ಬಳ್ಳಾರಿ, ಏ.21: ಮದುವೆಗಾಗಿ ವಧು (bride) ನೋಡಲು ಹೋಗುತ್ತಿದ್ದ ಗಂಡು, ಭೀಕರ ಅಪಘಾತದಲ್ಲಿ (Road Accident) ಮೃತಪಟ್ಟಿದ್ದಾನೆ. ಮಗನಿಗೆ ಮದುವೆ (Marriage) ಮಾಡಬೇಕು ಎಂದು ಕನಸು ಕಂಡು, ಆತನ ಜೊತೆ ಹೆಣ್ಣು ನೋಡಲು ಹೋಗುತ್ತಿದ್ದ ಹೆತ್ತವರು ಕೂಡ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ. ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆ (Hosapete) ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವಿಧಿಯ ಹೊಡೆತಕ್ಕೆ ಒಂದಿಡೀ ಕುಟುಂಬ ಸರ್ವನಾಶವಾಗಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ನೂರು ಗ್ರಾಮದ ಕೊಟ್ರೇಶ್ಗೆ ಮದ್ವೆ ಮಾಡೋದಕ್ಕೆ ಮನೆಯವರು ಮುಂದಾಗಿದ್ದರು. ಕನ್ಯೆ ನೋಡುವ ಶಾಸ್ತ್ರವನ್ನೂ ಏರ್ಪಡಿಸಿದ್ದರು. ಕೊಟ್ರೇಶ್ ಬೈಕ್ನಲ್ಲಿ ತಂದೆ ತಾಯಿಯನ್ನು ಕೂರಿಸಿಕೊಂಡು ಹೆಣ್ಣಿನ ಮನೆಗೆ ತೆರಳುತ್ತಿದ್ದರು. ಇನ್ನೇನು ಸ್ವಲ್ಪವೇ ದೂರ ಹೋದರೆ ಹೆಣ್ಣಿನ ಮನೆ ಎಂಬಷ್ಟರಲ್ಲಿ ಜವರಾಯ ಬಂದೆರಗಿದ್ದಾನೆ.
ಬೆಳ್ಳುಳ್ಳಿ ತುಂಬಿಕೊಂಡು ಎದುರಿನಿಂದ ಬಂದ ಲಾರಿ ನಿಯಂತ್ರಣ ಕಳೆದುಕೊಂಡು ಬೈಕ್, ಕಾರು ಹಾಗೂ KSRTC ಬಸ್ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿ ಬಿದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಬೈಕ್ನಲ್ಲಿ ಹೋಗುತ್ತಿದ್ದ ಮೂವರು ಹಾಗೂ ಇನ್ನೂ ಒಬ್ಬರು ಜೀವ ಬಿಟ್ಟಿದ್ದಾರೆ.
ಉಧಂಪುರದಲ್ಲಿ ಕಂದಕಕ್ಕೆ ಉರುಳಿದ ಬಸ್; 15 ಮಂದಿ ಸಾವು, 20 ಜನರಿಗೆ ಗಾಯ
ಘಟನಾ ಸ್ಥಳಕ್ಕೆ ವಿಜಯನಗರ ಎಸ್ಪಿ ಜಾಹ್ನವಿ ಎಸ್ ಹಾಗೂ ಮರಿಯಮ್ಮನ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ಬಸ್ನಲ್ಲಿದ್ದ ಕೆಲವರಿಗೂ ಗಾಯಗಳಾಗಿವೆ. ಗಾಯಾಳುಗಳೆಲ್ಲರನ್ನೂ ಹೊಸಪೇಟೆ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.