ನವದೆಹಲಿ: ಇತ್ತೀಚೆಗೆ ಮುಕ್ತಾಯವಾಗಿದ್ದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಯಶಸ್ವಿಯಾಗಿ ಬೌಲ್ ಮಾಡಿದ್ದ ವರುಣ್ ಚಕ್ರವರ್ತಿ (varun chakravarthy) ಭಾರತ (India) ತಂಡಕ್ಕೆ ಪ್ರಶಸ್ತಿ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಮಹತ್ವದ ಟೂರ್ನಿಯ ಗೆಲುವಿನ ಸಂಭ್ರಮದಲ್ಲಿ ತೇಲಾಡುತ್ತಿರುವ ಭಾರತ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ 2021ರಲ್ಲಿ ತಾವು ಅನುಭವಿಸಿದ ಆಘಾತಕಾರಿ ಅಂಶವೊಂದನ್ನು ಬಹಿರಂಗಪಡಿಸಿದ್ದಾರೆ. 2021ರ ಐಸಿಸಿ ಟಿ20 ವಿಶ್ವಕಪ್ (T20 world Cup 2021) ಟೂರ್ನಿಯ ಬಳಿಕ ಭಾರತಕ್ಕೆ ಬರಬೇಡಿ ಎಂದು ತಮಗೆ ಬೆದರಿಕೆ ಕರೆಗಳು ಬಂದಿದ್ದವು ಎಂದು ವರುಣ್ ಚಕ್ರವರ್ತಿ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಯುಎಇಯಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
2021ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಬಳಿಕ ವರುಣ್ ಚಕ್ರವರ್ತಿ ಅವರು 2021ರ ಐಸಿಸಿ ಟಿ20 ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಇದಕ್ಕೂ ಮುನ್ನ ಇವರು ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದರು. ಆದರೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ವರುಣ್ ಚಕ್ರವರ್ತಿ ಆಡಿದ್ದ ಮೂರು ಪಂದ್ಯಗಳಿಂದ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಪಾಕಿಸ್ತಾನ ವಿರುದ್ಧ 10 ವಿಕೆಟ್ಗಳಿಂದ ಭಾರತ ತಂಡದಲ್ಲಿ ವರುಣ್ ಕೂಡ ಆಡಿದ್ದರು. ಆದರೆ, ಚಕ್ರವರ್ತಿ ಬೌಲಿಂಗ್ನಲ್ಲಿ ಪಾಕ್ ಬ್ಯಾಟ್ಸ್ಮನ್ಗಳು ಸಮರ್ಥವಾಗಿ ಆಡಿದ್ದರು.
Champions Trophy: ಟೂರ್ನಿ ಶ್ರೇಷ್ಠ ಪ್ರಶಸ್ತಿ ವರುಣ್ ಚಕ್ರವರ್ತಿಗೆ ಸಿಗಬೇಕಿತ್ತೆಂದ ಆರ್ ಅಶ್ವಿನ್!
ನನ್ನಿಂದ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ
ಪ್ರಖ್ಯಾತಿ ನಿರೂಪಕ ಗೋಪಿನಾಥನ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವರುಣ್ ಚಕ್ರವರ್ತಿ,"ಅದು ನನ್ನ ವೃತ್ತಿ ಜೀವನದ ಅತ್ಯಂತ ಕತ್ತಲೆಯ ಅವಧಿಯಾಗಿತ್ತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾನು ಒಂದೇ ಒಂದು ವಿಕೆಟ್ ಅನ್ನು ಪಡೆಯಲು ಸಾಧ್ಯವಾಗಲಿಲ್ಲ ಹಾಗೂ ನನ್ನ ಆಯ್ಕೆಗೆ ನಾನು ನ್ಯಾಯವನ್ನು ತಂದುಕೊಟ್ಟಿಲ್ಲ ಎಂದು ಅನಿಸಿತ್ತು. ಒಂದೇ ಒಂದು ವಿಕೆಟ್ ಪಡೆಯಲಿಲ್ಲವಲ್ಲ ಎಂದು ನನಗೆ ವಿಷಾದವಾಗಿತ್ತು. ಇದಾದ ಮೂರು ವರ್ಷಗಳಲ್ಲಿ ನಾನು ಭಾರತಕ್ಕೆ ಮತ್ತೆ ಆಯ್ಕೆಯಾಗಲಿಲ್ಲ. ಪದಾರ್ಪಣೆ ಮಾಡಿದ್ದ ಹಾದಿಗಿಂತ, ಕಮ್ಬ್ಯಾಕ್ ಮಾಡುವುದು ತುಂಬಾ ಕಷ್ಟವೆಂದು ನನಗೆ ಅನಿಸಿತ್ತು," ಎಂದು ಹೇಳಿಕೊಂಡಿದ್ದಾರೆ.
ವಿಶ್ವಾಸವನ್ನು ಕಳೆದುಕೊಂಡಿದ್ದೆ: ವರುಣ್
"2021ರ ಬಳಿಕ ನಾನು ತುಂಬಾ ಬದಲಾವಣೆಯಾಗಬೇಕಿತ್ತು. ನನ್ನ ದಿನಚರಿ ಮತ್ತು ಅಭ್ಯಾಸವನ್ನು ಬದಲೀಸಬೇಕಾಗಿತ್ತು. ಮೊದಲು ಪ್ರತಿದಿನ 50 ಎಸೆತಗಳ ಸೆಷನ್ನಲ್ಲಿ ಅಭ್ಯಾಸ ನಡೆಸುತ್ತಿದ್ದೆ , ನಂತರ ಇದನ್ನು ದ್ವಿಗುಣಗೊಳಿಸಿದೆ. ಸೆಲೆಕ್ಟರ್ಗಳು ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡುತ್ತಾರಾ? ಇಲ್ಲವಾ? ಎಂಬ ಬಗ್ಗೆ ತಿಳಿಯದೆ ನಾನು ಅಭ್ಯಾಸ ನಡೆಸುತ್ತಿದ್ದೆ ಹಾಗೂ ಇದು ಅತ್ಯಂತ ಕಠಿಣವಾಗಿತ್ತು. ಮೂರನೇ ವರ್ಷ ಮುಗಿದ ಬಳಿಕ ಎಲ್ಲವೂ ಹೋಯಿತು ಎಂಬ ಭಾವನೆ ನನ್ನಲ್ಲಿ ಹುಟ್ಟಿತ್ತು. ಆದರೆ, ಐಪಿಎಲ್ ಗೆದ್ದ ಬಳಿಕ ನನಗೆ ಭಾರತ ತಂಡದ ಕರೆ ಬಂತು ಹಾಗೂ ನನಗೆ ಖುಷಿಯಾಯಿತು," ಎಂದು ಕೆಕೆಆರ್ ಸ್ಪಿನ್ನರ್ ತಿಳಿಸಿದ್ದಾರೆ.
IND vs NZ: 5 ವಿಕೆಟ್ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ವರುಣ್ ಚಕ್ರವರ್ತಿ!
ಭಾರತಕ್ಕೆ ಬರಬೇಡಿ ಎಂಬ ಬೆದರಿಕೆ ಕರೆಗಳು ಬಂದಿದ್ದವು
"ಒಂದೇ ಸಲ ನನಗೆ ಒಳ್ಳೆಯ ಸಂಗತಿಗಳು ಸಂಭವಿಸಿದವು ಹಾಗೂ ಇದನ್ನು ನಂಬಲು ನನ್ನಿಂದ ಸಾಧ್ಯವಾಗಲಿಲ್ಲ. ಈ ವೇಳೆ ನಾನು ನನ್ನನ್ನು ಮುಂದಿನ ಹಂತಕ್ಕೆ ತಳ್ಳಲು ನಾನು ಬಯಸಿದ್ದೆ. ನಾನು ಸಾಕಷ್ಟು ಏರಿಳಿತಗಳನ್ನು ಕಂಡಿದ್ದೆ ಹಾಗೂ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೆ. 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಳಿಕ, ʻಭಾರತಕ್ಕೆ ಬರಬೇಡಿʼ ಎಂಬ ಬೆದರಿಕೆ ಕರೆಗಳು ನನಗೆ ಬಂದಿದ್ದವು. ಒಂದು ವೇಳೆ ಬರಲು ಪ್ರಯತ್ನಿಸಿದರೂ, ನಿಮ್ಮನ್ನು ಬರಲು ಬಿಡುವುದಿಲ್ಲ. ಜನರು ನನ್ನ ಮನೆಯ ಹತ್ತಿರ ಕೂಡ ಬಂದು ನನ್ನನ್ನು ಹುಡುಕಿದ್ದರು. ಆದರೆ, ಈ ವೇಳೆ ನಾನು ಅವರಿಗೆ ಕಾಣಿಸಿಕೊಂಡಿರಲಿಲ್ಲ. ಏರ್ಪೋರ್ಟ್ನಿಂದ ಬರುವಾಗ ಇಬ್ಬರು ಯುವಕರು ಬೈಕ್ನಲ್ಲಿ ನನ್ನನ್ನು ಹಿಂಬಾಲಿಸಿದ್ದರು. ಇದು ನನಗೆ ಅರ್ಥವಾಗುತ್ತದೆ. ಅಭಿಮಾನಿಗಳ ಭಾವನೆ ನನಗೆ ಅರ್ಥವಾಗುತ್ತದೆ," ಎಂದು ವರುಣ್ ಚಕ್ರವರ್ತಿ ಕಹಿ ದಿನಗಳನ್ನು ಬಹಿರಂಗಪಡಿಸಿದ್ದಾರೆ.