ಬೆಂಗಳೂರು, ಮಾ. 6: ಮಾನವ ಅಭಿವೃದ್ಧಿಯಲ್ಲಿನ ಹೂಡಿಕೆಯನ್ನು ನಿರ್ಲಕ್ಷಿಸಿದ ಆರ್ಥಿಕ ಅಭಿವೃದ್ಧಿಯು ಅಸ್ಥಿರ ಮಾತ್ರವಲ್ಲ ಅನೈತಿಕ ಎಂಬ ಅಮರ್ಥ್ಯ ಸೇನ್ (ನೊಬೆಲ್ ಪುರಸ್ಕೃತ ಭಾರತೀಯ ಆರ್ಥಿಕ ತಜ್ಞ) ಹೇಳಿಕೆಯಂತೆ ಈ ಬಾರಿಯ ರಾಜ್ಯ ಬಜೆಟ್ ರೂಪಿಸಲಾಗಿದೆ (Karnataka Budget 2026-27). ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸಿದ್ದು, ಜನಕಲ್ಯಾಣ ಸಹಿತ ಅಭಿವೃದ್ಧಿಪರ ಮುಂಗಡ ಪತ್ರ ಇದಾಗಿದೆ ಎಂದು ಸರ್ಕಾರ ಹೇಳಿದೆ.
ಕರ್ನಾಟಕದ್ದೇ 11 ಜಿ ಮಾದರಿ
- ಗ್ಯಾರಂಟಿ ಇಕಾನಮಿ: ಜನ ಕಲ್ಯಾಣ ಮತ್ತು ಲಿಂಗ ಸಮಾನತೆ.
- ಗುಡ್ ಪಬ್ಲಿಕ್ ಎಜುಕೇಷನ್: ಸಾರ್ವಜನಿಕ ಶಿಕ್ಷಣ.
- ಗುಡ್ ಹೆಲ್ ಟು ಆಲ್: ಸಮಗ್ರ ಆರೋಗ್ಯ
- ಗ್ರಾಸ್ ರೂಟ್ ಇಕಾನಮಿ: ಕೃಷಿ-ಗ್ರಾಮೀಣಾಭಿವೃದ್ಧಿ, ಕಲ್ಯಾಣ ಕಾರ್ಯಕ್ರಮಗಳು.
- ಗುಡ್ ಗವರ್ನೆನ್ಸ್: ಜನಸ್ನೇಹಿ ಆಡಳಿತ.
- ಗಿಗ್ ಇಕಾನಮಿ: ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳು.
- ಜಿಯಾಗ್ರಫಿಕಲ್ ಈಕ್ವಾಲಿಟಿ: ಪ್ರಾದೇಶಿಕ ಅಸಮತೋಲನ ನಿವಾರಣೆ.
- ಗ್ಲೋಬಲ್ ಟ್ರೇಡ್ ಇಕಾನಮಿ: ವ್ಯಾಪಾರ ಮತ್ತು ಕೈಗಾರಿಕಾ ಅಭಿವೃದ್ಧಿ.
- ಗ್ಲೋಬ್ ಟ್ರೋಟಿಂಗ್ ಇಕಾನಮಿ: ಪ್ರವಾಸೋದ್ಯಮ ಆಧರಿತ ಆರ್ಥಿಕತೆ.
- ಗ್ರೀನ್ ಇಕಾನಮಿ: ನವೀಕರಿಸಬಹುದಾದ ಇಂಧನ ಸೇರಿದಂತೆ ಪರಿಸರ ಪೂರಕ ಆರ್ಥಿಕ ಚಟುವಟಿಕೆ.
- ಗ್ರೋಯಿಂಗ್ ಅರ್ಬನ್ ಇಕಾನಮಿ: ನಗರಕೇಂದ್ರಿತ ಸುಸ್ಥಿರ ಆರ್ಥಿಕತೆ.
ನಗರಾಭಿವೃದ್ಧಿ ಇಲಾಖೆಗೆ ಭರಪೂರ ಅನುದಾನ; ಈ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?
ರಾಜ್ಯ ಸರಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. 8,600 ಕೋಟಿ ರುಪಾಯಿಗಳ ಕಾಮಗಾರಿ. 2026-27ರಲ್ಲಿ 4,000 ಕೋಟಿ ರುಪಾಯಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
2025–26ನೇ ಸಾಲಿನಲ್ಲಿ, ರಾಜ್ಯದ ಆರ್ಥಿಕತೆಯ ವಿವಿಧ ವಲಯಗಳಲ್ಲಿ ಸಮತೋಲಿತ ಬೆಳವಣಿಗೆ ಕಂಡುಬಂದಿದೆ. ಉತ್ತಮ ಮುಂಗಾರಿನಿಂದಾಗಿ ಕೃಷಿ ಕ್ಷೇತ್ರದಲ್ಲಿ ಶೇ. 9.1ರಷ್ಟು, ಕೈಗಾರಿಕಾ ವಲಯದಲ್ಲಿ ಶೇ. 6.7ರಷ್ಟು ಹಾಗೂ ಸೇವಾ ವಲಯದಲ್ಲಿ ಶೇ. 8.1ರಷ್ಟು ಬೆಳವಣಿಗೆ ದಾಖಲಿಸಿದೆ.
ರಾಜ್ಯವು ಸಮಾಜದ ಕಲ್ಯಾಣಕ್ಕೆ ನೀಡಿದ ಬದ್ಧತೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ, ಫೆಬ್ರವರಿ 2026ರವರೆಗೆ ಒಟ್ಟು 1,21,598 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ ಎಂದು ಬಜೆಟ್ನಲ್ಲಿ ತಿಳಿಸಲಾಗಿದೆ.