ಢಾಕಾ: ಬುಧವಾರ ದೇಶ, ವಿದೇಶದಲ್ಲಿ ಹಿಂದೂ ಬಾಂಧವರು ಮಹಾಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಿದ್ದರು. ನೆರೆಯ ಬಾಂಗ್ಲಾದೇಶದ ಕ್ರಿಕೆಟಿಗ ಲಿಟ್ಟನ್ ದಾಸ್(Litton Das), ಕೂಡ ಶ್ರದ್ಧಾ ಭಕ್ತಿಯಿಂದ ಶಿವಲಿಂಗಗಳಿಗೆ ವಿಶೇಷ ಅಭಿಷೇಕ, ಪೂಜೆ ಪುನಸ್ಕಾರ ಮಾಡಿದ್ದಾರೆ. ಪೂಜೆ ಮಾಡಿರುವ ಫೋಟೊಗಳನ್ನು ಅವರು ತಮ್ಮ ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಹಂಚಿಕೊಂಡು 'ಹರ ಹರ ಮಹಾದೇವ' ಎಂದು ಬರೆದುಕೊಂಡಿದ್ದಾರೆ. ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಹಿಂದೂ ಕುಟುಂಬದಿಂದ ಬಂದಿರುವ ಲಿಟ್ಟನ್ ದಾಸ್ ಈ ಹಿಂದೆಯೂ ಗಣೇಶ ಹಬ್ಬ ಸೇರಿದಂತೆ ಎಲ್ಲ ಹಿಂದೂ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದಾರೆ.
ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದಿದ್ದ ದಂಗೆಯ ವೇಳೆ ಲಿಟನ್ ದಾಸ್ ಕೂಡ ಹಲವು ಸಮಸ್ಯೆ ಎದುರಿಸಿದ್ದರು. ಅವರ ಮನೆಗೆ ಬೆಂಕಿ ಹಚ್ಚಲು ಕೂಡ ಮುಂದಾಗಿದ್ದರು ಎಂದು ಹೇಳಲಾಗಿತ್ತು. ಲಿಟ್ಟನ್ ದಾಸ್ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅವಕಾಶ ಪಡೆದಿಲ್ಲ.
30 ವರ್ಷದ ಲಿಟ್ಟನ್ ದಾಸ್ ಇದುವರೆಗೆ ಬಾಂಗ್ಲಾ ಪರ 48 ಟೆಸ್ಟ್ ಪಂದ್ಯಗಳಿಂದ 2788(4 ಶತಕ, 17 ಅರ್ಧಶತಕ), ಏಕದಿನದಲ್ಲಿ 94 ಪಂದ್ಯ, 2569 ರನ್(5 ಶತಕ, 12 ಅರ್ಧಶತಕ), ಟಿ20ಯಲ್ಲಿ 95 ಪಂದ್ಯ, 2021 ರನ್(11 ಅರ್ಧಶತಕ) ಬಾರಿಸಿದ್ದಾರೆ.
ಬಾಂಗ್ಲಾ-ಪಾಕ್ ಪಂದ್ಯಕ್ಕೆ ಮಳೆ; ಟಾಸ್ ವಿಳಂಬ
ಚಾಂಪಿಯನ್ಸ್ ಟ್ರೋಫಿಯಿಂದ ಈಗಾಗಲೇ ಅಧಿಕೃತವಾಗಿ ಹೊರಬಿದ್ದಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವೆ ಇಂದು(ಫೆ.27) ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಟಾಸ್ ಪ್ರಕ್ರಿಯೆ ಕೂಡ ವಿಳಂಬಗೊಂಡಿದ್ದು ಮಳೆ ಬಿಡುವ ಸೂಚನೆ ಕಾಣಿಸುತ್ತಿಲ್ಲ. ಕಳೆದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯ ಕೂಡ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿತ್ತು. ಇದೀಗ ಈ ಪಂದ್ಯವೂ ಇದೇ ರೀತಿ ಆಗುವ ಸಾಧ್ಯತೆ ಇದೆ. ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.