ಶಿರಸಿ: ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಅವರು ಮಾಡಿರುವ ‘ಧಮ್ಕಿ’ ಆರೋಪ ತರ್ಕಹೀನವಾದುದು. ಧಮ್ಕಿ ಹಾಕುವುದು ನಮ್ಮ ಸಂಸ್ಕೃತಿಯಲ್ಲ. ಈ ಬಗ್ಗೆ ಅನಂತಮೂರ್ತಿ ಹೆಗಡೆ ಹಾಗೂ ಜೆಡಿಎಸ್ ಮುಖಂಡ ಉಪೇಂದ್ರ ಪೈ ಅವರು ಸಾರ್ವಜನಿಕವಾಗಿ ಸ್ಪಷ್ಟೀಕರಣ ನೀಡಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ಶಾಸಕ ಭೀಮಣ್ಣ ನಾಯ್ಕ್ ಅವರ ವಿರುದ್ಧ ಅನಂತಮೂರ್ತಿ ಹೆಗಡೆ ಅವರು ಸುದ್ದಿಗೋಷ್ಠಿಯಲ್ಲಿ ಅತ್ಯಂತ ಹಗುರವಾಗಿ ಮತ್ತು ತುಚ್ಛವಾಗಿ ಮಾತನಾಡಿದ್ದರು. ಶಾಸಕರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ, ಭಾಷೆಯ ಮೇಲೆ ನಿಗಾ ಇರಲಿ ಎಂದು ನಾವು ಹೇಳಿದ್ದೇವೆಯೇ ಹೊರತು ಎಲ್ಲಿಯೂ ಧಮ್ಕಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: Sirsi News: ಹಾಸ್ಯಗಾರರ ಕೃತಿಗೆ ಇನ್ನೊಂದು ಗರಿ
ನಾನು ಪಕ್ಕಾ ಲೋಕಲ್: "ಅನಂತಮೂರ್ತಿ ಅವರು ಐದು ದೇಶ ಸುತ್ತಿದ ಇಂಟರ್ ನ್ಯಾಷನಲ್ ವ್ಯಕ್ತಿಯಾಗಿರಬಹುದು. ಆದರೆ ನಾನು ಇಲ್ಲಿಯೇ ಹುಟ್ಟಿ ಬೆಳೆದ ಪಕ್ಕಾ ಲೋಕಲ್. ಶಿರಸಿಯ ಜನತೆ ಇಷ್ಟು ವರ್ಷ ನಮ್ಮನ್ನು ನೋಡಿದ್ದಾರೆ. ನಗರಸಭೆ ಅಧ್ಯಕ್ಷನಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ. ನಮ್ಮಲ್ಲಿ ಗೂಂಡಾಗಿರಿ ಸಂಸ್ಕೃತಿ ಇಲ್ಲ," ಎಂದು ಹೆಗಡೆ ಅವರಿಗೆ ತಿರುಗೇಟು ನೀಡಿದರು.
ಪಟಾಲಂ ಎಂಬ ಪದ ಬಳಕೆಗೆ ಆಕ್ಷೇಪ: ಇದೇ ವೇಳೆ ಜೆಡಿಎಸ್ ಮುಖಂಡ ಉಪೇಂದ್ರ ಪೈ ಅವರ ಹೇಳಿಕೆಗೂ ಆಕ್ಷೇಪ ವ್ಯಕ್ತಪಡಿಸಿದ ಪ್ರದೀಪ್ ಶೆಟ್ಟಿ, "ಪಟಾಲಂ ಕಟ್ಟಿಕೊಂಡು ಗೂಂಡಾಗಿರಿ ಮಾಡಬೇಡಿ ಎಂದು ಉಪೇಂದ್ರ ಪೈ ಹೇಳಿದ್ದಾರೆ. ನಾವು ಯಾರ ಪಟಾಲಂ ಕೂಡ ಅಲ್ಲ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಗೌರವಾನ್ವಿತ ಜನಪ್ರತಿನಿಧಿಗಳಾಗಿ ಕೆಲಸ ಮಾಡಿದ ನಮಗೆ ಉತ್ತಮ ಸಂಸ್ಕೃತಿಯಿದೆ. ಉಪೇಂದ್ರ ಪೈ ಅವರು ತಮ್ಮ ಈ ಪದಬಳಕೆ ಬಗ್ಗೆ ಸ್ಪಷ್ಟನೆ ನೀಡಬೇಕು," ಎಂದು ಆಗ್ರಹಿಸಿದರು.
ಅಭಿವೃದ್ಧಿ ಸಹಿಸದವರ ಟೀಕೆ: ಶಾಸಕ ಭೀಮಣ್ಣ ನಾಯ್ಕ್ ಅವರು ಕಳೆದ 30 ತಿಂಗಳ ಅವಧಿ ಯಲ್ಲಿ ದಾಖಲೆ ಪ್ರಮಾಣದ ಅನುದಾನ ತರುವ ಮೂಲಕ ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಮಾದರಿ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಸಹಿಸಲಾಗದೇ ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಟ್ಟು, ಮಾಡಿರುವ ಗಂಭೀರ ಆರೋಪಗಳಿಗೆ ಸೂಕ್ತ ಪುರಾವೆ ನೀಡಲಿ ಎಂದು ಪ್ರದೀಪ್ ಶೆಟ್ಟಿ ಸವಾಲು ಹಾಕಿದ್ದಾರೆ.