Sagara News: ಸೆ.22ರಿಂದ ಸಾಗರದಲ್ಲಿ ಸಂಭ್ರಮದ 'ನವರಾತ್ರ ನಮಸ್ಯಾ'; ನಾಳೆ ರಾಘವೇಶ್ವರ ಶ್ರೀಗಳ ಅದ್ಧೂರಿ ಪುರಪ್ರವೇಶ
Sagara News: ಸೆಪ್ಟೆಂಬರ್ 22ರಿಂದ ಸಾಗರದ ಅಗ್ರಹಾರದಲ್ಲಿ ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದಲ್ಲಿ ಆರಂಭಗೊಳ್ಳಲಿರುವ "ನವರಾತ್ರ ನಮಸ್ಯಾ" ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನಾಳೆ ಗೋಕರ್ಣದಿಂದ ಶ್ರೀಗಳು ಸಾಗರಕ್ಕೆ ಪುರಪ್ರವೇಶ ಮಾಡಲಿದ್ದು, ಸಾಗರ ನಗರದಲ್ಲಿ ಸಮಷ್ಟಿ ಸಮಾಜದಿಂದ ಅದ್ಧೂರಿ ಸ್ವಾಗತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

-

ಸಾಗರ: ಸೆಪ್ಟೆಂಬರ್ 22ರಿಂದ ಸಾಗರದ ಅಗ್ರಹಾರದಲ್ಲಿ ಶ್ರೀ ರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ದಿವ್ಯಸಾನ್ನಿಧ್ಯದಲ್ಲಿ ಆರಂಭಗೊಳ್ಳಲಿರುವ "ನವರಾತ್ರ ನಮಸ್ಯಾ" ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ನಾಳೆ ಗೋಕರ್ಣದಿಂದ ಶ್ರೀಗಳು ಸಾಗರಕ್ಕೆ ಪುರಪ್ರವೇಶ ಮಾಡಲಿದ್ದು, ಸಾಗರ ನಗರದಲ್ಲಿ ಸಮಷ್ಟಿ ಸಮಾಜದಿಂದ ಅದ್ಧೂರಿ ಸ್ವಾಗತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಸೆ. 22 ರಿಂದ ನವರಾತ್ರಿ ನಮಸ್ಯಾ ಧಾರ್ಮಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ.
ಪ್ರತಿದಿನ ಮಧ್ಯಾಹ್ನ 3.30 ರಿಂದ 5 ಗಂಟೆಯವರೆಗೆ ಲಲಿತೋಪಾಖ್ಯಾನ ಪ್ರವಚನ ಇರುತ್ತದೆ. ನಂತರ ದೀಪಾಲಂಕಾರ, ದುರ್ಗಾದೀಪ ಪೂಜೆ, ಕುಂಕುಮಾರ್ಚನೆ ಏರ್ಪಡಿಸಲಾಗಿದೆ. ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಏಕಾದಶಿ ದಿನ ವಿಶೇಷ ಶ್ರೀಚಕ್ರ ಆರಾಧನೆ ಇರುತ್ತದೆ.
ಹೊಸನಗರ, ಸಾಗರ, ಸಿದ್ದಾಪುರ ಒಳಗೊಂಡ ಸಾಗರ ಪ್ರಾಂತ್ಯದ ಶಿಷ್ಯಭಕ್ತರ ಸಮಿತಿ ಇದೇ ಪ್ರಥಮ ಬಾರಿ ಸಾಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ವಿಜೃಂಭಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ನವರಾತ್ರ ನಮಸ್ಯಾಕ್ಕೆ ಸಮಸ್ತರನ್ನು ಆಹ್ವಾನಿಸುವ ಅಕ್ಷತಾಭಿಯಾನ ಒಂದೂವರೆ ತಿಂಗಳ ಹಿಂದೆಯೇ ಆರಂಭಗೊಂಡಿದ್ದು, ಮನೆಮನೆಗೆ ಆಹ್ವಾನ ನೀಡುವ ಕಾರ್ಯವನ್ನು ಶ್ರೀಮಠದ ಮಾತೃ ವಿಭಾಗದ ಮಾತೆಯರು ನಡೆಸಿದ್ದಲ್ಲದೆ ಉಡಿ ಸೇವೆಯೂ ಸೇರಿದಂತೆ ಜಗನ್ಮಾತೆಯ ಆರಾಧನೆಗೆ ಪೂರಕವಾಗಿರುವ ಸಕಲ ಸಿದ್ಧತೆಗೆ ತಂಡೋಪತಂಡವಾಗಿ ಆಗಮಿಸಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯದಲ್ಲಿ ಇಡೀ ಮಹಾಮಂಡಲ ವ್ಯಾಪ್ತಿಯ ಸಾವಿರಾರು ಮಾತಾ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.
ಇನ್ನು ಧಾರ್ಮಿಕದಿಂದ ಹಿಡಿದು ಸಾಂಸ್ಕೃತಿಕದವರೆಗೆ, ಶಬರಿ ಆತಿಥ್ಯದಿಂದ ಹಿಡಿದು ಸೇವಾ ಕೇಂದ್ರದವರೆಗೆ ಗಣ್ಯರಾಗಮನದ ಸ್ವಾಗತದಿಂದ ಹಿಡಿದು ಪ್ರಸಾದ ವಿತರಣೆಯವರೆಗೆ ಸಮಿತಿಯಿಂದ ರೂಪುಗೊಂಡಿರುವ 14 ವಿಭಾಗದ ಸಂಚಾಲಕರು, ಅವರೊಂದಿಗೆ ಪ್ರತಿ ಸಂಚಾಲಕರ ತಂಡದಲ್ಲಿ ತಲಾ 10 ಸಹ ಸಂಚಾಲಕರು ಹೀಗೆ 500 ಹೆಚ್ಚು ಕಾರ್ಯಕರ್ತರು ಈ ನವರಾತ್ರ ಸಮಸ್ಯಾ ಕಾರ್ಯಕ್ರಮದಲ್ಲಿ ಸೇವೆ ಮಾಡಲಿದ್ದಾರೆ.
ನವರಾತ್ರ ನಮಸ್ಯಾ ಸಿದ್ಧತೆಯನ್ನು ಶುಕ್ರವಾರ ಸಮಿತಿಯ ಅಧ್ಯಕ್ಷ ಗುರುಮೂರ್ತಿ ಹೆಗಡೆ ಕಲ್ಸೆಮನೆ ಶಿಕಾರಿಪುರ ಅವರು ಸಂಚಾಲನ ತಂಡದ ಪ್ರಮುಖರೊಂದಿಗೆ ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲೋಕಕಲ್ಯಾಣಾರ್ಥವಾಗಿ ಸಂಕಲ್ಪಗೊಂಡು ಸಾಗರದಲ್ಲಿ ನಡೆಯುತ್ತಿರುವ ʼನವರಾತ್ರ ನಮಸ್ಯಾʼ ದಲ್ಲಿ ಸಮಸ್ತರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಈ ವೇಳೆ ಕ್ರಿಯಾ ಸಮಿತಿಯ ಸಂಚಾಲಕ ಮುರಳಿ ಗೀಜಗಾರು, ಸಂಯೋಜಕ ಶಿವರಾಮಯ್ಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಹೆಗಡೆ ಕೆರೆಕೈ, ಗುರುಪಾದ ಭೀಮನಕೋಣೆ ಸೇರಿದಂತೆ ವಿವಿಧ ವಿಭಾಗದ ಸಂಚಾಲಕರು ಇದ್ದರು.
ನಾಳೆ ಪುರ ಪ್ರವೇಶ
ʼನವರಾತ್ರ ನಮಸ್ಯಾʼ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯವಹಿಸಲಿರುವ ಶ್ರೀರಾಘವೇಶ್ವರ ಭಾರತೀ ಶ್ರೀಗಳವರ ಪುರಪ್ರವೇಶ ಕಾರ್ಯಕ್ರಮ ಶನಿವಾರ ಸಂಜೆ 5.30 ಗಂಟೆಗೆ ಇಲ್ಲಿನ ಶಾರದಾಂಬ ವೃತ್ತದಿಂದ ಆಯೋಜಿಸಲಾಗಿದೆ. ಅಲ್ಲಿಂದ ಚಾಮರಾಜಪೇಟೆ ಮಾರ್ಗವಾಗಿ ಗಣಪತಿ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ನಡೆಯಲಿದೆ. 500ಕ್ಕೂ ಹೆಚ್ಚು ಮಾತೆಯರಿಂದ ಪೂರ್ಣ ಕುಂಭ ಸ್ವಾಗತ, ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳಿಂದ ನಾದಸ್ವರ ವಾದನ, ಪ್ರಸಿದ್ದ ಮೂರು ಚಂಡೆ ತಂಡಗಳಿಂದ ಚೆಂಡೆ ವಾದನ, ಶ್ರೀರಾಮನ ಆಕೃತಿಯ ವಿಶೇಷ ಮೂರ್ತಿಯ ಆಕರ್ಷಣೆ ಹಾಗೂ ಸಾಗರ ನಗರದ ವಿವಿಧ ಸಮಾಜದ 20ಕ್ಕೂ ಹೆಚ್ಚು ತಂಡಗಳಿಂದ ಭಜನೆ ಮತ್ತು ವಿಶೇಷವಾಗಿ ಕುಂದಾಪುರ ಶಿರೂರಿನ ಪರಿಣಿತ ಕಲಾವಿದರಿಂದ ನೃತ್ಯ ಭಜನಾ ತಂಡ ಈ ಪುರಪ್ರವೇಶ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಪುರ ಪ್ರವೇಶ ಮತ್ತು ನಗರಾಲಂಕಾರ ಸಂಚಾಲಕ ಕೆ.ಆರ್. ಗಣೇಶ್ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Dasara Shopping Trend 2025: ಮಾರುಕಟ್ಟೆಗೆ ಮರಳಿದ ದಸರಾ ಗೊಂಬೆಗಳು