ಅಂಕೋಲಾ: ಕಾರವಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಕೃತಿ ವಿಕೋಪ ನಿರ್ವಹಣೆಯ ಪೂರ್ವ ತಯಾರಿ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಮುಗಿಸಿ ಉಡುಪಿಗೆ ತೆರಳುತ್ತಿದ್ದ ಸಚಿವ ಯು.ಟಿ.ಖಾದರ್(Minister U T Khader) ಅವರ ಬೆಂಗಾವಲು ವಾಹನ (ಎಸ್ಕಾರ್ಟ್ ಕಾರು) ಡಿಕ್ಕಿಯಾಗಿ ಸ್ಕೂಟಿ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಬಾಳೆಗುಳಿಯ ವರದರಾಜ್ ಹೋಟೆಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಇದನ್ನೂ ಓದಿ: Ankola Bus Accident: ಅಂಕೋಲಾ ಬಳಿ ಸೀಬರ್ಡ್ ಬಸ್ ಪಲ್ಟಿಯಾಗಿ ಓರ್ವ ಸಾವು; 21 ಪ್ರಯಾಣಿಕರಿಗೆ ಗಾಯ
ಅಲಗೇರಿ ಮೂಲದ ಬೈಕ್ ಸವಾರ ಸಂದೀಪ್ ನಾಯ್ಕ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿ ದ್ದಾನೆ. ಸಚಿವರು ಕಾರವಾರದ ಸಭೆ ಮುಗಿಸಿಕೊಂಡು ಉಡುಪಿಯತ್ತ ಪ್ರಯಾಣಿಸುತ್ತಿದ್ದ ವೇಳೆ, ಬಾಳೆಗುಳಿಯ ವರದರಾಜ್ ಹೋಟೆಲ್ ಬಳಿ ಹೆದ್ದಾರಿಯಲ್ಲಿ ಸಂದೀಪ್ ನಾಯ್ಕ ಅವರ ಸ್ಕೂಟಿ ಏಕಾಏಕಿ ಅಡ್ಡ ಬಂದಿದೆ ಎನ್ನಲಾಗಿದೆ. ಈ ವೇಳೆ ವೇಗವಾಗಿ ಬರುತ್ತಿದ್ದ ಸಚಿವರ ಬೆಂಗಾ ವಲು ವಾಹನದ ಚಾಲಕನಿಗೆ ನಿಯಂತ್ರಣ ಸಿಗದೇ ಸ್ಕೂಟಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಸವಾರ ಸಂದೀಪ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಮಾನವೀಯತೆ ಮೆರೆದ ಸಚಿವರು: ಅಪಘಾತ ಸಂಭವಿಸುತ್ತಿದ್ದಂತೆ ಸಚಿವ ಯು.ಟಿ.ಖಾದರ್ ಅವರು ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ರಸ್ತೆಗೆ ಧಾವಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳು ಸಂದೀಪ್ ಅವರನ್ನು ಸಚಿವರು ತಮ್ಮದೇ ಬೆಂಗಾವಲು ಸಿಬ್ಬಂದಿ ಮತ್ತು ಸ್ಥಳೀಯರ ನೆರವಿನೊಂದಿಗೆ ತಕ್ಷಣವೇ ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.