ತುಮಕೂರು: ಎಲ್ಐಸಿ ವಿಮೆ ಹಣದ ಆಸೆಗಾಗಿ ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವ ಘಟನೆ (Tumkur Murder Case) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 30 ಲಕ್ಷ ರೂ. ಎಲ್ಐಸಿ ಪಾಲಿಸಿ ಹಣ ಲಪಟಾಯಿಸಲು ಸ್ವಂತ ತಮ್ಮನನ್ನೇ ಅಣ್ಣ ಕೊಲೆ ಮಾಡಿ, ಬೈಕ್ ಅಪಘಾತ ಎಂದು ಕಥೆ ಕಟ್ಟಿದ್ದ. ಆದರೆ, ಪೊಲೀಸರ ತನಿಖೆಯ ವೇಳೆ ಆರೋಪಿಯ ನಿಜಬಣ್ಣ ಬಯಲಾಗಿದೆ.
ತುಮಕೂರು ಜಿಲ್ಲೆ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಮೇಶ್ (35) ಎಂಬಾತನ ಕೊಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮೃತ ರಮೇಶ್ ಸಹೋದರ ಹನುಮಂತುರಾಜು ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ರಮೇಶ್ ಮೂಲತಃ ಆಂಧ್ರಪ್ರದೇಶದವ. ಕಳೆದ 6 ವರ್ಷದಿಂದ ಬೆಂಗಳೂರಿನಲ್ಲಿ ಎಳನೀರು ವ್ಯಾಪಾರ ಮತ್ತು ಮಂಡ್ಯದಲ್ಲಿ ಕಬ್ಬಿನ ಜ್ಯೂಸ್ ವ್ಯಾಪಾರ ಮಾಡಿಕೊಂಡಿದ್ದ. ಹೆಂಡತಿಯಿಂದ ದೂರವಾಗಿ ಮಾಟಮಂತ್ರ ಮಾಡುವ ವೃತ್ತಿಯಲ್ಲಿ ತೊಡಗಿದ್ದ. ಅಲ್ಲದೇ ತನ್ನ ಸ್ವಂತ ಅಣ್ಣಂದಿರ ಸಂಸಾರಕ್ಕೆ ಮಾಟಮಂತ್ರ ಮಾಡಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ.
ತಮ್ಮ ರಮೇಶ್ ಹೆಸರಿನಲ್ಲಿ ಅಣ್ಣ ಹನುಮಂತರಾಜು 15 ಲಕ್ಷ ರೂಪಾಯಿ ಎಲ್ಐಸಿ ಪಾಲಿಸಿ ಮಾಡಿಸಿದ್ದ. ಅದರ ನಾಮಿನಿ ತನ್ನ ಹೆಸರಿಗೆ ಮಾಡಿಸಿಕೊಡಿದ್ದ. ಅಣ್ಣ ಹನುಮಂತರಾಜು ಪ್ರತಿ ವರ್ಷಕ್ಕೆ ತಮ್ಮನ ಪಾಲಿಸಿಗೆ 85,000 ರೂ. ವಿಮಾ ಕಂತನ್ನು ಪಾವತಿ ಮಾಡುತ್ತಾನೆ. ಚಾಲ್ತಿಯಲ್ಲಿ ಇರುವ ವಿಮೆಯು ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ನಾಮಿನಿದಾರರಿಗೆ ವಿಮೆ ಮೊತ್ತದ ಡಬಲ್ ಹಣ ಅಂದರೆ 30 ಲಕ್ಷ ಹಣ ಪಾವತಿಯಾಗುವಂತೆ ಇತ್ತು. ಈ ಹಣದ ದುರಾಸೆಯಿಂದ ಆರೋಪಿ ಹನುಮಂತರಾಜು ತಮ್ಮನನ್ನೇ ಕೊಲೆ ಮಾಡಿದ್ದಾನೆ.
ನಿಧಿ ಪೂಜೆ ಇದೆ ಎಂದು ಕರೆದೊಯ್ದು ಕೊಲೆ
ಬೆಂಗಳೂರಿನ ನವಯುಗ ಟೋಲ್ ಬಳಿಯ ತನ್ನ ಅಂಗಡಿಗೆ ಬರುತಿದ್ದ ಲಕ್ಷ್ಮೀಕಾಂತ, ನವೀನ್ ಹಾಗೂ ಎಂ.ಡಿ.ಜಿಲಾನ್ ಜೊತೆ ಹನುಮಂತರಾಜು ಸೇರಿ ಸಂಚು ರೂಪಿಸಿ, ರಮೇಶನ ಕೊಲೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.
ಕಳೆದ ಜೂನ್ 19ರಂದು ಯಾವುದೋ ನಿಧಿ ಪೂಜೆ ಇದೆ ಎಂದು ರಮೇಶ್ನನ್ನು ಶಿರಾ ಅಮರಾಪುರ ರಸ್ತೆ ನಿರ್ಜನ ಪ್ರದೇಶಕ್ಕೆ ಅಣ್ಣ ಹನುಮಂತರಾಜು ಕರೆದೊಯ್ದಿದ್ದ. ಅಲ್ಲಿ ದೊಣ್ಣೆಯಿಂದ ಆತನ ಮೇಲೆ ಹಲ್ಲೆ ನಡೆಸಿ ಮೈಮೇಲೆ ಕಾರು ಹತ್ತಿಸಲಾಗಿದೆ. ಆಗಲೂ ಜೀವ ಹೋಗದಿದ್ದಾಗ ಆರೋಪಿಗಳು ವೈರ್ನಿಂದ ಮೂಲಕ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ನಂತರ ಶವ ಹಾಗೂ ಬೈಕನ್ನು ರಸ್ತೆಯಲ್ಲಿ ಹಾಕಿದ್ದರು. ಬಳಿಕ ಬೈಕ್ನ ಮುಂಭಾಗವನ್ನು ಇವರೇ ಜಖಂ ಮಾಡಿ ಅಪಘಾತದ ನಾಟಕ ಮಾಡಿದ್ದರು.
"ತಾಯಿ ನನ್ನನ್ನು ಕಂಟ್ರೋಲ್ ಮಾಡುತ್ತಿದ್ದಳು"; ಕುಟುಂಬಸ್ಥರ ಕೊಲೆ ಬಗ್ಗೆ ಹಂತಕಿ ಶ್ವೇತಾ ಹೇಳಿದ್ದೇನು?
ಮೃತನ ಹಿರಿಯ ಅಣ್ಣ ರಂಗನಾಥ ಕೊಟ್ಟ ದೂರಿನ ಪ್ರಕಾರ ಪೊಲೀಸರು ಅನುಮಾನಾಸ್ಪದ ಸಾವು ಎಂದು ಎಫ್ಐಆರ್ ದಾಖಲಿಸಿದರು. ನಂತರ 3 ತಂಡಗಳನ್ನು ರಚಿಸಿದ ಪೊಲೀಸರು ಆರೋಪಿ ಹನುಮಂತರಾಜು ಸೇರಿ ಆರೋಪಿಗಳನ್ನು ಬಂಧಿಸಿದ್ದಾರೆ.