ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಶ್ರೀ ವಿರೂಪಾಕ್ಷ ದೇವಸ್ಥಾನಕ್ಕೆ (Hampi virupaksha temple) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala sitharaman) ಅವರು ಬುಧವಾರ ಭೇಟಿ ನೀಡಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ವಿದ್ಯಾರಣ್ಯ ಪೀಠದ ಶ್ರೀಗಳು, ಆನೆಗೊಂದಿ ಸಂಸ್ಥಾನದ ರಾಜವಂಶಸ್ಥ ಶ್ರೀಕೃಷ್ಣದೇವರಾಯ, ಬಳ್ಳಾರಿ ಸಂಸದ ಇ.ತುಕಾರಾಂ, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಮತ್ತಿತರರು ಇದ್ದರು.
ವಿರೂಪಾಕ್ಷನ ದರ್ಶನ ಪಡೆದ ಬಳಿಕ ನಿರ್ಮಲಾ ಸೀತಾರಾಮನ್ ಅವರು, ಹಂಪಿಯ ಆನೆ ಲಕ್ಷ್ಮೀಯಿಂದ ಆಶೀರ್ವಾದ ಪಡೆದರು.
ನಂತರ ಹಂಪಿಗೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳಿಗೆ ಹಂಪಿಯ ಕುರಿತು ಪಾಠ ಮಾಡಿ ನಿರ್ಮಲಾ ಸೀತಾರಾಮನ್ ಗಮನ ಸೆಳೆದರು. ಪ್ರತಿಯೊಬ್ಬ ವಿದ್ಯಾರ್ಥಿ ನಮ್ಮ ದೇಶದ ಇತಿಹಾಸವನ್ನು ತಿಳಿದುಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.

ಈ ಹಿಂದೆ ದೇಶವನ್ನು ಆಳಿದ ಅರಸರು, ವಿವಿಧ ಸಾಮ್ರಾಜ್ಯಗಳ ಕುರಿತು ಅರಿತುಕೊಳ್ಳುವುದು ಮುಖ್ಯ. ಪೋಷಕರು ಸಹ ಮಕ್ಕಳಿಗೆ ಇತಿಹಾಸದ ಕುರಿತು ತಿಳಿಸುವುದು ಹಾಗೂ ಅಲ್ಲಿಗೆ ಪ್ರವಾಸಕ್ಕೆ ಕಳುಹಿಸಬೇಕಿದೆ. ಸಾಮ್ರಾಜ್ಯವನ್ನು ಆಳಿದ ಅರಸರು, ರಾಜರು, ಪಾಳೇಗಾರರು ಜನಪರವಾಗಿ ಕೈಗೊಂಡಿದ್ದ ಕಲೆ, ಸಂಸ್ಕೃತಿ, ಕೃಷಿ, ಹಣಕಾಸು ನಿರ್ವಹಣೆ, ರಾಜ್ಯ ಮುನ್ನೆಡೆಸಿದ ರೀತಿ ಸೇರಿದಂತೆ ಸಂಪೂರ್ಣ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದರು.
ಈ ಸುದ್ದಿಯನ್ನೂ ಓದಿ | CM Siddaramaiah: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ; ರಕ್ಷಣೆ ಒದಗಿಸಲಾಗುವುದು ಎಂದ ಸಿಎಂ
ಬೆಳಿಗ್ಗೆ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ಸಂಜೆ ವಿಜಯ ವಿಠಲ ದೇವಸ್ಥಾನಕ್ಕೆ ಭೇಟಿ ನೀಡಿ, ಕಲ್ಲಿನ ರಥ ಸೇರಿದಂತೆ ಸಪ್ತಸ್ವರ ಮಂಟಪವನ್ನು ವೀಕ್ಷಿಸಿ ಪ್ರವಾಸಿ ಮಾರ್ಗದರ್ಶಕರಿಂದ ಮಾಹಿತಿ ಪಡೆದುಕೊಂಡರು. ನಂತರ ಮಂಟಪದಲ್ಲಿನ ಕಂಬಗಳಿಗೆ ಕಿವಿಗೊಟ್ಟು ಸಪ್ತಸ್ವರದ ನಾದವನ್ನು ಆಲಿಸಿ ಸಂತಸಪಟ್ಟರು.