B A Vivek Rai: ವಿವೇಕ ರೈಗೆ ಪ್ರತಿಷ್ಠಿತ ಪಂಪ ಪ್ರಶಸ್ತಿ: ಪ್ರಭಾವಶಾಲಿ ಸಾಹಿತಿ ಮತ್ತು ಸಂಶೋಧಕನ ಬದುಕು-ಬರಹ
ಸಾಹಿತಿ,ಬಹುಭಾಷಾ ವಿದ್ವಾಂಸ, ವಿಶ್ರಾಂತ ಪ್ರಾಧ್ಯಾಪಕ ಮತ್ತು ಸಂಶೋಧಕ ಪ್ರೊ. ಬಿಎ ವಿವೇಕ ರೈ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2024-25 ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ತುಳು ಭಾಷೆಯ ನಡುವೆ ಸಂಸರ್ಗ ಬೆಳೆಸಿದ ಪ್ರಭಾವಶಾಲಿ ಸಾಹಿತಿಯ ಬದುಕು ಮತ್ತು ಬರಹಗಳ ಕುರಿತಾದ ವಿವರ ಇಲ್ಲಿದೆ.
![ವಿವೇಕ ರೈಗೆ ಪ್ರತಿಷ್ಠಿತ 2024-25ನೇ ಸಾಲಿನ ಪಂಪ ಪ್ರಶಸ್ತಿ](https://cdn-vishwavani-prod.hindverse.com/media/original_images/Vivek_Rai.jpg)
ಸಾಹಿತಿ,ವಿದ್ವಾಂಸ ಮತ್ತು ಸಂಶೋಧಕ ಬಿಎ ವಿವೇಕ ರೈ
![Profile](https://vishwavani.news/static/img/user.png)
ಬೆಂಗಳೂರು: ಸಾಹಿತಿ,ಬಹುಭಾಷಾ ವಿದ್ವಾಂಸ, ವಿಶ್ರಾಂತ ಪ್ರಾಧ್ಯಾಪಕ ಮತ್ತು ಸಂಶೋಧಕ ಪ್ರೊ. ಬಿಎ ವಿವೇಕ ರೈ(B.A Vivek Rai) ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2024-25 ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ(Pampa Award) ಆಯ್ಕೆಯಾಗಿದ್ದಾರೆ. ಕನ್ನಡ ಮತ್ತು ತುಳು ಭಾಷೆಯ ನಡುವೆ ಸಂಸರ್ಗ ಬೆಳೆಸಿದ ಪ್ರಭಾವಶಾಲಿ ಸಾಹಿತಿಯ ಬದುಕು ಮತ್ತು ಬರಹಗಳ ಕುರಿತಾದ ವಿವರ ಇಲ್ಲಿದೆ.
ವಿವೇಕ ರೈ ಎಂಬ ಅಭಿಜಾತ ಪ್ರತಿಭೆ
ಡಾ. ಬಿ.ಎ.ವಿವೇಕ ರೈ ಬಹುಭಾಷಾ ಪಂಡಿತರಾಗಿ ಮತ್ತು ಸಾಹಿತಿಯಾಗಿ ಚಿರಪರಿಚಿತ. ಕನ್ನಡ-ತುಳು ಭಾಷೆಯ ನಡುವೆ ಸಂಸರ್ಗ ಬೆಳೆಸಿದ ಅವರು ವಿದ್ವಾಂಸರಾಗಿಯೂ ಪ್ರಸಿದ್ಧಿಯಾಗಿದ್ದಾರೆ. ವಿವೇಕ ರೈ 1946ರ ಡಿಸೆಂಬರ್ 8ರಂದು ಜನಿಸಿದರು. ಪುತ್ತೂರು ತಾಲೂಕಿನ 'ಪುಣಚಾ' ಅವರ ಹುಟ್ಟೂರು. ಅಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು.ಪುತ್ತೂರಿನಲ್ಲಿ ಪಿಯುಸಿ, ಬಿಎಸ್ಸಿ ವ್ಯಾಸಂಗ, ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಹಾ.ಮಾ.ನಾಯಕರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಅಂಕಣ ಬರಹಕ್ಕೆ ಹೊಸ ಸ್ಪರ್ಶ ನೀಡಿದ ಹೆಸರಾಂತ ಸಾಹಿತಿ ಹಾಮಾನಾ ಅವರ ಪ್ರಭಾವಕ್ಕೆ ಒಳಗಾದ ವಿವೇಕ ರೈ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಕನ್ನಡ ಮತ್ತು ತುಳು ಭಾಷೆಯ ಬಗ್ಗೆ ಅಪಾರ ಒಲವು ಮತ್ತು ಪಾಂಡಿತ್ಯವುಳ್ಳ ರೈ ಭಾಷಾ ಅಧ್ಯಯನಕ್ಕೆ ಹೊಸ ಮಾದರಿಗಳನ್ನು ರೂಪಿಸಿದವರು. ಅವರು ತಮ್ಮ ಎಂಬತ್ತರ ಇಳಿ ವಯಸ್ಸಿನಲ್ಲೂ ಸಂಶೋಧನೆಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ರೀಡರ್, ಪ್ರಾಧ್ಯಾಪಕ, ವಿಭಾಗ ಮುಖ್ಯಸ್ಥರಾಗಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ರೈ ತಮ್ಮ ವೃತ್ತಿ ಬದುಕಿನುದ್ದಕ್ಕೂ ಹೊಸ ಪ್ರಯೋಗಗಳನ್ನು ಮಾಡಿದವರು. ಸಾವಿರಾರು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಿದವರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾಗಿ, ಕೇಂದ್ರ-ರಾಜ್ಯ ಸಾಹಿತ್ಯ ಅಕಾಡೆಮಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಅಪಾರ ಅನುಭವವಿದೆ. ವಿವೇಕ ರೈ ಸಾಕಷ್ಟು ಮಹತ್ವದ ಕೃತಿಗಳನ್ನು ರಚಿಸಿದ್ದು, ತುಳು ಸಾಹಿತ್ಯ ಚರಿತ್ರೆ, ಸಮಗ್ರ ಕನ್ನಡ ಜೈನ ಸಂಪುಟಗಳು ಸೇರಿ ಹಲವು ಕೃತಿಗಳ ಸಂಪಾದನೆ, ಕನ್ನಡ ಸಾಹಿತ್ಯದ ಜರ್ಮನ್ ಅನುವಾದ ಮಾಡುವ ಮೂಲಕ ಅನುವಾದ ಸಾಹಿತ್ಯಕ್ಕೂ ಹೊಸ ದಿಕ್ಕನ್ನು ತೋರಗೊಟ್ಟಿದ್ದಾರೆ.
ವಿವೇಕ ರೈ ಕೃತಿಗಳು
ತುಳು ಗಾದೆಗಳು, ತುಳು ಒಗಟುಗಳು, ತುಳವ ಸಂಸ್ಕೃತಿ, ತುಳು ಜಾನಪದ ಸಾಹಿತ್ಯ, ಅನ್ವಯಿಕ ಜಾನಪದ, ಪರಂಪರೆ ಮತ್ತು ಸಾಹಿತ್ಯದಲ್ಲಿ ಒಗಟು, ಜರ್ಮನಿಯ ಒಳಗಿನಿಂದ, ಚಿಲಿಯಲ್ಲಿ ಭೂಕಂಪ, ಮೊದಲ ಮೆಟ್ಟಿಲು, ಕನ್ನಡ ದೇಸಿ ಸಮ್ಮಿಲನದ ನುಡಿಗಳು, ಅಕ್ಕರ ಮನೆ ಇವು ಪ್ರಮುಖ ಕೃತಿಗಳು.
ಸಂಶೋಧನಾ ಬರಹಗಳು : ಕನ್ನಡ ನುಡಿನಡೆಯ ಬರಹಗಳು ಇತ್ಯಾದಿ, ಅನುವಾದ : ನೆತ್ತರ ಮದುವೆ , 80 ದಿನಗಳಲ್ಲಿ ವಿಶ್ವ ಪರ್ಯಟನೆ, ಸಂಸ್ಕೃತಿ ಚಿಂತನೆ :ಅರಿವು ಸಾಮಾನ್ಯವೆ ಸಂಪಾದಿತ ಕೃತಿಗಳು : ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು, ಕಡೆಂಗೋಡ್ಲು ಸಾಹಿತ್ಯ, ಶಾಂಭವಿ, ಮುಳಿಯ ತಿಮ್ಮಪ್ಪಯ್ಯನವರ ಸಾಹಿತ್ಯ, ಪೆರುವಾಯಿ ಸುಬ್ಬಯ್ಯ ಶೆಟ್ಟಿಯವರ ತುಳು ಗಾದೆಗಳು, ಜನಪದ ಆಟಗಳು, ತುಳು ಕಬಿತಗಳು, ಮಲೆಕುಡಿಯರು, ಭೂತಾರಾಧನೆಯ ಬಣ್ಣಗಾರಿಕೆ , ಯಕ್ಷಗಾನ ಪ್ರಸಂಗ ಸಂಪುಟ, ಹೊನ್ನಕಂಠಿ, ಶತಮಾನದ ಕೊನೆಯಲ್ಲಿ ಶಿವರಾಮ ಕಾರಂತ, ಅಗ್ರಾಳ ಪುರಂದರ ರೈ ಸಮಗ್ರ ಸಾಹಿತ್ಯ, ರಾಘವಾಂಕನ ಸಮಗ್ರ ಕಾವ್ಯ, ರೂಪಾಂತರ ಗ್ರಂಥ ಸಂಪಾದನೆ : ತುಳು ಸಾಹಿತ್ಯ ಚರಿತ್ರೆ, ಸಮಗ್ರ ಕನ್ನಡ ಜೈನ ಸಾಹಿತ್ಯ-19 ಸಂಪುಟಗಳು, ಶರಣರ ವಚನಗಳ ತುಳು ಭಾಷಾಂತರ, ಮಂಗಳೂರು ದರ್ಶನ, ಮಂಗಳೂರು ನಗರದ ಇತಿಹಾಸ ಸಂಶೋಧನೆ. ತುಳು ಪುಸ್ತಕಗಳು : ತುಳು ಬರವು ಸರವು, ನಾಲಾಯಿಡ್ಡ್ ನಾಲೂರುಗು ವಚನ.
ಇಂಗ್ಲಿಷ್ ಸಾಹಿತ್ಯದಲ್ಲಿ ರೈ ಸಾಧನೆ: 'Siri Epic' as performed by GopalaNaika ,
The tuebingen tulu manuscript, Classical kannada poetry and prose: A reader. In her right hand she held a silver knife with small bells, English grammer just for you, Oral traditions in south india, 'die fliegende eidenchse'.
ಈ ಸುದ್ದಿಯನ್ನೂ ಓದಿ:Karnataka State Awards: ಗುಂಜಾಳಗೆ ಬಸವ ಪುರಸ್ಕಾರ, ವಿವೇಕ್ ರೈಗೆ ಪಂಪ ಪ್ರಶಸ್ತಿ; 19 ಪುರಸ್ಕೃತರ ಪಟ್ಟಿ ಪ್ರಕಟ
ವಿವೇಕ ರೈ ಅವರ ಸಾಹಿತ್ಯ ಮತ್ತು ಸಂಶೋಧನೆಗೆ ಸಂದಿರುವ ಪ್ರಶಸ್ತಿಗಳು
ವಿವೇಕ ರೈ ಕಳೆದ ಐದು ದಶಕಗಳಿಂದ ಸಾಹಿತ್ಯ ಮತ್ತು ಸಂಶೋಧನೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಕನ್ನಡ-ತುಳು ಭಾಷಾ ಸಂಪತ್ತನ್ನು ವಿಶ್ವಕ್ಕೆ ಪರಿಚಯಿಸಿದ ವಿವೇಕ ರೈ ಅವರ ಸಾಧನೆಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಜಾನಪದ, ಸಂಸ್ಕೃತಿ, ದೇಸಿ ಸಮ್ಮೇಳನ ಹಾಗೂ ಕುವೈಟ್ನ ವಿಶ್ವ ತುಳು ಸಮ್ಮೇಳನದ ಅಧ್ಯಕ್ಷತೆಯ ಗೌರವ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವವನ್ನು ರೈ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವೇಕ ರೈ ಅವರಿಗೆ ಈ ಬಾರಿಯ ಪಂಪ ಪ್ರಶಸ್ತಿ ನೀಡಿದೆ. ರೈ ಅಂತಹ ಅಸಾಧಾರಣ ಸಾಧಕ ಮತ್ತು ಸಜ್ಜನ ವ್ಯಕ್ತಿಗೆ ಪ್ರಶಸ್ತಿ ಲಭಿಸುತ್ತಿದ್ದು, ಆ ಮೂಲಕ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ.