ಮಧುಗಿರಿ: ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) (Tumul) ಆಡಳಿತ ಮಂಡಳಿ ನಿರ್ದೇಶಕ ಸ್ಥಾನದಿಂದ ಮಧುಗಿರಿ ತಾಲೂಕಿನ (Madhugiri News) ಬಿ. ನಾಗೇಶಬಾಬು ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ನಾಗೇಶ್ ಬಾಬು ವಿರುದ್ಧ ಸ್ಪರ್ಧಿಸಿ 9 ಮತಗಳ ಅಂತರದಿಂದ ಸೋತಿದ್ದ ಮಧುಗಿರಿ ತಾಲೂಕಿನ ಕೊಂಡವಾಡಿ ಚಂದ್ರಶೇಖರ್ ತುಮುಲ್ ನಿರ್ದೇಶಕರಾಗಿ ಆಯ್ಕೆಯಾಗಲಿದ್ದಾರೆ. ಜಿಲ್ಲಾ ಚುನಾವಣೆ ಅಧಿಕಾರಿ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಆಯ್ಕೆಯನ್ನು ಘೋಷಣೆ ಮಾಡಲಿದ್ದಾರೆ.
ಮಧುಗಿರಿ ತಾಲೂಕು ಕಸಬಾ ಹೋಬಳಿಯ ಬಂದ್ರೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಬಿ. ನಾಗೇಶ್ ಬಾಬು ಪ್ರತಿನಿಧಿಸಿದ್ದರು. ಈ ಸಂಘವನ್ನು ನಿಯಮಾನುಸಾರ ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಬಿ. ನಾಗೇಶ್ ಬಾಬು ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ಮತದಾನಕ್ಕೆ ಕೋರ್ಟ್ ಅವಕಾಶ ನೀಡಿತ್ತು. ನಂತರ ನಡೆದ ಚುನಾವಣೆಯಲ್ಲಿ ಬಿ. ನಾಗೇಶ್ ಬಾಬು ಆಯ್ಕೆ ಆಗಿದ್ದರು. ಈಗ ಅಂತಿಮ ತೀರ್ಪು ಹೊರ ಬಿದ್ದಿದ್ದು, ಮತದಾನಕ್ಕೆ ನೀಡಿದ್ದ ಅವಕಾಶವನ್ನು ಕೋರ್ಟ್ ರದ್ದುಪಡಿಸಿದ್ದರಿಂದ ನಿರ್ದೇಶಕ ಸ್ಥಾನವನ್ನು ಅವರು ಕಳೆದುಕೊಂಡಿದ್ದಾರೆ.
ತುಮುಲ್ ನಿರ್ದೇಶಕರ ಚುನಾವಣೆಗೆ ಮುನ್ನ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಪ್ರತಿ ಡೇರಿಯಿಂದ ಒಂದು ಮತ ಚಲಾಯಿಸಲು ಅವಕಾಶ ಇರುತ್ತದೆ. ಹಾಲಿನ ಡೇರಿಯಿಂದ ಡೆಲಿಗೇಟ್ಸ್ ಪಡೆದವರು ಮತದಾನದಲ್ಲಿ ಭಾಗವಹಿಸುತ್ತಾರೆ. ಆದರೆ ನಾಗೇಶ್ ಬಾಬು ಪ್ರತಿನಿಧಿಸುವ ಬಂದ್ರೇಹಳ್ಳಿ ಡೇರಿಗೆ ಮತದಾನದ ಹಕ್ಕು ಸಿಕ್ಕಿರಲಿಲ್ಲ. ಅನರ್ಹರ ಪಟ್ಟಿಗೆ ಸೇರಿಸಲಾಗಿತ್ತು. ಇಂತಹ ಸಂಘಕ್ಕೆ ಮೂರು ನೋಟಿಸ್ ನೀಡಲಾಗುತ್ತದೆ. ಈ ಸಂಘಕ್ಕೂ ನೋಟಿಸ್ ನೀಡಿದ್ದು, ಅದಕ್ಕೆ ಕೊಟ್ಟಿದ್ದ ಉತ್ತರ ಸಮಂಜಸವಾಗಿಲ್ಲ ಎಂಬ ಕಾರಣ ನೀಡಿ, ಮತದಾರರ ಅರ್ಹರ ಪಟ್ಟಿಗೆ ಸೇರಿಸಲಾಗಿತ್ತು.
ಮತದಾನಕ್ಕೆ ಅವಕಾಶ ನೀಡದೆ ಅನರ್ಹಗೊಳಿದ್ದನ್ನು ಪ್ರಶ್ನಿಸಿ ನಾಗೇಶ್ ಬಾಬು ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ನಂತರ ಕೂಲಂಕಷವಾಗಿ ವಿಚಾರಣೆ ನಡೆದ ನಂತರ ತೀರ್ಪು ಹೊರ ಬಂದಿದೆ. ತುಮುಲ್ ಚುನಾವಣೆಯಲ್ಲಿ ಚಂದ್ರಶೇಖರ್ ಮೇಲುಗೈ ಸಾಧಿಸಿದಂತಾಗಿದೆ.
ಈ ಸುದ್ದಿಯನ್ನೂ ಓದಿ | EPFO rules: ಮಹತ್ವದ ಬದಲಾವಣೆ- ಪಿಎಫ್ ಖಾತೆಯಿಂದ ಶೇ. 100ರಷ್ಟು ವಿಥ್ಡ್ರಾ ಸಾಧ್ಯ!
ಮಧುಗಿರಿಯ ದಂಡಿನ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಕೊಂಡವಾಡಿ ಚಂದ್ರಶೇಖರ್, ಸತ್ಯಕ್ಕೆ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ. ರೈತರಿಗೆ ಅನುಕೂಲ ಆಗುವಂತಹ ಕಾರ್ಯಕ್ರಮವನ್ನು ಜಾರಿಗೆ ತರುವುದು ಮೊದಲ ಆದ್ಯತೆ ಎಂದು ಅವರು ಹೇಳಿದ್ದಾರೆ.