ತುಮಕೂರು: ಕುಣಿಗಲ್ ಮೂಲದ ಪ್ರಿಯಾಂಕ ನಾಪತ್ತೆ (Priyanka Missing Case) ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮದುವೆಗೆಂದು ಹಾಸನದ ಬೇಲೂರಿಗೆ ಹೋಗಿ ನಾಪತ್ತೆಯಾಗಿದ್ದ ಪ್ರಿಯಾಂಕ ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿತ್ತು. ಮಹಿಳೆ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣ ಧರಿಸಿ ಹೋಗಿದ್ದರಿಂದ ದರೋಡೆಕೋರರಿಂದ ಕೊಲೆಯಾಗಿರಬಹುದಾ ಅಥವಾ ಕಿಡ್ನ್ಯಾಪ್ ಆಗಿರಬಹುದಾ ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಎಲ್ಲರ ದಿಕ್ಕು ತಪ್ಪಿಸಿದ್ದ ಪ್ರಿಯಾಂಕಾ ಮಾತ್ರ ತನ್ನ ಗಂಡನ ಸ್ನೇಹಿತನ ಜತೆಯೇ ಪರಾರಿಯಾಗಿರುವುದು ಬಯಲಾಗಿದೆ. ಇನ್ನು ಸಿನೀಮಿಯ ಸ್ಟೈಲ್ನಲ್ಲಿ ನಾಪತ್ತೆ ನಾಟಕವಾಗಿದ್ದ ಮಹಿಳೆ ಸಿಕ್ಕಿಬಿದ್ದಿದ್ದೇ ರೋಚಕವಾಗಿದೆ.
ಪ್ರಿಯಾಂಕ (28) ಎಂಬ ಮಹಿಳೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಲಿಯೂರು ಗ್ರಾಮದಿಂದ ಚಿಕ್ಕಮಗಳೂರಿಗೆ ಚಿಕ್ಕಮ್ಮನ ಮಗಳ ಮದುವೆಗೆಂದು ಹೋಗಿದ್ದಳು. ಮದುವೆ ಮುಗಿಸಿಕೊಂಡು ತವರು ಮನೆಯಿದ್ದ ಹಾಸನದ ಬೇಲೂರಿಗೆ ಹೋಗಿದ್ದಳು. ಅಲ್ಲಿ ತಾಯಿ ಜತೆ ಮಾತಾಡಿಕೊಂಡು ಸೀರೆ ಬದಲಿಸಿ ಟಾಪ್ ಹಾಕಿಕೊಂಡಿದ್ದಳು. ಆದರೆ, ವಾಪಸ್ ಊರಿನ ಬಸ್ ಹತ್ತಿದ್ದವಳು ದಿಢೀರ್ ನಾಪತ್ತೆಯಾಗಿದ್ದಳು.
ಬಳಿಕ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಫೆ.13 ರಂದು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕ ನಾಪತ್ತೆ ಪ್ರಕರಣ ದಾಖಲಾಗಿದ್ದು, ನಂತರ ಅದನ್ನು ಅರೇಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ನಂತರ ಆಕೆಗಾಗಿ ಹುಡುಕಾಟ ಆರಂಭಿಸಿದ್ದ ಪೊಲೀಸರಿಗೆ ಹಾಸನದ ಹೆದ್ದಾರಿ ಬದಿಯ ಕಲ್ಕೆರೆ ಬಳಿ ಮಹಿಳೆಯ ಆಧಾರ್ ಕಾರ್ಡ್ ಸಿಕ್ಕಿತ್ತು. ಕೆರೆಯ ಸುತ್ತಮುತ್ತ ಹುಡುಕಾಡಿದಾಗ ಚಪ್ಪಲಿ, ವ್ಯಾನಿಟಿ ಬ್ಯಾಗ್, ಬಟ್ಟೆಗಳು ಸಿಕ್ಕಿದ್ದವು. ಹೀಗಾಗಿ ಪ್ರಿಯಾಂಕಾ ಹಾಕಿದ್ದ 20 ರೂ. ಲಕ್ಷದ ಚಿನ್ನಾಭರಣಗಳಿಗಾಗಿ ಯಾರಾದ್ರೂ ಕೊಲೆಮಾಡಿದ್ರಾ? ಅಥವಾ ಕಿಡ್ನ್ಯಾಪ್ ಆಗಿದ್ದಾಳಾ ಎಂಬ ನಾನಾ ಅನುಮಾನಗಳು ಪೊಲೀಸರ ತಲೆಹೊಕ್ಕಿತ್ತು. ಅಲ್ಲದೇ ಕೊಲೆಗೈದು ಕೆರೆಯಲ್ಲಿ ಶವ ಬಿಸಾಡಿರಬಹುದು ಎಂದು ಪೊಲೀಸರು ಮುಳುಗುತ ತಜ್ಞರ ಸಹಾಯದಿಂದ ನೆನ್ನೆ ರಾತ್ರಿವರೆಗೂ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ, ಏನೂ ಪ್ರಯೋಜನವಾಗಿರಲಿಲ್ಲ. ಯಾಕೆಂದರೆ ನಾಪತ್ತೆಯಾಗಿದ್ದ ಮಹಿಳ ಸಿನೀಮಿಯ ಶೈಲಿಯಲ್ಲಿ ದೊಡ್ಡ ಡ್ರಾಮಾವನ್ನೇ ಮಾಡಿದ್ದಳು.
ಪ್ರಿಯಾಂಕಾಳ ತಾಯಿ ಹಾಸನದ ಬೇಲೂರಿನಿಂದ ಬಸ್ ಹತ್ತಿಸಿ ಕಳುಹಿಸಿದ್ದರು. ಆದರೆ ಮುಂದಿನ ಸ್ಟಾಪ್ನಲ್ಲಿ ಬಸ್ನಿಂದ ಇಳಿದಿದ್ದ ಪ್ರಿಯಾಂಕಾ ತನ್ನ ಸ್ನೇಹಿತ ಡೇವಿಡ್ನ ಬೈಕ್ ಹತ್ತಿದ್ದಳು. ಸ್ವಲ್ಪದೂರ ಹೋಗಿ ರಾತ್ರಿ ವೇಳೆ ಬಟ್ಟೆ ಬದಲಿಸಿಕೊಂಡಿದ್ದ ಪ್ರಿಯಾಂಕಾ, ನಾಪತ್ತೆ ಸೀನ್ ಸೃಷ್ಟಿಸುವ ಸಲುವಾಗಿ ಹೆದ್ದಾರಿ ಬದಿ ಒಂದೆಡೆ ಆಧಾರ್ ಕಾರ್ಡ್ ಬಿಸಾಡಿ, ಮತ್ತೊಂದೆಡೆ ಚಪ್ಪಲಿ, ಇನ್ನೊಂದಡೆ ವ್ಯಾನಿಟಿ ಬ್ಯಾಗ್ ಎಸೆದಿದ್ದಳು. ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿಯೇ ಕೆರೆ ಬಳಿಯೇ ತಾನು ಧರಿಸಿದ್ದ ಒಳಉಡುಪನ್ನು ಹರಿದು ಬಿಸಾಡಿದ್ದಳು.
ಪ್ರಿಯಕರನ ಜತೆ ಮಾತನಾಡಲು ಪತ್ಯೇಕ ಸಿಮ್
ಇನ್ನು ಪ್ರಿಯಕರನ ಜತೆ ಮಾತನಾಡಲು ಪ್ರಿಯಾಂಕಾ ಬೇರೆ ಸಿಮ್ ಬಳಸುತ್ತಿದ್ದಳು. ಹಾಗಾಗಿಯೇ ಪ್ರಿಯಾಂಕಾ ಮಾಮೂಲಿ ಸಿಮ್ ಸಿಡಿಆರ್ ತೆಗೆದರೂ ಯಾವುದೇ ಸುಳಿವು ಸಿಗದೆ ಪೊಲೀಸರು ಕಂಗಾಲಾಗಿದ್ದರು. ಕಡೆಗೆ ಒಂದೇ ಮೊಬೈಲ್ನಲ್ಲಿ ಎರಡು ಸಿಮ್ ಆಪರೇಟ್ ಆಗುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೇ ಮಾಹಿತಿ ಆಧರಿಸಿ ತನಿಖೆಗಿಳಿದಾಗ ಪ್ರಿಯಾಂಕಾಳ ಕಳ್ಳಾಟ ಬಯಲಾಗಿದೆ. ಬೇಲೂರಿನಿಂದ ಡೇವಿಡ್ ಜತೆ ಬೈಕ್ ಹತ್ತಿ ಕುಣಿಗಲ್ ತಲುಪಿದ್ದಳು.
ಗಂಡನ ಬಿಟ್ಟು ಪ್ರಿಯಕರನ ಜತೆ ಜೀವನ ನಡೆಸಲು ಪ್ಲ್ಯಾನ್
ಪ್ರಿಯಾಂಕಾ ಹಾಗೂ ಡೆವಿಡ್ ಕುಣಿಗಲ್ನಲ್ಲಿ ಒಂದೇ ಕಂಪನಿಯ ಉದ್ಯೋಗಿಯಾಗಿದ್ದರು. ಪರಿಚಯವಾಗಿ ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು. ಪ್ರೇಮಿಗಳ ದಿನವೇ ಜತೆಯಾಗಿ ಇರಲು ನಿರ್ಧರಿಸಿದ್ದರು. ಹೀಗಾಗಿ ಎಲ್ಲರಿಗೂ ದಾರಿ ತಪ್ಫಿಸಿ ಎಸ್ಕೇಪ್ ಆಗುವ ಪ್ಲ್ಯಾನ್ ಮಾಡಿದ್ದರು. ತಾವು ಕೆಲಸ ಮಾಡುತ್ತಿದ್ದ ಕಂಪನಿ ಮಧ್ಯಪ್ರದೇಶಕ್ಕೆ ಶಿಫ್ಟ್ ಆಗುವ ಹಿನ್ನೆಲೆಯಲ್ಲಿ ಈ ಜೋಡಿ ಅಲ್ಲಿಗೆ ತೆರಳಿ ಒಟ್ಟಿಗೆ ಜೀವನ ನಡೆಸಲು ತೀರ್ಮಾನಿಸಿತ್ತು. ಇದರಿಂದ 20 ಲಕ್ಷ ರೂ. ಮೌಲ್ಯದ ಒಡವೆ ಸಮೇತ ಪ್ರಿಯಾಂಕಾ ಪ್ರಿಯಕರನ ಜತೆ ಎಸ್ಕೇಪ್ ಆಗಲು ಸ್ಕೆಚ್ ಹಾಕಿದ್ದಳು. ಆದರೆ ಫೆಬ್ರವರಿ 14ರ ರಾತ್ರಿ ಕುಣಿಗಲ್ನಲ್ಲಿ ಈ ಜೋಡಿ ಸಿಕ್ಕಿಬಿದ್ದಿದೆ.
ಇನ್ನು ಪೊಲೀಸರಿಗೆ ದೊರೆತ ಪ್ರಾಥಮಿಕ ಮಾಹಿತಿ ಪ್ರಕಾರ ಪ್ರಿಯಾಂಕಗೆ ಗಂಡನ ಜತೆ ಇರುವುದು ಇಷ್ಟವಿರಲಿಲ್ಲ. ಹೀಗಾಗಿಯೇ ಪ್ರಿಯಕರ ಜತೆ ಓಡಿಹೋಗಿದ್ದಳು ಎಂದು ತಿಳಿದುಬಂದಿದೆ.