ಯಾದಗಿರಿ, ನ.4: ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಆರ್ಎಸ್ಎಸ್ ಪಥ ಸಂಚಲನ (Kembhavi RSS Route March) ಮಂಗಳವಾರ ಯಶಸ್ವಿಯಾಗಿ ನಡೆದಿದೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಗಣವೇಷದಲ್ಲಿ ಕಾರ್ಯಕರ್ತರು ಕೈಯಲ್ಲಿ ದಂಡ ಹಿಡಿದು ಆಕರ್ಷಕ ಪಥ ಸಂಚಲನ ನಡೆಸಿದರು. ಕೆಂಭಾವಿ ಪಟ್ಟಣದ ಸುಮಾರು 4 ಕಿ.ಲೊ ಮೀಟರ್ ದೂರ ಪಥ ಸಂಚಲನ ಸಾಗಿದ್ದು, ಒಂದು ಸಾವಿರಕ್ಕೂ ಅಧಿಕ ಸ್ವಯಂಸೇವಕರು ಭಾಗಿಯಾಗಿದ್ದರು. ಪಥ ಸಂಚಲನ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ 350ಕ್ಕೂ ಅಧಿಕ ಪೋಲಿಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಪುರಸಭೆ ಬಳಿಯಿಂದ ಆರಂಭವಾದ ಆರ್ಎಸ್ಎಸ್ ಪಥ ಸಂಚಲನ, ಚೆನ್ನಮ್ಮ ವೃತ್ತ, ಅಂಬಿಗರ ಚೌಡಯ್ಯ ವೃತ್ತ, ಮಲ್ಲಯ್ಯ ದೇವಸ್ಥಾನ, ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನ, ಮುಖ್ಯ ಬಜಾರ್, ಬಸವೇಶ್ವರ ವೃತ್ತದ ಮೂಲಕ ಸಾಗಿತು.
ಪಥ ಸಂಚಲನ ಸಾಗುವ ಪ್ರಮುಖ ಬೀದಿಗಳಲ್ಲಿ ರಂಗೋಲಿ ಬಿಡಿಸಿ ಸಿಂಗಾರ ಮಾಡಲಾಗಿತ್ತು. ರಾಜ ಬೀದಿಯಲ್ಲಿ ದೇಶಭಕ್ತರ ಭಾವಚಿತ್ರ, ಆರ್ಎಸ್ಎಸ್ ಸರಸಂಘಚಾಲಕರ ಫೋಟೊಗಳು ರಾರಾಜಿಸಿದವು. ಪಥ ಸಂಚಲನ ಸಾಗುವ ವೇಳೆ ಹೂಮಳೆ ಸುರಿದು ಜನರಿಂದ ಸ್ವಾಗತ ಕೋರಲಾಯಿತು. ಶಾಂತಿಯುತ ಹಾಗೂ ಅದ್ಧೂರಿಯಾಗಿ ಪಥ ಸಂಚಲನ ಮುಕ್ತಾಯವಾಗಿದೆ.

ಷರತ್ತುಬದ್ಧ ಅನುಮತಿ ನೀಡಿದ್ದ ಜಿಲ್ಲಾಧಿಕಾರಿ
ಕೆಂಭಾವಿ ಪಟ್ಟಣದಲ್ಲಿ ಆರ್ಎಸ್ಎಸ್ ಪಥಸಂಚಲನಕ್ಕೆ ಜಿಲ್ಲಾಧಿಕಾರಿ ಅವರು ಷರತ್ತು ಬದ್ಧ ಅನುಮತಿ ನೀಡಿದ್ದರು. ಈ ಮೊದಲು ನ.1 ರಂದು ಆಯೋಜಿಸಲು ನಿರ್ಧರಿಸಿದ್ದ ಪಥ ಸಂಚಲನಕ್ಕೆ ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿದ್ದರು. ನಂತರ ಆರ್ಎಸ್ಎಸ್ನ ಪ್ರಮುಖರು ಮತ್ತೊಂದು ಅರ್ಜಿ ಸಲ್ಲಿಸಿ ನ.4 ರಂದು ಪಥ ಸಂಚಲನಕ್ಕೆ ಅನುಮತಿ ಕೋರಿದ್ದರು. ನಂತರ ಹಲವು ದಲಿತಪರ ಸಂಘಟನೆಗಳು ಅಂದು ಮೆರವಣಿಗೆ ಮಾಡುವುದಾಗಿ ಹೇಳಿ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದರು.
ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಸುರಪುರ ತಹಸೀಲ್ದಾರ್ ಹಾಗೂ ಸುರಪುರ ಡಿವೈಎಸ್ಪಿ ಅವರ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ದಲಿತ ಮುಖಂಡರನ್ನು ಮನವೊಲಿಸಿದ್ದರು. ಇದರೊಂದಿಗೆ ಪಥ ಸಂಚಲನ ದಿನವೇ ನಾವು ಪಥ ಸಂಚಲನ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದ ಡಿಎಸ್ಎಸ್ ಮುಖಂಡರು ಕೊನೆಗೆ ಶಾಂತಿ ಸಭೆ ಬಳಿಕ ಪಟ್ಟು ಸಡಿಲಿಸಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಜಿಲ್ಲಾಡಳಿತ ಕೊನೆಗೂ ಸಂಘ ಪರಿವಾರಕ್ಕೆ ಹಲವು ಶರತ್ತುಬದ್ಧ ಅನುಮತಿ ನೀಡಿತ್ತು.
ಈ ಸುದ್ದಿಯನ್ನೂ ಓದಿ | RSS: ʼಯಶಸ್ವಿನಿʼಗೆ ಆರ್ಎಸ್ಎಸ್ ಸದಸ್ಯನ ನೇಮಕ ಹಿಂತೆಗೆದುಕೊಂಡ ರಾಜ್ಯ ಸರಕಾರ
ಪಥ ಸಂಚಲನ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿತ್ತು. ಎಲ್ಲೆಡೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಎಸ್ಪಿ ಪೃಥ್ವಿಕ್ ಶಂಕರ ಸೋಮವಾರ ಭೇಟಿ ನೀಡಿ, ಪಥ ಸಂಚಲನ ಮಾರ್ಗ ಮತ್ತು ಸೂಕ್ಷ್ಮ ಪ್ರದೇಶಗಳನ್ನು ಅವಲೋಕನ ಮಾಡಿದ್ದರು.