CM Siddaramaiah: ದಸರಾ ಎಲ್ಲ ಧರ್ಮದ, ಎಲ್ಲ ಜಾತಿಗಳ ಹಬ್ಬ: ಸಿಎಂ ಸಿದ್ದರಾಮಯ್ಯ
Mysuru Dasara: ಕುವೆಂಪು ಅವರು ಎಲ್ಲಾ ದೇವಸ್ಥಾನಗಳನ್ನು ಚರ್ಚ್ಗಳನ್ನು ಮಸೀದಿಗಳನ್ನು ಬಿಟ್ಟು ಮನುಷ್ಯರಾಗಿ ಬನ್ನಿ ಅಂತ ಹೇಳಿದರು. ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಅಂದರು. ನಾವು ಸಮಾಜವನ್ನು ಒಡೆಯುವಂತಹ ಕೆಲಸ ಮಾಡಬಾರದು ಎಂದು ದಸರಾ ಉದ್ಘಾಟನೆ ಸಂದರ್ಭ ಸಿಎಂ ಸಿದ್ದರಾಮಯ್ಯ ಹೇಳಿದರು.

-

ಮೈಸೂರು : ಸಂವಿಧಾನ ಎಲ್ಲರೂ ಮನುಷ್ಯರಾಗಿ ಬಾಳಿ ಸಮ ಸಮಾಜವನ್ನು ಕಟ್ಟಿ ಎಲ್ಲರೂ ಭ್ರಾತೃತ್ವದಿಂದ ಬಾಳುವ ಭಾವನೆ ಬೆಳೆಸಿಕೊಳ್ಳಿ ಎಂದು ಸಂದೇಶ ಸಾರುತ್ತದೆ. ದಸರಾವನ್ನು ನಾಡಹಬ್ಬ, ಜನರ ಹಬ್ಬ ಎಂದು ಕರೆಯಲಾಗುತ್ತದೆ. ಇದು ಒಂದು ಧರ್ಮದ ಹಬ್ಬ ಅಥವಾ ಒಂದು ಜಾತಿಯ ಹಬ್ಬ ಅಲ್ಲ. ಎಲ್ಲ ಧರ್ಮದ ಎಲ್ಲಾ ಜಾತಿಗಳ ಹಬ್ಬ. ಹಾಗಾಗಿ ಇದನ್ನು ವಿಶ್ವವಿಖ್ಯಾತ ಮೈಸೂರು ದಸರಾ (Mysuru dasara) ಅಂತ ಕರೆಯಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಮೈಸೂರಿನಲ್ಲಿ ನಾಡಹಬ್ಬ ದಸರಾ ಉದ್ಘಾಟನೆ ಸಂದರ್ಭದಲ್ಲಿ ಅವರು ಮಾತನಾಡಿದರು. ಬಡವರಿಗೆ ಆರ್ಥಿಕವಾಗಿ ಶಕ್ತಿ ಕೊಡಬೇಕು. ಜಾತಿ ವ್ಯವಸ್ಥೆಯನ್ನು ತೆಗೆದು ಹಾಕಬೇಕು. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೆ ದೌರ್ಜನ್ಯ ಅಸಮಾನತೆ ಮುಂದುವರೆಯುತ್ತದೆ. ಅಸಮಾನತೆ, ದೌರ್ಜನ್ಯ ಹೋಗಬೇಕಾದರೆ ಎಲ್ಲರೂ ಮುಖ್ಯವಾಹಿನಿಗೆ ಬರಬೇಕು. ಸಮಾನತೆ ಬಂದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲಿಕ್ಕೆ ಸಾಧ್ಯವಾಗುತ್ತದೆ. ಇದನ್ನೇ ಬುದ್ಧ ಬಸವಣ್ಣ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರು ಹೇಳಿದ್ದು ಎಂದರು.
ಕುವೆಂಪು ಅವರು ಎಲ್ಲಾ ದೇವಸ್ಥಾನಗಳನ್ನು ಚರ್ಚ್ಗಳನ್ನು ಮಸೀದಿಗಳನ್ನು ಬಿಟ್ಟು ಮನುಷ್ಯರಾಗಿ ಬನ್ನಿ ಅಂತ ಹೇಳಿದರು. ಸರ್ವಜನಾಂಗದ ಶಾಂತಿಯ ತೋಟ ಆಗಬೇಕು ಅಂದರು. ನಾವು ಸಮಾಜವನ್ನು ಒಡೆಯುವಂತಹ ಕೆಲಸ ಮಾಡಬೇಕಾ? ಧರ್ಮದ ಆಧಾರದ ಮೇಲೆ ಜಾತಿಯ ಆಧಾರದ ಮೇಲೆ ಸಮಾಜ ಒಡೆಯುವ ಕೆಲಸ ಮಾಡಬೇಕಾ? ಹಾಗೆ ಮಾಡಬಾರದು. ನಮ್ಮ ಸಂವಿಧಾನದಲ್ಲಿ ಆ ರೀತಿ ಇಲ್ಲ ಎಂದರು.
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ
ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಯಾಕೆಂದರೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಕೂಡ ಅಸಮಾನತೆ ಇದೆ. ತಾರತಮ್ಯ ಇದೆ. ಇದೆಲ್ಲವನ್ನು ಹೋಗಲಾಡಿಸಲು ನಾವು ಈ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.
ಇಲ್ಲಿಯವರೆಗೆ ಸುಮಾರು 1 ಲಕ್ಷ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ರಾಜ್ಯ ಏನಾದರೂ ದಿವಾಳಿ ಆಗಿದೆಯಾ? ಪ್ರತಿವರ್ಷ 52 ರಿಂದ 56,000 ಕೋಟಿ ರೂಪಾಯಿ ಇದಕ್ಕೆ ಖರ್ಚು ಮಾಡುತ್ತಿದ್ದೇವೆ. ಪ್ರತಿಯೊಂದು ಬಡವರ ಮನೆಗೆ, ದೀನ ದಲಿತರ ಮನೆಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಕೊಡುತ್ತಿದ್ದೇವೆ. ಇವತ್ತು ಕೊಂಡುಕೊಳ್ಳುವಂಥ ಶಕ್ತಿ ಜಾಸ್ತಿಯಾಗಿದೆ.
ಶಕ್ತಿ ಯೋಜನೆಯ ಮೂಲಕ ಯಾವ ಹೆಣ್ಣು ಮಕ್ಕಳು ಕೂಡ ಬಸ್ ಚಾರ್ಜ್ ಕೊಡಬೇಕಿಲ್ಲ. ಸುಮಾರು 500 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದು ಯಾವ ಕಾರಣಕ್ಕೂ ನಿಲ್ಲಲ್ಲ. ಯಾರು ವಿರೋಧ ಮಾಡಿದ್ದಾರೋ ಅವರೇ ಈಗ ಗ್ಯಾರೆಂಟಿ ಯೋಜನೆಗಳನ್ನು ಕಾಪಿ ಮಾಡೋಕ್ಕೆ ಶುರು ಮಾಡಿದ್ದಾರೆ. ವಿರೋಧ ಮಾಡುವುದು ಒಂದು ಕಾಲವಾದರೆ ಕಾಪಿ ಮಾಡೋದು ಇನ್ನೊಂದು ಕಾಲವಾಗಿದೆ. ಕರ್ನಾಟಕ ಗ್ಯಾರಂಟಿ ಯೋಜನೆಗಳನ್ನು ಮಾಡಿದ ಮೇಲೆ ಕರ್ನಾಟಕ ತಲಾ ಆದಾಯದಲ್ಲಿ 2 ಲಕ್ಷ 4 ಸಾವಿರ ಆಗಿದೆ. ಕರ್ನಾಟಕ ತಲಾ ಆದಾಯದಲ್ಲಿ ನಂಬರ್ 1 ರಾಜ್ಯವಾಗಿದೆ ಎಂದರು.
5 ಗ್ಯಾರಂಟಿ ಯೋಜನೆಗಳನ್ನು ರಾಜಕೀಯ ಲಾಭಕ್ಕೋಸ್ಕರ ಮಾಡುತ್ತಿಲ್ಲ. ರಾಜಕೀಯ ಲಾಭಕ್ಕೋಸ್ಕರ ಮಾಡುತ್ತಿದ್ದರೆ ಎಲ್ಲಾ ಧರ್ಮದವರಿಗೆ ಎಲ್ಲಾ ಜಾತಿಯವರಿಗೆ ಎಲ್ಲಾ ಪಕ್ಷದವರಿಗೆ ಮಾಡುತ್ತಿರಲಿಲ್ಲ. ಜೆಡಿಎಸ್ ಪಕ್ಷ ಹಾಗೂ ಬಿಜೆಪಿ ಪಕ್ಷದವರು ಗ್ಯಾರಂಟಿ ಯೋಜನೆ ಪಡೆದುಕೊಳ್ಳಲ್ವಾ? ಬಡವರು, ಎಲ್ಲಾ ಜಾತಿಯಲ್ಲೂ ಇದಾರೆ. ಎಲ್ಲ ಧರ್ಮದಲ್ಲೂ ಇದಾರೆ. ಎಲ್ಲ ಪಕ್ಷಗಳಲ್ಲೂ ಇದ್ದಾರೆ ಎಂದರು.
ಇದನ್ನೂ ಓದಿ: Mysuru Dasara 2025: ಮೈಸೂರಿನಲ್ಲಿ ದಸರಾ ಮಹೋತ್ಸವ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್