ಸಾಗರ: ಬ್ರಾಹ್ಮಣ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಾಗರದ ಸಹಾಯಕ ಉಪ ಪೊಲೀಸ್ ಅಧೀಕ್ಷಕರಿಗೆ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ದೂರು ಸಲ್ಲಿಸಿದೆ. ಸಂಘದ ಅಧ್ಯಕ್ಷ ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ದೂರು ನೀಡಲಾಗಿದೆ.
ದೂರಿನಲ್ಲಿ ಏನಿದೆ?
ಹೊನ್ನಾವರ ತಾಲೂಕು ಮೊಳ್ಕೊಡದ ಶ್ರೀ ರಾಮ ಮಂದಿರ ಪ್ರತಿಷ್ಠಾಪನಾ ರಜತ ಮಹೋತ್ಸವದ ಭಾಗವಾಗಿ ಜ.31ರಂದು ನಡೆದ ಶ್ರೀ ಸೀತಾರಾಮ ಕಲ್ಯಾಣೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರು, ಸಾವಿರಕ್ಕೂ ಹೆಚ್ಚು ಜನರು ಸೇರಿರುವ ಸಭೆಯಲ್ಲಿ ವಿವೇಚನಾ ಪೂರ್ವಕವಾಗಿ ನಾಡಿನ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಕೆಟ್ಟ ಉದ್ದೇಶದಿಂದ ಹಲವು ಬಾರಿ "ಭಟ್ಟ ಮುಂಡೆ ಮಕ್ಕಳು ಎಲ್ಲವನ್ನು ಮಾಡ್ತವೆ", "ಬ್ರಾಹ್ಮಣರು ಸಗಣಿ ಹುಳವಾಗಿ ಸಾಯ್ತಾರೆ" ಎಂದು ಅವಾಚ್ಯವಾಗಿ ಮಾತನಾಡಿದ್ದಾರೆ.
ಇನ್ನು ಸಭೆಯಲ್ಲಿ ಶೂದ್ರ-ಬ್ರಾಹ್ಮಣ ಎನ್ನುವ ಮಾತನ್ನು ಆಡಿ ಸಮಾಜವನ್ನು ಜಾತಿ ಹೆಸರಿನಲ್ಲಿ ತಾರತಮ್ಯದ ವಿಷ ಬೀಜ ಬಿತ್ತುವ ಪ್ರಚೋದನೆಯನ್ನು ಜನರಿಗೆ ನೀಡಿದ್ದಾರೆ. ಹೀಗಾಗಿ ರಾಮಪ್ಪ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿ.ಎನ್.ಎಸ್.) ಕಲಂ. 356 ಮತ್ತು 196 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮತಸ್ಥ ಬ್ರಾಹ್ಮಣ ಅರ್ಚಕರ ಪರಿಷತ್ ಒತ್ತಾಯಿಸಿದೆ.