ಟಿಪ್ಪು ಸುಲ್ತಾನ್ ಮರಣ ಹೊಂದಿದ್ದು 1799ರಲ್ಲಿ, ಕೆಆರ್ಎಸ್ ಅಣೆಕಟ್ಟು ನಿರ್ಮಿಸಿದ್ದು 1911ರಲ್ಲಿ: ಸಚಿವ ಮಹದೇವಪ್ಪಗೆ ಇತಿಹಾಸ ಪಾಠ ಮಾಡಿದ ಜೋಶಿ
Pralhad Joshi: ತುಷ್ಟೀಕರಣ ಹಾಗೂ ಓಲೈಕೆ ರಾಜಕಾರಣದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ ಹೆಮ್ಮೆ ಮೈಸೂರು ಮಹಾಸಂಸ್ಥಾನದ ಕೊಡುಗೆಗಳ ಬಗ್ಗೆ ವಿರೋದಾಭಾಸವಾಗಿ ಮಾತನಾಡುತ್ತಿರುವುದು ನಿಜಕ್ಕೂ ಅಸಹ್ಯದ ಪರಮಾವಧಿ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ನವದೆಹಲಿ: ದೇಶ ಮತ್ತು ಕರುನಾಡಿಗೆ ಮೈಸೂರು ಮಹಾಸಂಸ್ಥಾನದ ಕೊಡುಗೆ ಅನನ್ಯವಾದುದು. ಆದರೆ ರಾಜ್ಯ ಕಾಂಗ್ರೆಸ್ ನಾಯಕರು ಅದನ್ನು ಮರೆತು ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ. ಸಿಎಂ ಪುತ್ರ ಯತೀಂದ್ರ ಮತ್ತು ಸಚಿವ ಎಚ್.ಸಿ. ಮಹದೇವಪ್ಪ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಸಚಿವರು, ತುಷ್ಟೀಕರಣ ಹಾಗೂ ಓಲೈಕೆ ರಾಜಕಾರಣದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ದೇಶದ ಹೆಮ್ಮೆ ಮೈಸೂರು ಮಹಾಸಂಸ್ಥಾನದ ಕೊಡುಗೆಗಳ ಬಗ್ಗೆ ವಿರೋದಾಭಾಸವಾಗಿ ಮಾತನಾಡುತ್ತಿರುವುದು ನಿಜಕ್ಕೂ ಅಸಹ್ಯದ ಪರಮಾವಧಿ ಎಂದು ಖಂಡಿಸಿದ್ದಾರೆ.
ಮೊನ್ನೆ ಮೊನ್ನೆಯಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತ್ರೀಂದ್ರ ʼಮೈಸೂರು ಸಂಸ್ಥಾನಕ್ಕಿಂತಲೂ ಹೆಚ್ಚಿನ ಕೆಲಸವನ್ನು ನಮ್ಮಪ್ಪ ಮಾಡಿದ್ದಾರೆʼ ಎಂದರು. ಇದೀಗ ಸಚಿವ ಡಾ.ಎಚ್.ಸಿ. ಮಹದೇವಪ್ಪ ʼಕೆಆರ್ಎಸ್ ಡ್ಯಾಂ ಕಟ್ಟಲು ಬುನಾದಿ ಹಾಕಿದ್ದು ಟಿಪ್ಪು ಸುಲ್ತಾನ್ʼ ಎಂಬ ಹೇಳಿಕೆ ನೀಡಿರುವುದು ನಿಜಕ್ಕೂ ಕನ್ನಡ ನಾಡಿನ ದುರಂತ ಸಚಿವ ಪ್ರಲ್ಹಾದ್ ಜೋಶಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾದೇವಪ್ಪ ಮೊದಲು ಇತಿಹಾಸ ಅರಿಯಲಿ
ಸಚಿವ ಮಹಾದೇವಪ್ಪ ಮೊದಲು ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಲಿ. ಟಿಪ್ಪು ಸುಲ್ತಾನ್ ಯುಗಾಂತ್ಯವಾಗಿದ್ದು 1799ರಲ್ಲಿ. ಆದರೆ ರಾಜ್ಯದ ಸುಭಿಕ್ಷೆಗಾಗಿ ನೀರಾವರಿ, ಕುಡಿಯುವ ನೀರು ಮತ್ತು ಜಲ ವಿದ್ಯುತ್ ಶಕ್ತಿಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕೆಆರ್ಎಸ್ ಅಣೆಕಟ್ಟು ನಿರ್ಮಿಸಿದ್ದು 1911ರಲ್ಲಿ ಎಂದು ಜೋಶಿ ಹೇಳಿದ್ದಾರೆ.
ವಿಶ್ವೇಶ್ವರಯ್ಯ ಹೆಸರು ಸಣ್ಣ ಮಕ್ಕಳೂ ಹೇಳುತ್ತಾರೆ
ಆಗಿನ ಮೈಸೂರು ರಾಜ ಶ್ರೀ ಕೃಷ್ಣರಾಜ ಒಡೆಯರ್ ಬಹದ್ದೂರ್ ಆಳ್ವಿಕೆಯಲ್ಲಿ ಇದಕ್ಕೆ ಅಡಿಪಾಯ ಹಾಕಲಾಯಿತು. ವಿಶ್ವಪ್ರಸಿದ್ಧ ಸಿವಿಲ್ ಎಂಜಿನಿಯರ್ ಮತ್ತು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರು ಈ ಅಣೆಕಟ್ಟು ನಿರ್ಮಿಸಿದರು ಎಂಬುದನ್ನು ಸಣ್ಣ ಮಕ್ಕಳೂ ಹೇಳುತ್ತಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಇತಿಹಾಸ ಬಗ್ಗೆ ಮನಸೋ ಇಚ್ಛೆ ಮಾತು
ಇಂದಿಗೂ ಮೈಸೂರು ಮಹಾರಾಜರ ಮಹತ್ಕಾರ್ಯ ನೆನೆದು, ಪೂಜೆ ಸಲ್ಲಿಸುವ ಮೂಲಕ ಜನ ದೈನಂದಿನ ಜೀವನ ಆರಂಭಿಸುತ್ತಿದ್ದಾರೆ. ಆದರೆ ಇತಿಹಾಸದ ಕುರಿತು ಮನಸೋ ಇಚ್ಛೆ ಮಾತನಾಡುವ ಕಾಂಗ್ರೆಸ್ಸಿಗರ ಈ ಕುತಂತ್ರದ ಬುದ್ಧಿಗೆ ಏನು ಹೇಳಬೇಕು? ಮೈಸೂರು ಒಡೆಯರ ತ್ಯಾಗ, ಕರುನಾಡಿನ ಅಭಿವೃದ್ಧಿಗೆ ಕೊಡುಗೆಯನ್ನು ಕೊಂಡಾಡದೆ ಕಾಂಗ್ರೆಸ್ ಪಕ್ಷ ಎಲ್ಲಕ್ಕಿಂತ ತಾನೇ ಹೆಚ್ಚೆಂದು ಬೀಗುವಂತೆ ಹೇಳಿಕೆ ನೀಡುತ್ತಿರುವುದು ಅವರ ಹತಾಶೆಯನ್ನು ತೋರ್ಪಡಿಸುತ್ತದೆ ಎಂದು ಜೋಶಿ ಚಾಟಿ ಬೀಸಿದ್ದಾರೆ.
ಈ ಸುದ್ದಿಯನ್ನೂ ಓದಿ | Karnataka Rains: ಮುಂದಿನ 3 ದಿನ ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್; ಭಾರಿ ಮಳೆ ನಿರೀಕ್ಷೆ!
ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತು, ಬರೀ ತುಷ್ಟೀಕರಣ ರಾಜಕಾರಣದಲ್ಲಿ ಮುಳುಗಿದೆ. ರಾಜ್ಯದ ಸಂಪತ್ತನ್ನು ಬರಿದು ಮಾಡುತ್ತ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ನೂಕಿದೆ. ಅದೂ ಸಾಲದೆಂಬಂತೆ ಕರುನಾಡಿನ ರಾಜ ಮಹಾರಾಜರ ಬಗ್ಗೆ ಅಪಸ್ವರ ಎತ್ತಿ ಮಾತನಾಡುತ್ತಿರುವುದು ನಾಡಿನ ದುರಂತವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹರಿಹಾಯ್ದಿದ್ದಾರೆ.