Bhuvaneswari Devi : ಇಂದು ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ ; ಇಲ್ಲಿದೆ ಪ್ರತಿಮೆಯ ವಿಶೇಷತೆ
ಸೋಮವಾರ ವಿಧಾನ ಸೌಧದಲ್ಲಿ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.


ಬೆಂಗಳೂರು: ರಾಜ್ಯದ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಸೋಮವಾರ ನಾಡದೇವತೆ ಕನ್ನಡಾಂಬೆ ಭುವನೇಶ್ವರಿ ತಾಯಿಯ (Bhuvaneswari Devi) 25 ಅಡಿ ಎತ್ತರ ಬೃಹತ್ ಪ್ರತಿಮೆಯನ್ನು ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಲೋಕಾರ್ಪಣೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಮೆಯನ್ನು ಅನಾವರಣ ಮಾಡಲಿದ್ದಾರೆ.
ಸಂಜೆ 4.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಈ ಹಬ್ಬದ ವಾತಾವರಣದಲ್ಲಿ ಸಾರ್ವಜನಿಕರು ಹಾಗೂ ಕನ್ನಡಪರ ಸಂಘಟನೆಗಳು ಪಾಲ್ಗೊಳ್ಳಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
ಪ್ರತಿಮೆಯ ವೈಶಿಷ್ಟ್ಯತೆ ಏನು?
ಪ್ರತಿಮೆ ಒಟ್ಟು 43 ಅಡಿ 6 ಇಂಚು ಎತ್ತರ ಇದ್ದು, ಪ್ರತಿಮೆ 20 ಟನ್ ತೂಕ ಇದೆ. ಅದಕ್ಕೆ ಬಳಸಿರುವ ಲೋಹದ ತೂಕ 31.50 ಟನ್ ಇದೆ. ಭುವನೇಶ್ವರಿ ಪ್ರತಿಮೆಯ ಒಟ್ಟು ವಿಸ್ತೀರ್ಣ (ಉದ್ಯಾನವನ ಸೇರಿದಂತೆ) – 4500 ಚ.ಮೀ , ಇನ್ನು ಕಾಮಗಾರಿಯು 21.24 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದೆ.
ಹೊಯ್ಸಳ ಶೈಲೀಯ ಪೀಠ ನಿರ್ಮಾಣ
ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇರಲಿದೆ. ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ. ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ, ಚಾಲುಕ್ಯ ಕದಂಬ ಹಾಗೂ ಆಧುನೀಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ರಾಜಲಾಂಛನಗಳಾದ ಹೊಯ್ಸಳ ಲಾಂಛನ, ವೈಜಯಜಯಂತಿ ಮಾಲೆ, ಕಂಠಿಹಾರ, ಗಂಡ ಭೇರುಂಡ ಇರಲಿದೆ.
ಪ್ರತಿಮೆಯ ಸುತ್ತಲೂ ಉದ್ಯಾನವನ, ಆವರಣದ ಸುತ್ತಲೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮದ ದ್ವಾರಕ್ಕೆ ಇರುವ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆಂದೇ ಪಶ್ಚಿಮಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಇರಲಿದೆ ಎಂದರು. ಪ್ರತಿಮೆ ಅನಾವರಣದ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ 4 ದಿಕ್ಕುಗಳಿಂದ ಮೆರವಣಿಗೆ ಆಗಮಿಸಲಿದ್ದು, ಜ್ಞಾನಪೀಠ ಪುರಸ್ಕೃತರು ಹಾಗೂ ನಾಡಿನ ಹೆಸರಾಂತ ಮಹನೀಯರ ಫೋಟೋಗಳನ್ನು ಇಡಲಾದ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಲಿದೆ.
ಪೂರ್ವ ದಿಕ್ಕಿನಿಂದ (ಇಂದಿರಾ ನಗರ ): ಪಂಪ, ರನ್ನ, ಪೊನ್ನ, ಜನ್ನ, ಸರ್.ಎಂ. ವಿಶ್ವೇಶ್ವರಯ್ಯ, ಸರ್ ಸಿ.ವಿ. ರಾಮನ್, ಸಿ.ಎನ್.ಆರ್. ರಾವ್, ಭೀಮ್ಸೇನ್ ಜೋಷಿ, ಡಾ. ರಾಜ್ಕುಮಾರ್, ಎಸ್. ನಿಜಲಿಂಗಪ್ಪ, ಶ್ರೀ ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡ, ಡಾ. ವಿರೇಂದ್ರ ಹೆಗಡೆ, ಡಾ. ಪುನೀತ್ ರಾಜ್ಕುಮಾರ್ ಅವರ ಫೋಟೋವಿರುವ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಲಿದೆ.
ಪಶ್ಚಿಮ ದಿಕ್ಕು: (ಕೆಂಗೇರಿ ಉಪನಗರ ): ಜ್ಞಾನಪೀಠ ಪ್ರಶಸ್ತಿ ಪುರಸ್ಕತರು ಹಾಗೂ ರಾಷ್ಟ್ರಕವಿಗಳಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತ, ಮಾಸ್ತಿ ವೆಂಕಟೇಶ ಅಯ್ಯಾಂಗಾರ್, ವಿ.ಕೃ. ಗೋಕಾಕ್, ಡಾ. ಯು. ಆರ್. ಅನಂತ ಮೂರ್ತಿ, ಡಾ. ಗಿರೀಶ್ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ, ಮಂಜೇಶ್ವರ ಗೋವಿಂದ ಪೈ, ಡಾ. ಜಿ.ಎಸ್. ಶಿವರುದ್ರಪ್ಪ ಅವರ ಫೋಟೋ ಮೆರವಣಿಗೆಯಲ್ಲಿ ಬರಲಿದೆ.
ಉತ್ತರ ದಿಕ್ಕು : (ಹೆಬ್ಬಾಳ) ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಅರಸರು, ಗಂಗರು, ಮೈಸೂರು ರಾಜ್ಯರ ಲಾಂಛನ ಹಾಗೂ ಹಲ್ಮಿಡಿ ಶಾಸನದ ಪ್ರತಿರೂಪ ಇರಲಿದೆ.
ಈ ಸುದ್ದಿಯನ್ನೂ ಓದಿ : Ramadurga: ರಾಮದುರ್ಗಃ ವಿಜೃಂಬಣೆಯಿಂದ ಜರುಗಿದ ಬಸವೇಶ್ವರ ಸಂಸ್ಥೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಮೆರವಣಿಗೆ
ದಕ್ಷಿಣ ದಿಕ್ಕು : (ಬಸವನಗುಡಿ ಬುಲ್ ಟೆಂಪಲ್ ) ಇನ್ನು ದಕ್ಷಿಣ ದಿಕ್ಕಿನಿಂದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ, ಕನಕದಾಸರು, ಪುರಂದರದಾಸರು, ಸಂಚಿ ಹೊನ್ನಮ್ಮ, ದಾನ ಚಿಂತಾಮಣಿ ಅತ್ತಿಮಬ್ಬೆ, ಅಕ್ಕಮಹಾದೇವಿ, ಕುಮಾರವ್ಯಾಸ, ಸಂತ ಶಿಶುನಾಳ ಷರೀಫ, ರೆವರೆಂಡ್ ಎಫ್ ಕಿಟ್ಟೆಲ್, ಬಿ.ಎಲ್. ರೈಸ್ ಅವರ ಪಲ್ಲಕ್ಕಿ ಬರಲಿದ್ದು, ನಾಲ್ಕು ದಿಕ್ಕುಗಳಿನಿಂದ ಮೆರವಣಿಗೆ ಸಾಗಿ ಅಂತಿಮವಾಗಿ ನಾಡದೇವಿ ಭುವನೇಶ್ವರಿ ಪ್ರತಿಮೆ ಇರುವ ವಿಧಾನಸೌಧದ ಬಳಿ ತಲುಪಲಿವೆ. ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರತಿಯೊಂದು ದಿಕ್ಕಿನಲ್ಲಿ ಶಾಸಕರು ಮೆರವಣಿಗೆ ಚಾಲನೆ ನೀಡಲಾಗಿದ್ದು, ಹತ್ತಾರು ಕಲಾ ತಂಡಗಳು ಸೇರಿದಂತೆ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.