ತುಮಕೂರು: ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆ ತುಮಕೂರು ನಗರದಲ್ಲಿ ಹೃದಯಾಘಾತದಿಂದ ಒಂದೇ ದಿನ ಇಬ್ಬರು ಮೃತಪಟ್ಟಿರುವುದು ಕಂಡುಬಂದಿದೆ. ಹನುಮಂತಪುರದ ನಿವಾಸಿಗಳಾದ ಜಯಂತ್ (31) ಹಾಗೂ ಶ್ರೀಧರ್ (52) ಎಂಬುವರು ಹೃದಯಾಘಾತಕ್ಕೆ ಬಲಿಯಾಗಿದ್ದು, ಇದರಿಂದ ಜಿಲ್ಲೆಯ (Tumkur News) ಜನತೆಯಲ್ಲಿ ಆತಂಕ ಮೂಡಿದೆ.
ಜಯಂತ್, ಭಾನುವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಎದೆ ನೋವಿನಿಂದ ಪರದಾಡಿದ್ದಾರೆ. ತಕ್ಷಣವೇ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಜಯಂತ್ನ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಇನ್ನು ಶ್ರೀಧರ್, ಭಾನುವಾರ ಬೆಳಗ್ಗೆ ಟೀ ಕುಡಿದು ನಂತರ ಮನೆಗೆ ಚಿಕನ್ ತಂದುಕೊಟ್ಟಿದ್ದಾರೆ. ಮನೆಗೆ ಬಂದ ಬಳಿಕ ಶ್ರೀಧರ್ಗೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಪ್ರಯೋಜನಕಾರಿಯಾಗಿಲ್ಲ.
ಇನ್ನು ಕಳೆದ ವಾರ ತಾಲೂಕಿನ ಹೆಬ್ಬಾಕ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹೆಬ್ಬಾಕ ಗ್ರಾಮದ ನೀಲಕಂಠಸ್ವಾಮಿ ಹೃದಯಘಾತದಿಂದ ನಿಧನ ಹೊಂದಿದ್ದರು. ಜಿಲ್ಲೆಯಲ್ಲಿ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಫೋಟೋ ತೆಗೆದುಕೊಳ್ಳಲು ಹೋಗಿ ಕಾವೇರಿ ನದಿಗೆ ಬಿದ್ದು ಕೊಚ್ಚಿ ಆಟೋ ಚಾಲಕ!
ಮಂಡ್ಯ: ಫೋಟೋ ತೆಗೆದುಕೊಳ್ಳಲು ಹೋಗಿ ಕಾವೇರಿ ನದಿಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಕೊಚ್ಚಿ ಹೋದ ಘಟನೆ (Mandya News) ಶ್ರೀರಂಗಪಟ್ಟಣ ತಾಲೂಕಿನ ಸರ್ವಧರ್ಮ ಆಶ್ರಮದ ಬಳಿ ನಡೆದಿದೆ. ಮೈಸೂರಿನಲ್ಲಿ ಆಟೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ( 36) ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ. ಭಾನುವಾರ ಸಂಜೆ ಮಹೇಶ್ ಸ್ನೇಹಿತರೊಂದಿಗೆ ಕೆಆರ್ಎಸ್ ಭಾಗಕ್ಕೆ ಪಿಕ್ನಿಕ್ ಬಂದಿದ್ದರು.
ಈ ಸುದ್ದಿಯನ್ನೂ ಓದಿ | Belagavi News: ಅಥಣಿಯಲ್ಲಿ ಭೀಕರ ಅಪಘಾತ; ಕಾರು-ಬಸ್ ಡಿಕ್ಕಿಯಾಗಿ ಮೂವರ ದುರ್ಮರಣ
ಸರ್ವಧರ್ಮ ಆಶ್ರಮದ ಬಳಿ ಫೋಟೋ ತೆಗೆಸಿಕೊಳ್ಳಲು ಹೋದಾಗ ಆಯತಪ್ಪಿ ಕಾವೇರಿ ನದಿಗೆ ಬಿದ್ದಿದ್ದಾರೆ. ನದಿಯಲ್ಲಿ ನೀರು ಹೆಚ್ಚಿದ್ದ ಕಾರಣ ಮಹೇಶ್ ಕೊಚ್ಚಿ ಹೋಗಿದ್ದಾರೆ. ಮಹೇಶ್ ಪತ್ತೆಗಾಗಿ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿದೆ. ಕೆಆರ್ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.