Tractor accident: ಚಿಕ್ಕಮಗಳೂರಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಗಂಭೀರ ಗಾಯ
Tractor accident: ಚಿಕ್ಕಮಗಳೂರು ಕೊಪ್ಪ ತಾಲೂಕಿನ ತೀರ್ಥಕೆರೆ ಬಳಿ ಭಾನುವಾರ ರಾತ್ರಿ ಅಪಘಾತ ನಡೆದಿದೆ. 40 ಕಾರ್ಮಿಕರು ಕೆಲಸ ಮುಗಿಸಿಕೊಂಡು ಟ್ರ್ಯಾಕ್ಟರ್ನಲ್ಲಿ ವಾಪಸ್ ಊರಿಗೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದ್ದು, ಈ ವೇಳೆ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.


ಚಿಕ್ಕಮಗಳೂರು: ಟ್ರ್ಯಾಕ್ಟರ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Tractor accident) ಕೊಪ್ಪ ತಾಲೂಕಿನ ತೀರ್ಥಕೆರೆ ಬಳಿ ಭಾನುವಾರ ರಾತ್ರಿ ನಡೆದಿದೆ. ಅಸ್ಸಾಂ ಮೂಲದವರು ಸೇರಿ ಸ್ಥಳೀಯ 40 ಕಾರ್ಮಿಕರು ತೀರ್ಥಕೆರೆ ಸಮೀಪದ ಎಸ್ಟೇಟ್ನಲ್ಲಿ ಕೆಲಸ ಮುಗಿಸಿಕೊಂಡು, ಜಯಪುರ ಪಟ್ಟಣದಲ್ಲಿ ದಿನಸಿ ಖರೀದಿಸಿಕೊಂಡು ಟ್ರ್ಯಾಕ್ಟರ್ನಲ್ಲಿ ವಾಪಸ್ ತೀರ್ಥಕೆರೆ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ 20 ಅಡಿ ಆಳಕ್ಕೆ ಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಜಯಪುರ ಮತ್ತು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾಶಿಯಲ್ಲಿ ನದಿ ಸ್ನಾನ ಮಾಡುವಾಗ ಮುಳುಗಿ ಬಾಗಲಕೋಟೆಯ ವ್ಯಕ್ತಿ ಸಾವು

ಬಾಗಲಕೋಟೆ: ಕಾಶಿಯಲ್ಲಿ ಸ್ನಾನ ಮಾಡುವ ವೇಳೆ ನದಿಯಲ್ಲಿ ಮುಳುಗಿ ಬಾಗಲಕೋಟೆ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸತೀಶ್ ಜೋಷಿ (44) ಮೃತ ದುರ್ದೈವಿ. ಇವರು ಬಾಗಲಕೋಟೆ ಜಿಲ್ಲಾ ಪಂಚಾಯಿತಿಯಲ್ಲಿ ಹೊರಗುತ್ತಿಗೆ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ವಾರದ ಹಿಂದೆ ಮಹಾ ಕುಂಭಮೇಳಕ್ಕೆ ಪ್ರಯಾಣ ಬೆಳೆಸಿದ್ದರು. ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗಿಯಾಗಿದ ನಂತರ ಕಾಶಿಗೆ ತೆರಳಿದ್ದರು. ಕಾಶಿಯಲ್ಲಿ ಸ್ನಾನ ಮಾಡುವ ವೇಳೆ ದುರ್ಘಟನೆ ನಡೆದಿದೆ. ಮೃತ ಸತೀಶ್ಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಬಾಗಲಕೋಟೆಯಿಂದ 35 ಜನ ಪ್ರವಾಸಿ ಬಸ್ನಲ್ಲಿ ತೆರಳಿದ್ದರು.
ನಿರಾಶ್ರಿತರ ನಿವೇಶನದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ; ಬಿಲ್ ಕಲೆಕ್ಟರ್ ವಿರುದ್ಧ ದೂರು

ದೊಡ್ಡಬಳ್ಳಾಪುರ: ನಿರಾಶ್ರಿತರಿಗೆ ಹಂಚಿಕೆ ಮಾಡಿದ್ದ ನಿವೇಶನದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ (Doddaballapur News) ತಾಲೂಕಿನ ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪ್ರಭಾವತಿ ವಿರುದ್ಧ ದೂರು ದಾಖಲಾಗಿದೆ. ತಮ್ಮ ಹೆಸರಿಗೆ ಹಂಚಿಕೆಯಾಗಿದ್ದ ನಿವೇಶನದಲ್ಲಿ ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಲ್ ಕಲೆಕ್ಟರ್ ಪ್ರಭಾವತಿ ಮತ್ತು ಪತಿ ನಂಜಪ್ಪ ವಿರುದ್ಧ ಸರಸ್ವತಮ್ಮ ಎಂಬುವವರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ದೊಡ್ಡಬೆಳವಂಗಲ ಪಿಡಿಒ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೊಡ್ಡಬೆಳವಂಗಲ ಗ್ರಾಮ ಪಂಚಾಯಿತಿಯಲ್ಲಿ ಸರಸ್ವತಮ್ಮ ಹೆಸರಲ್ಲಿ ಖಾತೆಯೂ ಇದ್ದು, 2021ರವರೆಗೆ ಕಂದಾಯವನ್ನು ಬಿಲ್ ಕಲೆಕ್ಟರ್ ಪ್ರಭಾವತಿ ಕಟ್ಟಿಸಿಕೊಂಡಿದ್ದರು. ಆದರೆ ವೈಯಕ್ತಿಕ ಪ್ರಭಾವದಿಂದ ಅದೇ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಖಾತೆ ಇರುವ ನಿವೇಶನದಲ್ಲಿ ಅಲ್ಲಿನ ಬಿಲ್ ಕಲೆಕ್ಟರ್ ಅಕ್ರಮವಾಗಿ ಮನೆ ನಿರ್ಮಾಣ ಮಾಡುತಿದ್ದರೂ ಪಿಡಿಒ ಸುಮ್ಮನೆ ಕುಳಿತಿರುವುದೇಕೆ ಎಂದು ಸ್ಥಳೀಯರು ಪ್ರಶ್ನಿಸಿದ್ಧಾರೆ. ಬಿಲ್ ಕಲೆಕ್ಟರ್ ಪ್ರಭಾವತಿ ಸಾಕ್ಷ್ಯ ನಾಶ ಮಾಡುವ ಸಂಭವವಿರುವುದರಿಂದ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಅಮಾನತು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Aarushi Nishank: ಹಿರೋಯಿನ್ ಮಾಡುತ್ತೇವೆಂದು ಮಾಜಿ ಸಿಎಂ ಪುತ್ರಿಗೆ ವಂಚನೆ: 4 ಕೋಟಿ ರೂ. ಪಂಗನಾಮ!