ಮೇ 31ರಂದು ಶ್ರೀರಾಮಚಂದ್ರಾಪುರ ಮಠದಿಂದ ವಿವಿಧ ಪ್ರಶಸ್ತಿ ಪ್ರದಾನ
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ಅನುಪಮ ಸಾಧಕರನ್ನು ಗುರುತಿಸಿ ಶ್ರೀರಾಮಚಂದ್ರಾಪುರ ಮಠದಿಂದ ಕೊಡಮಾಡುವ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಮೇ 31ರಂದು ಉತ್ತರ ಕನ್ನಡದ ಗೋಕರ್ಣದ ಅಶೋಕೆಯ ಪುಣ್ಯಾರಾಮದಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.


ಗೋಕರ್ಣ: ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ ಅನುಪಮ ಸಾಧಕರನ್ನು ಗುರುತಿಸಿ, ಶ್ರೀರಾಮಚಂದ್ರಾಪುರ ಮಠದಿಂದ ಕೊಡಮಾಡುವ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಮೇ 31ರಂದು ಗೋಕರ್ಣದ ಅಶೋಕೆಯ ಪುಣ್ಯಾರಾಮದಲ್ಲಿ ಜರುಗಲಿದೆ. ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆಗೈದ 7 ಜನ ಸಾಧಕರಿಗೆ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಮಹಾಸ್ವಾಮೀಜಿ 6 ಪ್ರಶಸ್ತಿಗಳನ್ನು ಅನುಗ್ರಹಿಸುವರು ಎಂದು ಶ್ರೀಮಠದ ಸಿಒಒ ಸಂತೋಷ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀಕ್ಷೇತ್ರ ಶಕಟಪುರಂ ಶ್ರೀವಿದ್ಯಾಪೀಠಂನ ಆಸ್ಥಾನ ವಿದ್ವಾಂಸರಾದ ಮಧುಸೂದನ ಶಾಸ್ತ್ರೀ ಹಂಪಿಹೊಳಿ ಅವರಿಗೆ ಶಂಕರಕಿಂಕರ ಪ್ರಶಸ್ತಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಅಹಲ್ಯಾ ಶರ್ಮಾ ಅವರಿಗೆ ಶ್ರೀಮಾತಾ ಪ್ರಶಸ್ತಿ, ಪ್ರಸಿದ್ಧ ಜ್ಯೌತಿಷ ವಿದ್ವಾಂಸ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಅವರಿಗೆ ಪಾಂಡಿತ್ಯ ಪುರಸ್ಕಾರ, ದಿ. ಮೂಗಿಮನೆ ಗಣಪತಿ ಹೆಗಡೆ ಅವರಿಗೆ ಪುರುಷೋತ್ತಮ ಪ್ರಶಸ್ತಿ, ಪಿ. ಡಿ. ಶ್ರೀಧರರಾವ್ ಅವರಿಗೆ ಚಾತುರ್ಮಾಸ್ಯ ಪ್ರಶಸ್ತಿ, ದಿ. ಮಹಾಲಕ್ಷ್ಮೀ ತಿಮ್ಮಪ್ಪ ಅವರಿಗೆ ಶ್ರೀಮಾತಾ ಪ್ರಶಸ್ತಿ, ಶ್ರೀಮಠದ ಸೇವೆ ಸಲ್ಲಿಸಿದ ಗೋವಿಂದ ತಿಮ್ಮಣ್ಣ ಹೆಗಡೆ ಅವರಿಗೆ ಧನ್ಯಸೇವಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ | ISRO Recruitment 2025: ಇಸ್ರೋದಲ್ಲಿದೆ 320 ಹುದ್ದೆ; ಇಂದೇ ಅಪ್ಲೈ ಮಾಡಿ
ಶ್ರೀಶಂಕರ ಭಗವತ್ಪಾದರ ಜೀವನ-ಸಂದೇಶಗಳ ಸಂಪ್ರಸಾರಕ್ಕೆ ಕಟಿಬದ್ಧರಾದ ಅನುಪಮತೆಗೆ ಸಾರ್ಥಕ ಗೌರವವಾಗಿ ಶಂಕರಕಿಂಕರ ಪ್ರಶಸ್ತಿ, ಪಾಂಡಿತ್ಯದ ಮೂಲಕ ಸನಾತನತೆಯನ್ನು ಸಂರಕ್ಷಿಸಿದ ಮಹತ್ವಕ್ಕೆ ಸಾರ್ಥಕ ಗೌರವವಾಗಿ ಪಾಂಡಿತ್ಯ ಪುರಸ್ಕಾರ, ಲೋಕದ ಒಳಿತಿಗಾಗಿ ಪರಿಶ್ರಮಿಸಿದ ಹಿರಿತನಕ್ಕೆ ಸಾರ್ಥಕ ಗೌರವವಾಗಿ ಪುರುಷೋತ್ತಮ ಪ್ರಶಸ್ತಿ, ಸತ್ಕಾರ್ಯಗಳ ಮೂಲಕ ಸಮೂಹಕ್ಕೆ ಮಮತೆ ಉಣಿಸಿದ ಸಂವೇದನೆಗೆ ಸಾರ್ಥಕ ಗೌರವವಾಗಿ ಶ್ರೀಮಾತಾ ಪ್ರಶಸ್ತಿ, ಸಮಾಜೋದ್ಧರಣಕ್ಕೆ ಕೊಟ್ಟ ವಿಶಿಷ್ಟ ಕೊಡುಗೆಗೆ ಸಾರ್ಥಕ ಗೌರವವಾಗಿ ಚಾತುರ್ಮಾಸ್ಯ ಪ್ರಶಸ್ತಿ, ಶ್ರೀಗುರುಪೀಠಕ್ಕೆ ಸಲ್ಲಿಸಿದ ಸೇವೆಯ ಆದರ್ಶಕ್ಕೆ ಸಾರ್ಥಕ ಗೌರವವಾಗಿ ಧನ್ಯಸೇವಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಹಾಗೂ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ತಿಳಿಸಿದ್ದಾರೆ.