Vishweshwara Bhat: ಯಕ್ಷಗಾನ ಪರಿಪೂರ್ಣ ಕಲಾ ಶಿಖರ: ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನ ಸ್ವೀಕರಿಸಿ ವಿಶ್ವೇಶ್ವರ ಭಟ್
ಯಕ್ಷಗಾನ ಪರಿಪೂರ್ಣ ಕಲೆ. ಇದೊಂದು ಕಲಾ ಗಂಗೋತ್ರಿ, ಕಲಾ ಶಿಖರ ಎಂದು ಜನಶಕ್ತಿ ವಿಶ್ವಸ್ಥ ಮಂಡಳಿ ಅಧ್ಯಕ್ಷ, ʼವಿಶ್ವವಾಣಿʼ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ತಿಳಿಸಿದರು. ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ರಾಷ್ಟ್ರೀಯ ನಾಟ್ಯೋತ್ಸವದ ಅಷ್ಟ ದಿನದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹೊನ್ನಾವರ ತಾಲೂಕಿನ ಗುಣವಂತೆಯಲ್ಲಿ ನಡೆಯುತ್ತಿರುವ ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವದ ಅಷ್ಟ ದಿನದ ಕಾರ್ಯಕ್ರಮದಲ್ಲಿ ಜನಶಕ್ತಿ ವಿಶ್ವಸ್ಥ ಮಂಡಳಿ ಅಧ್ಯಕ್ಷ, 'ವಿಶ್ವವಾಣಿ' ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು.

ಹೊನ್ನಾವರ: ʼʼಯಕ್ಷಗಾನ ಪರಿಪೂರ್ಣ ಕಲೆ. ಇದೊಂದು ಕಲಾ ಗಂಗೋತ್ರಿ, ಕಲಾ ಶಿಖರʼʼ ಎಂದು ಜನಶಕ್ತಿ ವಿಶ್ವಸ್ಥ ಮಂಡಳಿ ಅಧ್ಯಕ್ಷ, ʼವಿಶ್ವವಾಣಿʼ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwara Bhat) ಅವರು ಹೇಳಿದರು. ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ರಾಷ್ಟ್ರೀಯ ನಾಟ್ಯೋತ್ಸವದ ಅಷ್ಟ ದಿನದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ʼʼಕರ್ನಾಟಕ ರಾಜ್ಯದ ಕಲಾ ಋಣ ಕೆರೆಮನೆ ಮೇಳದ ಮೇಲಿದೆ. ಅನುದಾನದ ಕೊರತೆಯಿಂದ ಯಕ್ಷಗಾನ ಗುರುಕುಲವನ್ನು ಮುಚ್ಚುವ ಸ್ಥಿತಿ ಬರಬಾರದುʼʼ ಎಂದು ಹೇಳಿದರು.
ʼʼಕೆರೆಮನೆ ಗುರುಕುಲ ಪುನರ್ ಸ್ಥಾಪಿಸಲು ಎಲ್ಲ ರೀತಿಯ ಸಹಕಾರ ವೈಯಕ್ತಿಕವಾಗಿ, ಸರ್ಕಾರದ ಮೂಲಕವು ಮಾಡಲು ಸಿದ್ಧʼʼ ಎಂದು ತಿಳಿಸಿದರು.

ಪಟ್ಲ ಸತೀಶ ಶೆಟ್ಟಿ ಮಾತನಾಡಿ ಗುರುಕುಲವನ್ನು ಕೆರೆಮನೆ ರಂಗಮಂದಿರದಲ್ಲಿ ಪುನರ್ ಸ್ಥಾಪಿಸಲು ಆರ್ಥಿಕ ಸಹಕಾರ ನೀಡುವ ಭರವಸೆ ನೀಡಿದರು. ʼʼಯಕ್ಷಗಾನ ರಂಗ ಶ್ರೀಮಂತವಾಗಿಸಿದ ಕಲಾಚೇತನರ ಕೊಡುಗೆಯಿಂದ ಪಟ್ಲ ಫೌಂಡೇಶನ್ ಕಟ್ಟಲು ಸಾಧ್ಯವಾಯಿತುʼʼ ಎಂದರು.
ಹೇರಂಭ ಭಟ್ಟರು ಮಾತನಾಡಿ, ಕಲಾ ಸಂಘಟನೆಯ ಕಷ್ಟ ನಷ್ಟಗಳನ್ನು ವಿವರಿಸುತ್ತಾ ಕೆರೆಮನೆ ಮೇಳಕ್ಕೆ ಶುಭ ಹಾರೈಸಿದರು. ಕೃಷ್ಣಮೂರ್ತಿ ಗರ್ತಿಕೆರೆ ಮಾತನಾಡಿ, ಯಕ್ಷಗಾನದಿಂದ ಪ್ರೇರಣೆ ಪಡೆದ ನಾನು ಸಂಮಾನ ಸ್ವೀಕರಿಸಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಪ್ರಜಾವಾಣಿ ಪ್ರಧಾನ ಸಂಪಾದಕ ರವೀಂದ್ರ ಭಟ್ಟ ಅವರು ಮಾತನಾಡಿ, ʼʼಯುನೆಸ್ಕೋ ಮಾನ್ಯತೆಯನ್ನು ಪ್ರಸ್ತಾಪಿಸುತ್ತಾ ಪರಂಪರೆಯನ್ನು ಬಿಡದೇ ಕೆರೆಮನೆ ಮೇಳ ಮುಂದುವರಿದಿರುವುದೇ ಮತ್ತು ಅಪಸವ್ಯಗಳಿಂದ ದೂರ ಇದ್ದುದೇ ಇದಕ್ಕೆ ಕಾರಣʼʼ ಎಂದರು.
ಹಿರಿಯ ಪರ್ತಕರ್ತ ಅಶೋಕ ಹಾಸ್ಯಗಾರ ಮಾತನಾಡಿ, ಕೆರೆಮನೆ ಮೇಳದ ಕಷ್ಟ ನಷ್ಟಗಳನ್ನು ವಿವರಿಸುತ್ತಾ ಈ ಮೇಳದೊಂದಿಗೆ ತನಗಿರುವ ಸಂಬಂಧವನ್ನು ವಿವರಿಸಿದರು. ಯಕ್ಷಗಾನವು ನಾಟ್ಯ ಶಾಸ್ತ್ರದ ಪ್ರಾಯೋಗಿಕ ಸ್ವರೂಪ ಎಂದು ಹೇಳುತ್ತಾ, ಇದು ಪ್ರಾತಿನಿಧಿಕ ಮತ್ತು ಶಾಸ್ತ್ರೀಯ ಕಲೆ ಎಂದು ಸರ್ಕಾರ ಪರಿಗಣಿಸುವಂತಾದರೆ ಮಾತ್ರ ಯಕ್ಷಗಾನಕ್ಕೆ ಸಹಾಯಧನ ತರಲು ಸಾಧ್ಯವಂತಾಗಿ ಈ ಕಲೆ ಉಳಿಸಲು ಸಾಧ್ಯ ಎಂದು ತಿಳಿಸಿದರು.
ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಪುಷ್ಪಲತಾ ವೈದ್ಯ ಮಾತನಾಡಿ, ʼʼಯಕ್ಷಗಾನ ಕಲೆ ಉಳಿಸುವ ಕಾರ್ಯದಲ್ಲಿ ನಮ್ಮೆಲ್ಲರ ಪ್ರಯತ್ನ ಬೇಕಾಗಿದೆʼʼ ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ.ಎಸ್.ಭಟ್ಟ ಮಾತನಾಡಿ, ʼʼಕೆರೆಮನೆ ಯಕ್ಷಗಾನದ ವಿಶ್ವವಿದ್ಯಾಲಯ ಆಗಬೇಕು, ಅಂಚೆಚೀಟಿ ಬಿಡುಗಡೆ ಮಾಡುವುದರ ಮೂಲಕ ಗೌರವಿಸಬೇಕು. ಕನ್ನಡ ಉಳಿಯಬೇಕಾದರೆ ಯಕ್ಷಗಾನ ಉಳಿಯಬೇಕುʼʼ ಎಂದರು.
ಅನಂತ ದಂತಳಿಕೆ ಮತ್ತು ತಂಡದವರ ಯಕ್ಷಗಾನ ಶೈಲಿಯ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು. ಉತ್ಸವದ ಕಾರ್ಯಾಧ್ಯಕ್ಷವಲಕ್ಷ್ಮೀನಾರಾಯಣ ಕಾಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿವಾನಂದ ಹೆಗಡೆ ವಂದಿಸಿದರು. ಮಹೇಶ ಹೆಗಡೆ ಮಾಳ್ಕೋಡ ನಿರೂಪಿಸಿದರು.
ನಾಟ್ಯೋತ್ಸವ ಸಮ್ಮಾನ
ಜನಶಕ್ತಿ ವಿಶ್ವಸ್ಥ ಮಂಡಳಿ ಅಧ್ಯಕ್ಷ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್,ಯಕ್ಷಗಾನ ಭಾಗವತ ಮತ್ತು ಕಲಾ ಪೋಷಕ ಪಟ್ಲ ಸತೀಶ ಶೆಟ್ಟಿ, ಮೈಸೂರಿನ ಯಕ್ಷಗಾನ ಸಂಘಟಕ ಹೇರಂಭ ಭಟ್ಟ ಅಗ್ಗರೆ ಮತ್ತು ಯಕ್ಷಗಾನ ಕಲಾವಿದ ಕೃಷ್ಣಮೂರ್ತಿ ಗರ್ತಿಕೆರೆ ಅವರಿಗೆ ಕೆರಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನವನ್ನು ಪ್ರದಾನ ಮಾಡಲಾಯಿತು.
ಈ ಸುದ್ದಿಯನ್ನೂ ಓದಿ: Vishweshwara Bhat: ಕನ್ನಡ ಪುಸ್ತಕೋದ್ಯಮದ ಭವಿಷ್ಯ ಉಜ್ವಲ: ವಿಶ್ವೇಶ್ವರ ಭಟ್
ಸಾಂಸ್ಕೃತಿಕ ಕಾರ್ಯಕ್ರಮ
ನಾಟ್ಯೋತ್ಸವದ ಅಷ್ಟದಿನದಂದು ಡಾ.ದತ್ತಾತ್ರೇಯ ವೇಲಂಕರ ಅವರಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಿತು. ಇವರಿಗೆ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ ಮತ್ತು ಹಾರ್ಮೋನಿಯಂದಲ್ಲಿ ಸತೀಶ ಭಟ್ಟ ಹೆಗ್ಗಾರ ಸಾಥ್ ನೀಡಿದರು. ನಂತರ ವಾಲಿ ಮೋಕ್ಷ ತಾಳಮದ್ದಳೆ ನಡೆಯಿತು. ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ಉಜಿರೆ ಅಶೋಕ ಭಟ್ಟ, ಎಂ.ಕೆ.ರಮೆಶ ಆಚಾರ್ಯ, ಶೇಣಿ ವೇಣುಗೋಪಾಲ ಭಟ್ಟ ಪಾತ್ರ ನಿರ್ವಹಿಸಿದರು.