ತುಮಕೂರು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಉಪನ್ಯಾಸಕರೊಬ್ಬರು, ಬಂಡೆಯ ಮೇಲಿಂದ 50 ಅಡಿ ಆಳಕ್ಕೆ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ದೇವರಾಯನದುರ್ಗ ಬೆಟ್ಟದಲ್ಲಿ (Devarayanadurga Hill) ನಡೆದಿದೆ. ಹೊರರಾಜ್ಯದ ಸಾಫ್ಟ್ವೇರ್ ಎಂಜಿನಿಯರ್ಗಳಿಗೆ ಸೂರ್ಯಾಸ್ತ ತೋರಿಸುವ ವೇಳೆ ಈ ಅವಘಡ ನಡೆದಿದೆ.
ತುಮಕೂರು ತಾಲೂಕಿನ ಓಬಳಾಪುರ ಮೂಲದ ಉಪನ್ಯಾಸಕ ಶಿವಪ್ರಸಾದ್ ಗಾಯಾಳು. ಪ್ರಸ್ತುತ ಅರಸೀಕೆರೆಯ ಪಿಯು ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಶನಿವಾರ ಸಂಜೆ ತಮ್ಮ ಸ್ನೇಹಿತನೊಂದಿಗೆ ದೇವರಾಯನದುರ್ಗ ಬೆಟ್ಟಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಪ್ರವಾಸಕ್ಕೆ ಬಂದಿದ್ದ ಹೊರರಾಜ್ಯದ ಆರು ಮಂದಿ ಟೆಕ್ಕಿಗಳು ಸಿಕ್ಕಿದ್ದರು.
ಸ್ಥಳೀಯರಾದ ಶಿವಪ್ರಸಾದ್, ಬೆಟ್ಟದಿಂದ ಸೂರ್ಯಾಸ್ತ ಅದ್ಭುತವಾಗಿ ಕಾಣಿಸುತ್ತದೆ ಎಂದು ಆ ಟೆಕ್ಕಿಗಳನ್ನು ತಾವೇ ದೇವಾಲಯದ ಹಿಂಭಾಗದ ಅಪಾಯಕಾರಿ ಬಂಡೆಯ ತುದಿಗೆ ಕರೆದೊಯ್ದಿದ್ದಾರೆ. ಅಲ್ಲಿ ಫೋಟೊ ತೆಗೆದುಕೊಳ್ಳಲು ಹೋದಾಗ ದುರದೃಷ್ಟವಶಾತ್ ಬಂಡೆಯ ತುದಿಯಲ್ಲಿ ಹೆಜ್ಜೆ ಇಡುತ್ತಿದ್ದಂತೆ ಆಯತಪ್ಪಿ ಸುಮಾರು 50 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದಾರೆ.
ಮಗ ಹುಟ್ಟಿದಕ್ಕೆ ಪಾರ್ಟಿ ಕೇಳಿದ ಸ್ನೇಹಿತನನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ವ್ಯಕ್ತಿ
ಶಿವಪ್ರಸಾದ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಉಪನ್ಯಾಸಕನ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.