ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pavagada News: ಸಮಾಜದ ಒಳಿತಿಗಾಗಿ ಮಾಡಿದ ಸಾಧನೆ, ಸೇವೆಯೇ ಶಾಶ್ವತ: ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್

Pavagada News: ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾಮದ ಶ್ರೀ ವಿನಾಯಕ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 1996-97, 1997-98 ಹಾಗೂ 1998-99ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪೊನ್ನಸಮುದ್ರ ಗ್ರಾಮದ ಶ್ರೀ ವಿನಾಯಕ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ.

ಪಾವಗಡ, ಜು.21: ಮನುಷ್ಯನ ಹೆಸರು ಕಾಲಕ್ರಮೇಣ ಮರೆಯಾಗಬಹುದು. ಆದರೆ ಸಮಾಜದ ಒಳಿತಿಗಾಗಿ ಮಾಡಿದ ಸಾಧನೆ ಮತ್ತು ಸೇವೆಯೇ ಶಾಶ್ವತವಾಗಿ ಉಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಹೆಸರಿಗಿಂತ ಸಾಧನೆ ಮಾಡುವ ಗುರಿಯನ್ನು ಹೊಂದಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್ ಹೇಳಿದರು.

ಪಾವಗಡ ತಾಲೂಕಿನ (Pavagada News) ಪೊನ್ನಸಮುದ್ರ ಗ್ರಾಮದ ಶ್ರೀ ವಿನಾಯಕ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 1996-97, 1997-98 ಹಾಗೂ 1998-99ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ಶಿಕ್ಷಕ ಜೀವನವನ್ನು ಸ್ಮರಿಸಿದ ಅವರು, ‘ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ಸಿಗುವ ಅತಿದೊಡ್ಡ ಗೌರವ. ಹಲವು ವರ್ಷಗಳ ನಂತರವೂ ಶಿಕ್ಷಕರನ್ನು ನೆನಪಿಸಿಕೊಂಡು ಗೌರವಿಸುವ ಹಳೆಯ ವಿದ್ಯಾರ್ಥಿಗಳ ಪ್ರೀತಿ ಮತ್ತು ಅಭಿಮಾನವೇ ಶಿಕ್ಷಕರ ಜೀವನದ ನಿಜವಾದ ಸಂಪತ್ತು’ ಎಂದು ಹೇಳಿದರು.

Pavagada News 1

ಶಾಲೆಯ ಐದು ದಶಕಗಳ ಪಯಣ

1974ರಲ್ಲಿ ಆರಂಭವಾದ ಶ್ರೀ ವಿನಾಯಕ ವಿದ್ಯಾಪೀಠ ಪ್ರೌಢಶಾಲೆ ಅನೇಕ ಸಂಕಷ್ಟಗಳು, ಸವಾಲುಗಳು ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಎದುರಿಸಿ ಇಂದು ಈ ಭಾಗದ ಪ್ರತಿಷ್ಠಿತ ಶಿಕ್ಷಣಕ್ಕೆ ಬಹಳಷ್ಟು ಮಹನೀಯರು ಕೈ ಜೋಡಿಸಿದಾಗ ಈ ಸಂಸ್ಥೆಯಾಗಿ ಬೆಳೆದಿದೆ ಎಂದು ತಿಳಿಸಿದ ಅವರು, ಶಿಕ್ಷಕರ ಶ್ರಮ, ಆಡಳಿತ ಮಂಡಳಿಯ ಸಹಕಾರ, ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳ ಬೆಂಬಲದಿಂದ ಶಾಲೆ ನಿರಂತರವಾಗಿ ಅಭಿವೃದ್ಧಿಯತ್ತ ಸಾಗಿದೆ ಎಂದು ಹೇಳಿದರು.

ಸಮಾಜಕ್ಕೆ ಮರಳಿ ಕೊಡಿ: ಗಂಗಾಧರ್

ನಿವೃತ್ತ ಮುಖ್ಯ ಶಿಕ್ಷಕ ಗಂಗಾಧರ್ ಮಾತನಾಡಿ, ʼಶಿಕ್ಷಣವು ಕೇವಲ ಉದ್ಯೋಗ ಪಡೆಯಲು ಮಾತ್ರವಲ್ಲ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹ ಅಗತ್ಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿಗಳು ಸಮಾಜಕ್ಕೆ ಮರಳಿ ಕೊಡುವ ಮನೋಭಾವ ಬೆಳೆಸಿಕೊಳ್ಳಬೇಕುʼ ಎಂದು ಕರೆ ನೀಡಿದರು.

ಶಿಕ್ಷಕರಿಗೆ ಆತ್ಮೀಯ ಸನ್ಮಾನ

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಅಂತರಗಂಗೆ ಶಂಕರಪ್ಪ, ಎಂ. ರಾಮಪ್ಪ, ಗಂಗಾಧರಪ್ಪ, ರಾಮಚಂದ್ರ ನಾಯ್ಕ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು. ಶಿಕ್ಷಕರ ಸೇವೆಯನ್ನು ಸ್ಮರಿಸಿದ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡು, ಶಿಕ್ಷಕರ ಮಾರ್ಗದರ್ಶನವೇ ತಮ್ಮ ಯಶಸ್ಸಿನ ಬುನಾದಿಯಾಗಿದೆ ಎಂದು ಹೇಳಿದರು.

ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವ ಸಂಕಲ್ಪ

ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಹಳೆಯ ವಿದ್ಯಾರ್ಥಿಗಳ ಸಂಘವು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಗ್ರಂಥಾಲಯ ಅಭಿವೃದ್ಧಿ, ಡಿಜಿಟಲ್ ಶಿಕ್ಷಣ, ವೃತ್ತಿ ಮಾರ್ಗದರ್ಶನ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಪ್ರತಿವರ್ಷ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಆಯೋಜಿಸಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವ ಸಂಕಲ್ಪವನ್ನು ಹಳೆಯ ವಿದ್ಯಾರ್ಥಿಗಳು ವ್ಯಕ್ತಪಡಿಸಿದರು.‌

Bengaluru Power Cut: ಜುಲೈ 22ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

ಉಚಿತ ನೋಟ್‌ಬುಕ್ ವಿತರಣೆ

ಕಾರ್ಯಕ್ರಮದಲ್ಲಿ ತ್ರಿವರ್ಣ ಫೌಂಡೇಶನ್ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅವಧಿಗೆ ಸಾಕಾಗುವಷ್ಟು ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಭೋಜನಾಯ್ಕ್, ತ್ರಿವರ್ಣ ಫೌಂಡೇಶನ್ ಅಧ್ಯಕ್ಷ ಗೋಪಾಲ್, ಕಾರ್ಯದರ್ಶಿ ಮೋಹನ್ ಕುಮಾರ್ ಕೆ.ಎನ್., ಶ್ರುತಿ ಮೋಹನ್, ರಂಜಿತಾ ಎ. ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಹಾಗೂ ಗಣ್ಯರು ಉಪಸ್ಥಿತರಿದ್ದರು.