ಶಿವಮೊಗ್ಗ: ದೇಶದಲ್ಲಿ ಅಕಾಲಿಕ ಮಳೆಯಿಂದ ಜಲ ಕಂಟಕ ಎದುರಾಗಲಿದೆ. ಮಳೆ, ಗುಡುಗು, ಸಿಡಿಲು ಹೆಚ್ಚಾಗಿ ಭೂಮಿ ತಲ್ಲಣಗೊಳ್ಳಲಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt swamiji) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಸೊರಬ ತಾಲೂಕಿನ ಜಡೆ ಸಂಸ್ಥಾನ ಮಠದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಸಕಾಲಿಕವಾಗಿ ಮಳೆಯಾಗದೆ ಹೋದರೂ, ಅಕಾಲಿಕವಾಗಿ ಸುರಿಯುವ ಮಳೆಯಿಂದಾಗಿ ಜಲಕಂಟಕ ಎದುರಾಗಲಿದೆ. ಮಳೆ, ಗುಡುಗು ಮತ್ತು ಸಿಡಿಲಿನ ಆರ್ಭಟ ಹೆಚ್ಚಾಗಲಿದ್ದು, ಸಾಮಾನ್ಯವಾಗಿ ಮಳೆಗಾಲದ ನಿಗದಿತ ಅವಧಿಯಲ್ಲಿ ಮಳೆಯಾಗದೆ, ಅನಿರೀಕ್ಷಿತ ಸಮಯದಲ್ಲಿ ಸುರಿಯುವ ಮಳೆಯು ಕೃಷಿ ಮತ್ತು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆ ಮತ್ತು ಬೆಳೆ ಉತ್ತಮವಾಗಿರಲಿದೆ ಎಂಬ ಆಶಾದಾಯಕ ಮಾತನ್ನು ಹೇಳಿದರೂ, ಕೆಲವು ಆಕಸ್ಮಿಕ ಘಟನೆಗಳು ಆತಂಕ ಮೂಡಿಸಲಿವೆ. ವಿಶೇಷವಾಗಿ ದೊಡ್ಡ ದೊಡ್ಡ ನಗರಗಳು ಪ್ರಕೃತಿ ವಿಕೋಪ ಅಥವಾ ಆಕಸ್ಮಿಕ ಅನಾಹುತಗಳಿಂದ ಆಪತ್ತನ್ನು ಎದುರಿಸಲಿವೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಮತ್ತು ದೇಶದ ರಾಜಕಾರಣದ ಬಗ್ಗೆ ಶ್ರೀಗಳು ಪ್ರತಿಕ್ರಿಯಿಸಿ, ಅರಸನ ಅರಮನೆ ಕಳೆಗುಂದೀತು ಮತ್ತು ಪಟ್ಟದ ಆನೆ ಗಾಂಭೀರ್ಯದಿಂದ ನಡೆದೀತು ಎಂಬ ಅವರ ಮಾರ್ಮಿಕ ನುಡಿಗಳು, ಅಧಿಕಾರ ಕೇಂದ್ರಗಳಲ್ಲಿ ಬದಲಾವಣೆ ಅಥವಾ ಪ್ರಭಾವಿ ವ್ಯಕ್ತಿಗಳ ವರ್ಚಸ್ಸಿನಲ್ಲಿ ಏರುಪೇರಾಗುವ ಮುನ್ಸೂಚನೆಯನ್ನು ನೀಡಿವೆ. ಪಟ್ಟದ ಆನೆಯ ಗಾಂಭೀರ್ಯದ ನಡಿಗೆಯು ಸ್ಥಿರತೆ ಅಥವಾ ಹೊಸ ನಾಯಕತ್ವದ ಉದಯವನ್ನು ಸೂಚಿಸುತ್ತಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಸತ್ಯವು ಯಾವಾಗಲೂ ಕಹಿಯಾಗಿರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ ಶ್ರೀಗಳು, ಹಿಂದೆ ತಾವು ನುಡಿದಿದ್ದ ಭವಿಷ್ಯಗಳು ಹೇಗೆ ನಿಜವಾಗಿವೆ ಎಂಬುದನ್ನು ನೆನಪಿಸಿಕೊಂಡಿದ್ದಾರೆ.