ಹೊಸಪೇಟೆ: ನಗರದ ಬಲ್ಡೋಟ ಸಮೂಹದ ಎಂ.ಎಸ್.ಪಿ.ಎಲ್. ಲಿಮಿಟೆಡ್ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ವೃತ್ತ ಸಹಯೋಗದಲ್ಲಿ ಹಂಪಿಯ ವಿಜಯ ವಿಠಲ ದೇವಸ್ಥಾನದ ಪಾರ್ಕಿಂಗ್ ಸಮೀಪದ ಉದ್ಯಾನವನದಲ್ಲಿ ಹಣ್ಣಿನ ಗಿಡಗಳ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಹಂಪಿ ವೃತ್ತದ ಪುರಾತತ್ವ ಇಲಾಖೆ ಅಧೀಕ್ಷಕ ರಾಮಕೃಷ್ಣ ರೆಡ್ಡಿ ಮಾತನಾಡಿ, ಐತಿಹಾಸಿಕ ಹಂಪಿ ಪ್ರದೇಶದಲ್ಲಿ ಬಲ್ಡೋಟ ಸಂಸ್ಥೆಯ ವತಿಯಿಂದ ಹಣ್ಣಿನ ಗಿಡಗಳನ್ನು ರಕ್ಷಾ ಕವಚಗಳೊಂದಿಗೆ ನೆಡುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಈ ಗಿಡಗಳು ಮುಂದಿನ ದಿನಗಳಲ್ಲಿ ಉತ್ತಮವಾಗಿ ಬೆಳೆದು ಹಣ್ಣುಗಳನ್ನು ನೀಡುವುದರಿಂದ ಪರಿಸರ ಸಂರಕ್ಷಣೆಯ ಜೊತೆಗೆ ಪ್ರಾಣಿ–ಪಕ್ಷಿಗಳಿಗೆ ಆಹಾರದ ಮೂಲವಾಗಲಿವೆ. ವಿಶೇಷವಾಗಿ ಹಂಪಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಕೋತಿಗಳಿಗೆ ಈ ಹಣ್ಣಿನ ಗಿಡಗಳು ಅನುಕೂಲ ವಾಗಲಿವೆ. ಇಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳು ಹಂಪಿಯ ನೈಸರ್ಗಿಕ ಸೌಂದರ್ಯ ಹಾಗೂ ಜೀವ ವೈವಿಧ್ಯತೆಯನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Hospet News: ವಿಶೇಷ ಚೇತನರೊಂದಿಗೆ ಯುವ ಮುಖಂಡ ಹಫೀಜ್ ಶೇಖ್ ರವರ ಹುಟ್ಟುಹಬ್ಬ ಆಚರಣೆ
ಬಲ್ಡೋಟ ಸಮೂಹದ ಸಿಎಸ್ಆರ್ ವಿಭಾಗದ ಜನರಲ್ ಮ್ಯಾನೇಜರ್ ಅಶ್ವಿನ್ ಕುಮಾರ್ ಮಾತನಾಡಿ, ಈ ಭಾಗದಲ್ಲಿ ಸಂಸ್ಥೆ ವತಿಯಿಂದ ಒಟ್ಟು 100 ಗಿಡಗಳನ್ನು ನೀಡುತ್ತಿದ್ದು, ಇದರಲ್ಲಿ 50 ಪೇರಲ, 20 ನೇರಳೆ, 15 ಮಾವು, 15 ಬೆಟ್ಟದ ನೆಲ್ಲಿ ಗಿಡಗಳನ್ನು ನೆಡಲಾಗುತ್ತಿದೆ ಹಾಗೂ ಗಿಡಗಳ ರಕ್ಷಣೆಗೆ ರಕ್ಷಾ ಕವಚಗಳನ್ನು ಅಳವಡಿಸುವ ಮೂಲಕ ಅವುಗಳ ಸಂರಕ್ಷಣೆಗೆ ಸಹ ಆದ್ಯತೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಾಯಕ ಎಂಜಿನಿಯರ್ ಅರುಣ್ ಪ್ರಸಾದ್, ಹಿರಿಯ ಸಂರಕ್ಷಣಾ ಸಹಾಯಕ ಅಜಯ್, ಶಿವಕುಮಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಬಲ್ಡೋಟ ಸಮೂಹದ ಸಿಎಸ್ಆರ್ ವಿಭಾಗದ ಅಶ್ವಿನ್ ಕುಮಾರ್ – ಜನರಲ್ ಮ್ಯಾನೇಜರ್, ಶ್ರೀ ನಾಗರಾಜ್ ಬಿ.ಎಂ., ಶ್ರೀ ವಿರೂಪಾಕ್ಷಿ ಹಳ್ಳೂರ ಸೇರಿದಂತೆ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಮೂಲಕ ಪರಿಸರ ಸಂರಕ್ಷಣೆ, ಜೀವ ವೈವಿಧ್ಯತೆಯ ಉತ್ತೇಜನ ಹಾಗೂ ಐತಿಹಾಸಿಕ ಹಂಪಿಯ ನೈಸರ್ಗಿಕ ಸೌಂದರ್ಯವನ್ನು ಮತ್ತಷ್ಟು ಸಮೃದ್ಧಗೊಳಿಸುವ ಮಹತ್ವದ ಸಂದೇಶವನ್ನು ಸಾರಲಾಯಿತು.