್ದಾರೆ.
ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ತುರ್ತು ಕ್ರಮ ವಹಿಸಲಿ: ಎಚ್.ಡಿ.ಕುಮಾರಸ್ವಾಮಿ ಒತ್ತಾಯ
ಗ್ರಾಮಸ್ಥರ ಪಟ್ಟು
ಯಾವುದೇ ಕಾರಣಕ್ಕೂ ತಮ್ಮ ಗ್ರಾಮ ಪಂಚಾಯತ್ಗಳನ್ನು ನಗರಸಭೆಗೆ ಸೇರಿಸಬಾರದು, ಕೂಡಲೇ ಈ ಜನ ವಿರೋಧಿ ನಿರ್ಧಾರ ಹಿಂಪಡೆಯಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಸ್ಥಳೀಯರ ಮನವಿಗೆ ಮನ್ನಣೆ ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಜನತೆಯ ನಿರ್ಧಾರಕ್ಕೆ ವಿರುದ್ಧವಾಗಿ ಕ್ರಮ ಕೈಗೊಳ್ಳುವುದು ಸರಿಯಲ್ಲ. ಈಗಾಗಲೇ ಗೆಜ್ಜಲಗೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯ ಮುಂದೆ ಗ್ರಾಮಸ್ಥರು, ರೈತರು ಪ್ರತಿಭನೆ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.
ಈ 4 ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳು ಕೃಷಿ ಆಧಾರಿತವಾಗಿದ್ದು, 2,000 ಎಕ್ರೆಗೂ ಹೆಚ್ಚು ಭೂಮಿ ನೀರಾವರಿ ಪ್ರದೇಶವಾಗಿದೆ. ಭತ್ತ, ಕಬ್ಬು, ಹೂ, ತರಕಾರಿ ಬೆಳೆಯುವ ಜತೆಗೆ ಇಲ್ಲಿನವರು ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಜತೆಗೆ ಗೆಜ್ಜಲಗೆರೆಯಲ್ಲಿ ಮಂಡ್ಯ ಜಿಲ್ಲೆಯ ಹಾಲು ಉತ್ಪಾದನಾ ಮಂಡಳಿ (ಮನ್ಮುಲ್) ಕಾರ್ಯ ನಿರ್ವಹಿಸುತ್ತಿದೆ. ಮೂಲಸೌಕರ್ಯವೂ ಲಭ್ಯವಿದೆ ಎಂದಿದ್ದಾರೆ.
ಜನರ ಆಶಯಕ್ಕೆ ವಿರುದ್ಧ
ಯಾವುದೇ ರೀತಿಯ ಚರ್ಚೆ, ಚಿಂತನೆ ನಡೆಸದೆ, ಸ್ಥಳೀಯರ ಅಭಿಪ್ರಾಯ, ಒಪ್ಪಿಗೆ ಪಡೆಯದೆ ಗ್ರಾಮ ಪಂಚಾಯತ್ಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಬೇಕೆನ್ನುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟವು ಅನುಮೋದಿಸಿರುವುದು ಜನರ ಆಶಯಕ್ಕೆ ವಿರುದ್ಧವಾಗಿದೆ ಎಂದು ವಿವರಿಸಿದ್ದಾರೆ.
ಸಾರ್ವಜನಿಕರ, ರೈತರ ಅಭಿಪ್ರಾಯವನ್ನು ಆಲಿಸದೆ, ಗ್ರಾಮಸಭೆಯನ್ನು ನಡೆಸದೆ ಈ ಗ್ರಾಮ ಪಂಚಾಯತ್ಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡಿರುವುದು ಜನವಿರೋಧಿ ಕ್ರಮ. ಬಹುಮತವನ್ನು ಲೆಕ್ಕಿಸದೆ ಕೆಲವು ಗ್ರಾಮ ಪಂಚಾಯತ್ ಸದಸ್ಯರು ಗ್ರಾಮಸಭೆಯಲ್ಲಿ ಏಕಪಕ್ಷೀಯ ನಿರ್ಣಯ ಕೈಗೊಂಡಿರುವುದು ಸರಿಯಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ ಎಂಬುದಾಗಿ ಎಚ್.ಡಿ.ಕೆ. ಹೇಳಿದ್ದಾರೆ.
ಭದ್ರಾವತಿ ಉಕ್ಕು ಕಾರ್ಖಾನೆ, ಎಚ್ಎಂಟಿ ಪುನಶ್ಚೇತನ ಖಚಿತ: ಎಚ್.ಡಿ.ಕುಮಾರಸ್ವಾಮಿ ಭರವಸೆ
ಕೋರ್ಟ್ ಕದ ತಟ್ಟಿದ ಗ್ರಾಮಸ್ಥರು
ಈ ಜನವಿರೋಧಿ ನಿರ್ಣಯದ ಬಗ್ಗೆ ಗ್ರಾಮಸ್ಥರು, ರೈತರು ಹಾಗೂ ಸಾರ್ವಜನಿಕರು ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಗೆಜ್ಜೆಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮ ಪಂಚಾಯತ್ಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಿರುವ ರಾಜ್ಯ ಸಚಿವ ಸಂಪುಟದ ನಿರ್ಣಯವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಪತ್ರದಲ್ಲಿ ಎಚ್.ಡಿ.ಕೆ. ವಿವರಿಸಿದ್ದಾರೆ.