ತುಮಕೂರು: ಒಳ ಮೀಸಲಾತಿ (internal reservation) ಜಾರಿಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆ ವೇಳೆ ಆದಿ ಜಾಂಬವ ಮಠದ ಷಡಕ್ಷರಿ ಮುನಿ ಸ್ವಾಮೀಜಿ (Shadakshari Muni Swamiji) ಅವರು ಅಸ್ವಸ್ಥಗೊಂಡಿದ್ದು, ಅವರನ್ನು ನಗರದ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹರಿಹರದಿಂದ ಬೆಂಗಳೂರಿನವರೆಗೆ ಸಾಗುತ್ತಿದ್ದ ಬೃಹತ್ ಪಾದಯಾತ್ರೆ, ತುಮಕೂರಿನ ಭದ್ರಮ್ಮ ವೃತ್ತ ತಲುಪಿದಾಗ ಸ್ವಾಮೀಜಿ ದಿಢೀರ್ ಅಸ್ವಸ್ಥರಾಗಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಸತತ ನಡಿಗೆ ಮತ್ತು ಬಿಸಿಲಿನ ತಾಪದಿಂದ ದೇಹದಲ್ಲಿ ಸುಸ್ತು ಕಾಣಿಸಿಕೊಂಡ ಪರಿಣಾಮ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ತಕ್ಷಣ ಸ್ಥಳದಲ್ಲಿದ್ದ ಭಕ್ತರು ಮತ್ತು ಸಹಯಾತ್ರಿಗಳು ಆಂಬ್ಯುಲೆನ್ಸ್ ಮೂಲಕ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರ ತಂಡ ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ಪಾದಯಾತ್ರೆ ಮುಂದುವರಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಒಳ ಮೀಸಲಾತಿ ಹೋರಾಟವನ್ನು ಸರಕಾರ ಕಡೆಗಣಿಸಿದೆ
ಮಾದಿಗ ಸಮಾಜದ 35 ವರ್ಷಗಳ ಒಳ ಮೀಸಲಾತಿ ಹೋರಾಟವನ್ನು ಸರಕಾರ ಕಡೆಗಣಿಸಿದೆ ಎಂದು ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಷಡಕ್ಷರಿ ಮುನಿ ಸ್ವಾಮೀಜಿ ಹೇಳಿದರು.
ಒಳಮೀಸಲಾತಿ ನೀಡಲು ವಿಳಂಬ ಮಾಡುತ್ತಿರುವ ಸರಕಾರದ ಧೋರಣೆ ಖಂಡಿಸಿ ನಡೆಯುತ್ತಿರುವ ಪಾದಯಾತ್ರೆ ಬೆಂಗಳೂರಿಗೆ ಸಾಗುವ ವೇಳೆ ನಗರದ ಕನಕ ವೃತ್ತದಲ್ಲಿ ಮಾತನಾಡಿ, ಮಾದಿಗ ಸಮಾಜದ 35 ವರ್ಷಗಳ ಒಳ ಮೀಸಲಾತಿ ಹೋರಾಟವನ್ನು ಸರ್ಕಾರ ಕಡೆಗಣಿಸಿದೆ. ಒಂದು ತಟ್ಟೆಯಲ್ಲಿ ತುತ್ತು ಅನ್ನ ಇಟ್ಟು 101 ಜನರಿಗೆ ಊಟ ಮಾಡಲು ಹೇಳಿದರೆ ಬಲಾಢ್ಯರು ಅದನ್ನು ಕಿತ್ತು ತಿನ್ನುತ್ತಾರೆ. ಈ ರೀತಿ ಮಾದಿಗ ಸಮಾಜಕ್ಕೂ ಸಹ ಅನ್ಯಾಯವಾಗಿದೆ.
ಸರ್ಕಾರಕ್ಕೆ ಮಾದಿಗರ ನೋವು ಅರ್ಥವಾಗುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ, ತಮ್ಮ ಪಕ್ಷದ ವರಿಷ್ಠರ ಸೂಚನೆಯಂತೆ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಮೂಲೆಯಲ್ಲಿ ಕೂರಿಸುವುದು ಮಾದಿಗರಿಗೆ ಗೊತ್ತಿದೆ ಎಂದರು. ಈ ವೇಳೆ ದಲಿತ ಸಮುದಾಯದ ಹಲವು ಮುಖಂಡರು ಉಪಸ್ಥಿತರಿದ್ದರು.