ತುಮಕೂರು: ಕುಂಕುಮ ಇಡುವ ವೇಳೆಯಲ್ಲಿ ಅನುಚಿತವಾಗಿ ವರ್ತನೆ ತೋರಿದ್ದಾರೆ ಎಂಬ ಆರೋಪದಲ್ಲಿ ವೃದ್ಧ ಅರ್ಚಕರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವುದು ತುಮಕೂರು ಸಮೀಪದ ದೇವರಾಯನ ದುರ್ಗದಲ್ಲಿ (Devarayanadurga temple) ನಡೆದಿದೆ. ಅರ್ಚಕನ ಮೇಲೆ ಮಹಿಳೆಯರು ಹಾಗೂ ಯುವಕರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೇವರಾಯನ ದುರ್ಗ ದೇವಸ್ಥಾನದ ಅರ್ಚಕ ನಾಗಭೂಷಣಾಚಾರ್ಯ ಎಂಬುವರ ಮೇಲೆ ಹಲ್ಲೆ ನಡೆದಿದೆ. ಕುಂಕುಮ ಇಡುವಾಗ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಯುವಕರು ಕೈ ಹಾಗೂ ಕೋಲಿನಿಂದ ಹಲ್ಲೆ ಮಾಡಿದ್ದಾರೆ. ಅರ್ಚಕರನ್ನು ದೇವಸ್ಥಾನದ ಮೆಟ್ಟಿಲ ಬಳಿ ಸುತ್ತುವರೆದ ಮಹಿಳೆಯರು ಹಾಗೂ ಯುವಕರು ದೊಣ್ಣೆಯಿಂದ ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಕುರಿತಂತೆ ಹಲ್ಲೆಗೊಳಗಾದ ಅರ್ಚಕ ನಾಗಭೂಷಣಾಚಾರ್ಯ ಅವರು ಮಾಧ್ಯಮಗಳ ಜತೆ ಮಾತನಾಡಿ, ಮೊನ್ನೆ ಮಧ್ಯಾಹ್ನ ನನ್ನ ಮೇಲೆ ಹಲ್ಲೆ ನಡೆದಿದೆ. ನನ್ನದಲ್ಲದ ತಪ್ಪಿಗೆ ನಾನು ಮಾನಸಿಕವಾಗಿ ನೊಂದಿದ್ದೇನೆ. ಅವರು ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ನನ್ನದೇ ತಪ್ಪು ಎನ್ನುವ ರೀತಿಯಲ್ಲಿ ಬಿಂಬಿಸಿದ್ದಾರೆ. ದೇವಸ್ಥಾನದ ಸಂಪ್ರದಾಯದ ಪ್ರಕಾರ ನಾವು ಪ್ರಸಾದವನ್ನ ಕೊಡುವಂಥಹ ಕ್ರಮ ಇದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಸುಮಾರು 25 ವರ್ಷಗಳಿಂದ ಈ ಸೇವೆಯನ್ನು ಮಾಡಿಕೊಂಡು ಬರ್ತಿದ್ದೇನೆ. ಇದುವರೆಗೂ ಯಾರೂ ಕೂಡ ನನ್ನ ಬಗ್ಗೆ ಕೆಟ್ಟದ್ದಾಗಿ ನಡ್ಕೊಂಡಿಲ್ಲ. ಮರ್ಯಾದೆ ಉಳಿಸಿಕೊಂಡು ಇಲ್ಲಿಯವರೆಗೂ ಬದುಕ್ಕೆದ್ದೇನೆ ಎಂದು ಹೇಳಿದ್ದಾರೆ.
ಪೊಲೀಸರಿಗೆ ದೂರು
ಭಗವಂತ ಅವರಿಗೆ ಒಳ್ಳೆ ಬುದ್ಧಿ ಕೊಡಲಿ. ಅವರು ಮಾಡಿರುವ ತಪ್ಪನ್ನ ಅರ್ಥ ಮಾಡಿಕೊಳ್ಳಲಿ. ಈ ವಿಚಾರವಾಗಿ ನಮ್ಮ ಮೇಲಧಿಕಾರಿಗಳಿಗೂ ನಾನು ತಿಳಿಸಿದ್ದೇನೆ. ಕ್ಯಾತ್ಸಂದ್ರ ಪೊಲೀಸರಿಗೂ ನಾನು ಲಿಖಿತವಾಗಿ ದೂರು ನೀಡಿದ್ದೇನೆ. ನನಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಿದ್ದೇನೆ. ದೇವಸ್ಥಾನಕ್ಕೆ ನೂರಾರು ಮಂದಿ ಬರುತ್ತಾರೆ, ಅವರು ಎಲ್ಲಿಯವರು ಅಂತ ಹೇಳೋಕಾಗಲ್ಲ. ಹಾಸನ ಮೂಲದವರು ಅಂತ ಕೇಳ್ಪಟ್ಟೆ ಎಂದು ಹೇಳಿದ್ದಾರೆ.