ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyarappa: ಮೇರು ಸಾಹಿತಿ ಭೈರಪ್ಪ ಅತ್ಯಂತ ಸರಳಾತಿ ಸರಳ ವ್ಯಕ್ತಿತ್ವದವರಾಗಿದ್ದರು: ಜೋಶಿ ಸ್ಮರಣೆ

SL Bhyarappa: ನಾಡಿನ ಹೆಸರಾಂತ ಸಾಹಿತಿ, ಸರಸ್ವತಿ ಸಮ್ಮಾನ್‌, ಪದ್ಮಶ್ರೀ ಪುರಸ್ಕೃತ ಕಾದಂಬರಿಕಾರ, ಸಂಶೋಧಕರಾದ ಡಾ.ಎಸ್‌.ಎಲ್‌. ಭೈರಪ್ಪ ಅವರ ಪಾರ್ಥಿವ ಶರೀರಕ್ಕೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಅಂತಿಮ ಗೌರವಾರ್ಪಣೆ ಸಲ್ಲಿಸಿದರು.

ಸಾಹಿತಿ ಭೈರಪ್ಪ ಅತ್ಯಂತ ಸರಳಾತಿ ಸರಳ ವ್ಯಕ್ತಿತ್ವದವರಾಗಿದ್ದರು: ಜೋಶಿ

-

Profile Siddalinga Swamy Sep 26, 2025 5:30 PM

ಮೈಸೂರು: ನಾಡಿನ ಹೆಸರಾಂತ ಸಾಹಿತಿ, ಸರಸ್ವತಿ ಸಮ್ಮಾನ್‌, ಪದ್ಮಶ್ರೀ ಪುರಸ್ಕೃತ ಕಾದಂಬರಿಕಾರ, ಸಂಶೋಧಕರಾದ ಡಾ.ಎಸ್‌.ಎಲ್‌. ಭೈರಪ್ಪ (SL Bhyarappa) ಅವರ ಪಾರ್ಥಿವ ಶರೀರಕ್ಕೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಅಂತಿಮ ಗೌರವಾರ್ಪಣೆ ಸಲ್ಲಿಸಿದರು. ಶುಕ್ರವಾರ ಬೆಳಗ್ಗೆ ಮೈಸೂರಿಗೆ ತೆರಳಿ ಭೈರಪ್ಪ ಅವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಶೋಕ ಸಂದೇಶ ನೀಡಿದರಲ್ಲದೆ, ಪಾರ್ಥಿವ ಶರೀರಕ್ಕೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಅವರ ಪರವಾಗಿ ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು. ಚಾಮುಂಡಿ ಬೆಟ್ಟದ ಬಳಿ ರುದ್ರಭೂಮಿಗೂ ತೆರಳಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಶೃದ್ಧಾಂಜಲಿ ಸಲ್ಲಿಸಿದರು.

ನಂತರ ಮಾತನಾಡಿ ಸಚಿವರು, ಮೇರು ಸಾಹಿತಿ ಭೈರಪ್ಪ ಅವರಿಂದು ಪಂಚಭೂತಗಳಲ್ಲಿ ಲೀನರಾಗಿದ್ದು, ಅವರೆಂದೂ ನೇಮ್‌-ಫೇಮ್‌ ಬಂದರೂ ಬೀಗುತ್ತಿರಲಿಲ್ಲ. ಅತ್ಯಂತ ಸರಳಾತಿ ಸರಳ ವ್ಯಕ್ತಿತ್ವದವರಾಗಿದ್ದರು. ಪ್ರಶಸ್ತಿ ಮೌಲ್ಯವನ್ನೆಲ್ಲ ಬಡವರಿಗೆ, ಸಮಾಜಕ್ಕೇ ಕೊಡುಗೆಯಾಗಿ ನೀಡುತ್ತಿದ್ದಂತಹ ಸಹೃದಯಿ ಸಾಹಿತಿಯಾಗಿದ್ದರು ಎಂದು ಸಚಿವ ಪ್ರಲ್ಹಾದ್‌ ಜೋಶಿ ಸ್ಮರಿಸಿದರು.

ಡಾ.ಎಸ್‌.ಎಲ್‌.ಭೈರಪ್ಪ ಅವರು ನಾಡು ಕಂಡಂತ ಅತ್ಯಂತ ಪ್ರತಿಭಾನ್ವಿತ ಬರಹಗಾರರು. ಅವರು ಯಾವುದೇ ಕಾದಂಬರಿಯನ್ನೂ ಸಮಗ್ರ ಅಧ್ಯಯನ ಇಲ್ಲದೆ ಬರೆಯುತ್ತಿರಲಿಲ್ಲ. ವಿಷಯಾಧಾರಿತವಾಗಿ ಓದಿ, ಅಧ್ಯಯನ, ವಿಮರ್ಶೆ ಮಾಡಿ ತಮ್ಮದೇ ವಿಶಿಷ್ಠ ಧಾಟಿಯಲ್ಲಿ ಬರೆಯುತ್ತಿದ್ದರು ಎಂದು ನೆನಪಿಸಿಕೊಂಡರು.

ಭೈರಪ್ಪ ಅವರದ್ದು ಒಂದು ಐತಿಹಾಸಿಕ ಅಧ್ಯಯನ. ಅವರ 25ಕ್ಕೂ ಹೆಚ್ಚಿನ ಕಾದಂಬರಿಗಳು ಭಾಷಾಂತರಗೊಂಡಿವೆ. ಮರಾಠಿ, ತೆಲುಗು ಮಾತ್ರವಲ್ಲದೆ ಚೀನಾ, ರಷ್ಯಾ ಹೀಗೆ ಅನೇಕ ಭಾಷೆಗಳಲ್ಲಿ ಅನುವಾದವಾಗಿವೆ. ಅವರ ಸಾಕಷ್ಟು ಕೃತಿಗಳು ಬಹು ಸಂಖ್ಯೆಯಲ್ಲಿ ಮರುಮುದ್ರಣವಾಗಿವೆ. ಕನ್ನಡ ನಾಡಿನ ಹೊರತಾಗಿಯೂ ಅವರು ದೇಶಾದ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಬಣ್ಣಿಸಿದರು.

ಯಾವುದೇ ಪ್ರಶಸ್ತಿಯನ್ನೂ ಭೈರಪ್ಪ ಅವರು ಕೇಳಿರಲಿಲ್ಲ. ಯಾವುದೇ ಶಿಫಾರಸ್ಸು ಮಾಡುತ್ತಿರಲಿಲ್ಲ. ಅವರ ಸಾಹಿತ್ಯ ಕೃಷಿಗೆ ಸರಸ್ವತಿ ಸಮ್ಮಾನ್‌, ಪದ್ಮಭೂಷಣ, ಪದ್ಮಶ್ರೀಗಳಂತಹ ಪ್ರತಿಷ್ಠಿತ ಪ್ರಶಸ್ತಿಗಳೇ ಅವರನ್ನು ಅರಸಿ ಹೋಗಿದ್ದು, ನಾಡಿನಾದ್ಯಂತ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾದ ಹಿರಿಮೆಯ ಸಾಹಿತಿ ಎಂದು ಭಾವುಕರಾಗಿ ನುಡಿದರು.

ಈ ಸುದ್ದಿಯನ್ನೂ ಓದಿ | SL Bhyrappa: ಭೈರಪ್ಪ ನಿಧನ ಸಾಹಿತ್ಯಲೋಕಕಷ್ಟೇ ಅಲ್ಲ ಚಿತ್ರರಂಗಕ್ಕೂ ತುಂಬಲಾರದ ನಷ್ಟ; ತಾರಾ ಅನುರಾಧಾ

ಪ್ರಧಾನಿ ಕಂಬನಿ, ಶೋಕ ಸಂದೇಶ

ʼಭಾರತದ ಆತ್ಮವನ್ನು ಆಳವಾಗಿ ಅಧ್ಯಯನ ಮಾಡಿದ ಒಬ್ಬ ಧೀಮಂತ ಸಾಹಿತಿ, ಸಂಶೋಧಕರನ್ನು ಕಳೆದುಕೊಂಡಂತಾಗಿದೆʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕಂಬನಿ ಮಿಡಿದಿದ್ದು, ಶೋಕ ಸಂದೇಶ ಕಳಿಸಿದ್ದಾರೆ. ಬೈರಪ್ಪ ಅವರ ಕುಟುಂಬಕ್ಕೆ ಸ್ಥೈರ್ಯ ನೀಡಿದ್ದಾರೆ. ಭಾರತ ಸರ್ಕಾರ, ಪ್ರಧಾನಿ ಮೋದಿ ಅವರ ಪರವಾಗಿ ಮತ್ತು ವೈಯಕ್ತಿಕವಾಗಿ ಭೈರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.