ಕಲಬುರಗಿ, ನ.16: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ತಮ್ಮ ಹೇಳಿಕೆಗಳ ಮೂಲಕ ಸಡ್ಡು ಹೊಡೆದಿದ್ದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರ ತವರು ಚಿತ್ತಾಪುರದಲ್ಲಿ (Chittapura) ಆರೆಸ್ಸೆಸ್ ಪಥಸಂಚಲನವನ್ನು ಅದ್ಧೂರಿಯಾಗಿ ಮಾಡಿ ಮುಗಿಸಿದೆ. ತೀವ್ರ ಜಿದ್ದಾಜಿದ್ದಿಗೆ (RSS Row) ಕಾರಣವಾಗಿದ್ದ ಚಿತ್ತಾಪುರದ ಆರ್ಎಸ್ಎಸ್ ಪಥಸಂಚಲನ ಕೊನೆಗೂ ನಿನ್ನೆ ನಿರ್ವಿಘ್ನವಾಗಿ ನಡೆದಿದೆ. 300 ಜನ ಗಣವೇಶಧಾರಿಗಳು ಮತ್ತು 50 ಜನ ಬ್ಯಾಂಡ್ ವಾದಕರು ಸೇರಿದಂತೆ 350 ಜನ ಆರ್ಎಸ್ಎಸ್ ಕಾರ್ಯಕರ್ತರು ಭಾಗಿಯಾಗಲು ಅವಕಾಶ ಕಲ್ಪಿಸಲಾಗಿತ್ತು.
ಆರ್ಎಸ್ಎಸ್ಗೆ (RSS) ಕಡಿವಾಣ ಹಾಕಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಆರ್ಎಸ್ಎಸ್, ಪ್ರಿಯಾಂಕ್ ತವರು ನೆಲ ಚಿತ್ತಾಪುರದಲ್ಲೇ (Chittapur) ಪಥಸಂಚಲನ ಮಾಡಲು ನಿರ್ಧರಿಸಿತ್ತು. ಆದರೆ ಜಿಲ್ಲಾಡಳಿತ ಇದಕ್ಕೆ ಅವಕಾಶ ನೀಡಿರಲಿಲ್ಲ. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಆರ್ಎಸ್ಎಸ್, ಅಲ್ಲಿಂದಲೇ ಅನುಮತಿ ಪಡೆದು ನಿನ್ನೆ ಪರೇಡ್ ಮಾಡಿ ಮುಗಿಸಿದೆ. ರಾಜಕೀಯ ತಿಕ್ಕಾಟದ ಮಧ್ಯೆ ಅದ್ಧೂರಿ ಪಥಸಂಚಲನ ನಡೆದಿದ್ದು, ಆರ್ಎಸ್ಎಸ್ಗೆ ಇಲ್ಲಿ ಮತ್ತಷ್ಟು ಬಲ ಹಾಗೂ ಬೇರೂರಲು ಸಹಕಾರಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಿತ್ತಾಪುರ ಪಟ್ಟಣದಲ್ಲಿ ಮಧ್ಯಾಹ್ನ 3:45ಕ್ಕೆ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾದ ಪಥಸಂಚಲನ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕೆನರಾ ಬ್ಯಾಂಕ್ ವೃತ್ತ ಮಾರ್ಗವಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು. ಸುಮಾರು ಒಂದೂವರೆ ಕಿ.ಮೀ ನಷ್ಟು ಪಥಸಂಚಲನ ನಡೆದಿದ್ದು, ನಿರೀಕ್ಷೆಗಿಂತ ಮೀರಿ ಜನರ ಬೆಂಬಲದೊಂದಿಗೆ ಅದ್ಧೂರಿ ಪಥಸಂಚಲನ ಜರುಗಿದೆ. ಪಥಸಂಚಲನದುದ್ದಕ್ಕೂ ಹೂಮಳೆ ಸ್ವಾಗತ ಕೋರಲಾಗಿತ್ತು. ಚಿಕ್ಕಮಕ್ಕಳಿಂದ ಹಿಡಿದು, ಮಹಿಳೆಯರು, ವೃದ್ದರು ಜಯಘೋಷ ಕೂಗುತ್ತಾ ಅದ್ದೂರಿ ಸ್ವಾಗತ ಕೋರಿದ್ದರು.
ಬಳಿಕ ಅದೇ ಬಜಾಜ್ ಕಲ್ಯಾಣ ಮಂಟಪದಲ್ಲಿ ಸುಮಾರು 45 ನಿಮಿಷಗಳ ವೇದಿಕೆ ಕಾರ್ಯಕ್ರಮ ಜರಗಿತು. ಈ ವೇಳೆ ಗಣವೇಷಧಾರಿಗಳನ್ನ ಉದ್ದೇಶಿಸಿ ಆರ್ಎಸ್ಎಸ್ ಕರ್ನಾಟಕ ಪ್ರಾಂತ ಪ್ರಮುಖ ಕೃಷ್ಣ ಜೀ ಜೋಶಿ ಮಾತನಾಡಿದರು. ಸಾಕಷ್ಟು ಅಡ್ಡಿ ಆತಂಕಗಳ ಮಧ್ಯೆ ಅದ್ದೂರಿ ಹಾಗೂ ಶಾಂತಿಯುತವಾಗಿ ಪಥಸಂಚಲನ ನಡೆದಿದ್ದಕ್ಕೆ ಕೋಟ್೯ಗೆ ಅರ್ಜಿ ಹಾಕಿದ್ದ ಆರ್ಎಸ್ಎಸ್ ಜಿಲ್ಲಾ ಪ್ರಮುಖ ಅಶೋಕ ಪಾಟೀಲ್ ಮಾತನಾಡಿ ಖುಷಿ ವ್ಯಕ್ತಪಡಿಸಿದರು.
ಇದನ್ನೂ ಓದಿ: Priyank Kharge: ತಾನು ನೋಂದಾಯಿತ ಸಂಸ್ಥೆಯಲ್ಲ ಎಂದು ಆರೆಸ್ಸಸ್ ಹೇಳಿದೆ: ದಾಖಲೆ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ನಡೆಸಲು ಜಿಲ್ಲಾಡಳಿತ 10 ಷರತ್ತುಗಳನ್ನ ಹಾಕಿ ಅನುಮತಿ ನೀಡಿತ್ತು. ಪಥಸಂಚಲನದಲ್ಲಿ ಕೇವಲ ಸ್ಥಳೀಯರು ಮಾತ್ರ ಪಾಲ್ಗೊಳ್ಳಬೇಕು. 300 ಜನ ಗಣವೇಷಧಾರಿಗಳು ಮಾತ್ರ ಭಾಗಿಯಾಗಬೇಕು ಎಂಬ ನಿಯಮದ ಜೊತೆಗೆ ಮಧ್ಯಾಹ್ನ 3:30 ರಿಂದ 5:45 ರೊಳಗೆ ಮುಕ್ತಾಯ ಮಾಡಬೇಕು ಎಂಬ ನಿಯಮ ಹಾಕಿತ್ತು. ಅಷ್ಟರೊಳಗೆ ಅದ್ದೂರಿಯಾಗಿ ಪಥಸಂಚಲನ ಮಾಡಲಾಗಿದೆ.
ಹೆಜ್ಜೆಹೆಜ್ಜೆಗೂ ಬಿಗಿ ಪೊಲೀಸ್ ಭದ್ರತೆ
ಜಿದ್ದಾಜಿದ್ದಿನಿಂದ ಆಯೋಜನೆಗೊಂಡಿದ್ದ ಕಾರ್ಯಕ್ರಮವಾಗಿದ್ದರಿಂದ ಹೆಚ್ಚಿನ ಪೊಲೀಸ್ ಭದ್ರತೆ ನೀಡಲಾಗಿತ್ತು. 8 ಕೆಎಸ್ಆರ್ಪಿ, 3 ಡಿಎಆರ್ ತುಕಡಿ ಸೇರಿದಂತೆ 1200ಕ್ಕೂ ಹೆಚ್ಚು ಪೊಲೀಸರು ನಿಯೋಜನೆಗೊಂಡಿದ್ದರು. 300 ಜನರಿಗೆ ಮಾತ್ರ ಪರೇಡ್ಗೆ ಅವಕಾಶ ನೀಡಲಾಗಿತ್ತು. ಇನ್ನು ಪಥಸಂಚಲನದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಮತ್ತೆ ಆರ್ಎಸ್ಎಸ್ ವಿರುದ್ಧ ಗುಡುಗಿದ್ದಾರೆ. ಚಿತ್ತಾಪುರದಲ್ಲಿ ನಾವು ಹೇಳಿದಂತೆ ಆರ್ಎಸ್ಎಸ್ ಪಥಸಂಚಲನ ನಡೆದಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: Mohan Bhagwat: ಆರೆಸ್ಸೆಸ್ನ ಹಣದ ಮೂಲ ಇದು: ಮೋಹನ ಭಾಗವತ್ ಸ್ಪಷ್ಟನೆ