Honeytrap Case: ಪ್ರೀತಿ, ಮದುವೆ ಹೆಸರಲ್ಲಿ ನಾಲ್ವರಿಗೆ ವಂಚನೆ; ಮಹಿಳೆ ವಿರುದ್ಧ ಕೇಸ್ ದಾಖಲು
Honeytrap case: ಸಾಮಾಜಿಕ ಜಾಲತಾಣದ ಮೂಲಕ ಪುರುಷರ ಸ್ನೇಹ ಸಂಪಾದಿಸಿ ಅವರನ್ನು ಪ್ರೀತಿ-ಪ್ರೇಮ, ಮದುವೆ ಹೆಸರಿನಲ್ಲಿ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ವಂಚಿಸುತ್ತಿದ್ದ ಮಹಿಳೆ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
![ಪ್ರೀತಿ, ಮದುವೆ ಹೆಸರಲ್ಲಿ ನಾಲ್ವರಿಗೆ ವಂಚನೆ; ಮಹಿಳೆ ವಿರುದ್ಧ ಕೇಸ್ ದಾಖಲು](https://cdn-vishwavani-prod.hindverse.com/media/original_images/Honeytrap_case.jpg)
![Profile](https://vishwavani.news/static/img/user.png)
ತುಮಕೂರು: ಸಾಮಾಜಿಕ ಜಾಲತಾಣದಲ್ಲಿ ಪುರುಷರನ್ನು ಪರಿಚಯ ಮಾಡಿಕೊಂಡು ಪ್ರೀತಿ, ಮದುವೆ ಹೆಸರಲ್ಲಿ ವಂಚಿಸುತ್ತಿದ್ದ ಮಹಿಳೆಯ ವಿರುದ್ಧ ನಗರದಲ್ಲಿ ಪ್ರಕರಣ (Honeytrap Case) ದಾಖಲಾಗಿದೆ. ಮೂರ್ನಾಲ್ಕು ಷುರುಷರಿಗೆ ಮೋಸ ಮಾಡಿರುವ ಪ್ರಕರಣ ಸಂಬಂಧ ಫರ್ಹಾನ ಖಾನಂ (29) ಎಂಬಾಕೆ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯು ಎರಡನೇ ಮದುವೆಯಾದ ಬಳಿಕವೂ ಮೊದಲ ಪತಿ ಜತೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದ ಮೂಲಕ ಪರ ಪುರುಷರ ಸ್ನೇಹ ಸಂಪಾದಿಸಿ ಅವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ವಂಚಿಸುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಪ್ರಕರಣ?
2014ರಲ್ಲಿ ಫರ್ಹಾನ ಖಾನಂಳನ್ನು ಇದ್ರೀಸ್ ಎಂಬುವರು ಮದುವೆಯಾಗಿದ್ದರು. ಮನೆಯವರೆಲ್ಲ ಸೇರಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿದ್ದರು. ಇದ್ರೀಸ್ಗೆ ಫರ್ಹಾನ ಖಾನಂ ಎರಡನೇ ಪತ್ನಿಯಾಗಿದ್ದಳು. ಮೊದಲನೇ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇದ್ರೀಸ್ ಎರಡನೇ ಮದುವೆ ಮಾಡಿಕೊಂಡಿದ್ದನು. ಮದುವೆಯ ಎಲ್ಲ ಖರ್ಚನ್ನು ಇದ್ರೀಸ್ ನೋಡಿಕೊಂಡಿದ್ದನು. ಫರ್ಹಾನ ಖಾನಂಗೆ 1.42 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣ ನೀಡಿದ್ದರು.
27 ದಿನ ಸಂಸಾರ ಮಾಡಿದ್ದ ಫರ್ಹಾನ ಖಾನಂ ಬಳಿಕ ವರಸೆ ಬದಲಿಸಿದ್ದಳು. ಇದ್ರೀಸ್ಗಿಂತ ಮೊದಲು ಜಾಕೀರ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದ ಫರ್ಹಾನ ಖಾನಂ, ಮೊದಲನೇ ಪತಿ ಜತೆ ಕದ್ದು ಮುಚ್ಚಿ ಮಾತನಾಡುತ್ತಿದ್ದಳು. ಈ ವಿಚಾರ ಗೊತ್ತಾಗಿ ಇದ್ರೀಸ್ ಪ್ರಶ್ನೆ ಮಾಡಿದ್ದರು. ಈ ವೇಳೆ ಗಲಾಟೆ ಸಂಭವಿಸಿತ್ತು. ಫರ್ಹಾನ ಖಾನಂ ಗಲಾಟೆ ಮಾಡಿ ಇದ್ರೀಸ್ನನ್ನೇ ಮನೆಯಿಂದ ಹೊರಗೆ ಓಡಿಸಿದ್ದಳು. ಹೀಗಾಗಿ ಫರ್ಹಾನ ಖಾನಂ ವಿರುದ್ಧ ಇದ್ರೀಸ್ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮದುವೆ ಹಣ ಹಾಗೂ ಚಿನ್ನಾಭರಣ ವಾಪಸ್ ಕೊಡುವಂತೆ ಇದ್ರೀಸ್ ಕೇಳಿದ್ದರು. ಆದರೆ ಫರ್ಹಾನ ಖಾನಂ ಗೂಂಡಾಗಳನ್ನು ಕಳುಹಿಸಿ ಇದ್ರೀಸ್ ಮೇಲೆ ಹಲ್ಲೆ ಮಾಡಿಸಿದ್ದಳು. ಸದ್ಯ ಫರ್ಹಾನ ಖಾನಂ ಮೂರ್ನಾಲ್ಕು ಪುರುಷರೊಂದಿಗೆ ಲವ್ವಿಡವ್ವಿ ನಡೆಸುತ್ತಿದ್ದಾಳೆಂದು ಆರೋಪ ಕೇಳಿಬಂದಿದೆ.
ಪೊಲೀಸ ವಿರುದ್ಧ ಅನ್ಯಾಯ ಆರೋಪ
ಹಣದ ಆಸೆಗಾಗಿ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸದೆ ಪೊಲೀಸರು ವ್ಯತಿರಿಕ್ತ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ ಎಂದು ಇದ್ರೀಸ್, ಐಜಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೇ ಇದ್ರೀಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪ್ರೀತಿಸಿದ ಮಗಳಿಗೆ ಹಗ್ಗ ಬಿಗಿದು ಕೊಲೆಗೈದ ತಂದೆ
![honor killing bidar](https://cdn-vishwavani-prod.hindverse.com/media/images/honor_killing_bidar.width-800.jpg)
ಬೀದರ್: ರಾಜ್ಯದಲ್ಲಿ ಮತ್ತೊಂದು ಬರ್ಬರ ಕೃತ್ಯ (Murder case) ನಡೆದಿದ್ದು, ಲವ್ ಮಾಡಿದ್ದಕ್ಕಾಗಿ ಮಗಳನ್ನೇ ಹತ್ಯೆ (Honor killing) ಮಾಡಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಬೀದರ್ (Bidar news) ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ಯುವಕನೊಬ್ಬನ್ನು ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ತಂದೆಯೇ ಕುತ್ತಿಗೆಗೆ ಹಗ್ಗ ಬಿಗಿದು ಬರ್ಬರ ಹತ್ಯೆ ಮಾಡಿದ್ದಾನೆ. ಕೊಲೆಯಾದವಳನ್ನು ಮೋನಿಕಾ ಮೋತಿರಾಮ ಜಾಧವ್ ಎಂದು ಗುರುತಿಸಲಾಗಿದೆ.
ಮೋನಿಕಾ ಒಬ್ಬ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು. ಪ್ರೀತಿಯ ವಿಷಯವನ್ನು ತನ್ನ ತಂದೆಯ ಎದುರು ಪ್ರಸ್ತಾಪ ಮಾಡಿದ್ದಳು. ಆದರೆ ಮೋತಿರಾಮ ಪ್ರೀತಿ -ಪ್ರೇಮದಿಂದ ದೂರವಿರುವಂತೆ ಮಗಳಿಗೆ ಹೇಳಿ, ನಿನಗೆ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡುತ್ತೇನೆ ಎಂದು ತಿಳಿವಳಿಕೆ ಹೇಳಿದ್ದ. ಮೋತಿರಾಮ ಬುದ್ದಿಮಾತು ಹೇಳಿದ್ದರೂ ಸಹ ಮೋನಿಕಾ ನಾನು ಅವನನ್ನೇ ಮದುವೆ ಆಗುತ್ತೇನೆ ಎಂದು ಹಠ ಹಿಡಿದಿದ್ದಳು.
ತಂದೆ ಏನೇ ಬುದ್ದಿಮಾತು ಹೇಳಿದ್ರೂ ಕೇಳದ ಹಿನ್ನೆಲೆಯಲ್ಲಿ ಕೋಪಗೊಂಡ ಮೋತಿರಾಮ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಡುಗೆ ಮಾಡುತ್ತಿದ್ದ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದಾನೆ. ತೀವ್ರ ರಕ್ತಸ್ರಾವದಿಂದ ಮೋನಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಮೃತ ಯುವತಿಯ ತಾಯಿ ಭಾಗುಬಾಯಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.