ಪ್ರಯೋಗ್ರಾಜ್: ವಿಶ್ವ ವಿಖ್ಯಾತ ಮಹಾಕುಂಭ ಮೇಳದಲ್ಲಿ ಇಂದು ಸಂಭವಿಸಿದ ಕಾಲ್ತುಳಿತದಲ್ಲಿ(Maha Kumbh stampede) ಒಟ್ಟು 30 ಜನ ಸಾವನ್ನಪ್ಪಿದ್ದಾರೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕೆ ಸುಮಾರು10 ಕೋಟಿ ಭಕ್ತ ಜಮಾಯಿಸಿದ್ದರು. ಈ ವೇಳೆ ಭಾರೀ ಕಾಲ್ತುಳಿತ ಸಂಭವಿಸಿದ್ದು, ಅನೇಕರು ಬಲಿಯಾಗಿದ್ದರು. ಅಲ್ಲದೇ ನೂರಾರು ಜನ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಇದುವರೆಗೆ ಎಷ್ಟು ಭಕ್ತರು ಅಸುನೀಗಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರಲಿಲ್ಲ. ಇದೀಗ ಸ್ವತಃ ಮಹಾಕುಂಭದ ಡಿಐಜಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು,ಇಂದು ಮುಂಜಾನೆ 1-2ಗಂಟೆಗೆ ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ ಸುಮಾರು 30 ಭಕ್ತರು ಕೊನೆಯುಸಿರೆಳೆದಿದ್ದರು. 25 ಜನರ ಗುರುತು ಪತ್ತೆಯಾಗಿದ್ದು, ಇತರೆ ಐವರ ಗುರುತು ಇನ್ನೂ ಪತ್ತೆಯಾಗಿಲ್ಲ. ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: ಮಹಾಕುಂಭ ಮೇಳದಲ್ಲಿ ತಾರತಮ್ಯ? ವಿಐಪಿಗಳಿಗೆ ಸ್ಪೆಷಲ್ ಟ್ರೀಟ್ಮೆಂಟ್- ಭಕ್ತರ ಆಕ್ರೋಶ
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ( Mahakumbh Mela Stampede) ಬೆಳಗಾವಿ ಮೂಲದ ನಾಲ್ವರು ಮೃತಪಟ್ಟಿದ್ದಾರೆ. ನಗರದ ವಡಗಾವಿ ನಿವಾಸಿಗಳಾದ ತಾಯಿ-ಮಗಳಾದ ಜ್ಯೋತಿ ಹತ್ತರವಾಠ (50) ಹಾಗೂ ಮೇಘಾ ಹತ್ತರವಾಠ, ಶೆಟ್ಟಿ ಗಲ್ಲಿಯ ಅರುಣ್ ಕೋರ್ಪಡೆ, ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ ಮೃತ ದುರ್ದೈವಿಗಳು.ಕುಂಭಮೇಳ ಕಾಲ್ತುಳಿತ ದುರ್ಘಟನೆಯಲ್ಲಿ ಬೆಳಗಾವಿ ಮೂಲದ ಹತ್ತಾರು ಜನ ಕಾಣೆಯಾಗಿದ್ದು, ಸದ್ಯ ಜಿಲ್ಲೆಯವರ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.