ಲಕ್ನೋ: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಬರೋಬ್ಬರಿ 27 ಕೋಟಿ ರೂ. ಕೊಟ್ಟು ಎಲ್ಎಸ್ಜಿ ಫ್ರಾಂಚೈಸಿ, ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ಖರೀದಿ ಮಾಡಿತ್ತು. ಅಲ್ಲದೆ ತಂಡದ ನಾಯಕತ್ವವನ್ನು ಕೂಡ ನೀಡಿತ್ತು. ಹೀಗಾಗಿ ಅವರ ಮೇಲೆ ಭಾರೀ ನಿರೀಕ್ಷೆ ಇಡಲಾಗಿತ್ತು. ಈ ನಿರೀಕ್ಷೆಗಳು ಇದೀಗ ಹುಸಿಯಾಗಿದೆ. ಲಕ್ನೋ ತಂಡ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದ್ದು, ಜತೆಗೆ ನಾಯಕ ಪಂತ್ ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ. ಹೀಗಾಗಿ ಫ್ರಾಂಚೈಸಿಯ ಮಾಲೀಕ ಸಂಜೀವ್ ಗೋಯೆಂಕಾ ಮೈದಾನದಲ್ಲಿ ರಿಷಭ್ ಪಂತ್ ಅವರೊಂದಿಗೆ ಮತ್ತೆ ತೀವ್ರ ಚರ್ಚೆ ನಡೆಸಿದ ಫೋಟೊಗಳು ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಗಳವಾರ ಏಕಾನ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ತಂಡ 8 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತ್ತು. ಪಂತ್ ಈ ಪಂದ್ಯದಲ್ಲಿ 2 ರನ್ ಮಾತ್ರ ಗಳಿಸಿದ್ದರು. ಪಂತ್ ಔಟಾಗುತ್ತಿದ್ದಂತೆ ಸ್ವತಃ ಲಕ್ನೋ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ 27 ಕೋಟಿ ರೂ. ನೀರಲ್ಲಿ ಹೋಮವಾಯಿತು ಎಂದು ಕಿಡಿಕಾರಿದ್ದರು.
ಪಂದ್ಯದ ಸೋಲಿನ ಬಳಿಕ ಮೈದಾನಕ್ಕೆ ಬಂದ ಮಾಲಕರಾದ ಸಂಜೀವ್ ಗೋಯೆಂಕಾ ಅವರು ಪಂತ್ ಜತೆ ಮಾತುಕತೆ ನಡೆಸಿದರು. ಈ ವೇಳೆ ಗೋಯೆಂಕಾ ಮುಖದ ಹಾವಭಾವ ನೋಡುವಾಗ ಪಂತ್ ಜತೆ ಅಸಮಾಧಾನದಿಂದಲೇ ಮಾತನಾಡಿದಂತೆ ಮತ್ತು ಎಚ್ಚರಿಕೆ ನೀಡಿದಂತೆ ಕಾಣುತ್ತಿದೆ.
ಗೋಯೆಂಕಾ ಪಂದ್ಯ ಸೋತಾಗ ತಮ್ಮ ತಂಡದ ನಾಯಕರಿಗೆ ಪ್ರಶ್ನೆಗಳನ್ನು ಕೇಳುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ಕೆಎಲ್ ರಾಹುಲ್ ಕೂಡ ತಂಡದ ಸೋಲುಗಳಿಗಾಗಿ ಮೈದಾನದಲ್ಲಿ ಗೋಯೆಂಕಾ ಅವಿಂದ ಬೈಗುಳ ಕೇಳಿದ್ದರು. ಈ ಋತುವಿನ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಲ್ಎಸ್ಜಿ ಸೋಲಿನ ನಂತರ ಪಂತ್ ಜತೆಯೂ ಗೋಯೆಂಕಾ ಚರ್ಚೆ ನಡೆಸಿದ್ದರು.
ಇದೀಗ ಎರಡನೇ ಸೋಲಿನ ಬಳಿಕ ಪಂತ್ ಮೇಲೆ ಗೊಯೆಂಕಾ ಕೊಂಚ ಗರಂ ಆದಂತಿದೆ. ಗೋಯೆಂಕಾ ಅವರ ಈ ವರ್ತನೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸೋಲು ಗೆಲುವು ಪಂದ್ಯದ ಒಂದು ಭಾಗ, ಪ್ರತಿ ಪಂದ್ಯದ ಸೋಲಿನ ಬಳಿಕ ನಾಯಕರನ್ನು ಪ್ರಶ್ನೆ ಮಾಡಿದರೆ ಅವರ ಆತ್ಮವಿಶ್ವಾಸ ಮತ್ತಷ್ಟು ಕುಂಠಿತಗೊಳ್ಳುತ್ತದೆ. ಐಪಿಎಲ್ನಲ್ಲಿ ನೀವೊಬ್ಬ ಕೆಟ್ಟ ಮಾಲಕ ಎಂದು ಕಮೆಂಟ್ ಮಾಡಿದ್ದಾರೆ.