ಬೆಂಗಳೂರು: ತವರಿನಂಗಳದಲ್ಲಿ ಆಡಿದ ಎಲ್ಲ 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ಹಾಲಿ ಚಾಂಪಿಯನ್ ಆರ್ಸಿಬಿಯ(RCBW) ನಾಯಕಿ ಸ್ಮೃತಿ ಮಂಧಾನ(Smriti Mandhana) ತಂಡದ ಅಭಿಮಾನಿಗಳಲ್ಲಿ ಕ್ಷೆಮೆ ಕೇಳಿದ್ದಾರೆ. ಶನಿವಾರದ ನಿರ್ಣಾಯಕ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 9 ವಿಕೆಟ್ಗಳಿಂದ ಸೋತ ಕಾರಣ ತಂಡದ ನಾಕೌಟ್ ಹಾದಿ ದುರ್ಗಮಗೊಂಡಿದೆ. ಉಳಿದಿರುವ ಎರಡು ಪಂದ್ಯಗಳಲ್ಲಿ ದೊಡ್ಡ ಅಂತರದಿಂದ ಗೆದ್ದರೆ ಮಾತ್ರ ನಾಕೌಟ್ ಅವಕಾಶವೊಂದಿದೆ.
"ನಾನು ಕ್ಷಮಿಸಿ ಎಂದು ಹೇಳುತ್ತೇನೆ, ಬೆಂಗಳೂರಿನಲ್ಲಿ ನಿಮಗಾಗಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಅಪಾರ ಸಂಖ್ಯೆಯಲ್ಲಿ ಬಂದು ನೀವು ನಮ್ಮನ್ನು ಬೆಂಬಲಿಸಿದ್ದೀರಿ. ಆದರೆ ಕ್ರಿಕೆಟ್ನಲ್ಲಿ ಹಿಂದಿನ ಫಲಿತಾಂಶ ಬದಿಗಿಡಬೇಕು. ನಾವು ಅದನ್ನು ಮರೆತುಬಿಡಬೇಕು ಮತ್ತು ಮುಂದೆ ಸಾಗಬೇಕು. ಸೋತರೂ ಕೂಡ ನಿಮ್ಮ ಬೆಂಬಲ ಮಾತ್ರ ಎಂದೆಂದಿಗೂ ಹೀಗೆ ಇರುತ್ತದೆ ಎಂದು ನನಗೆ ತಿಳಿದಿದೆ. ಅದಕ್ಕಾಗಿಯೇ ನೀವು ವಿಶ್ವದ ಅತ್ಯುತ್ತಮ ಅಭಿಮಾನಿಗಳು. ನಾವೆಲ್ಲರೂ ಒಂದು ವಾರದ ರಜೆಯನ್ನು ಹೊಂದಿದ್ದೇವೆ, ಆದ್ದರಿಂದ ಖಚಿತವಾಗಿ ಎಲ್ಲ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಗೆಲುವಿನ ಹಳಿಗೆ ಮರಳುತ್ತೇವೆ" ಎಂದು ಮಂಧಾನ ಹೇಳಿದರು.
ಶನಿವಾರ ನಡೆದಿದ್ದ ಬೆಂಗಳೂರು ಚರಣದ ಅಂತಿಮ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರ್ಸಿಬಿಯನ್ನು 9 ವಿಕೆಟ್ಗಳಿಂದ ಮಗುಚಿ ಹಾಕಿತು. ಜತೆಗೆ ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡಿತು.
ಇದನ್ನೂ ಓದಿ WPL 2025: ಡಬ್ಲ್ಯುಪಿಎಲ್ ಮುಂದಿನ ಪಂದ್ಯದಿಂದ ಹೊರಗುಳಿದ ಚಾಮರಿ ಅಟ್ಟಪಟ್ಟು
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಶಿಖಾ ಪಾಂಡೆ ಬೌಲಿಂಗ್ ದಾಳಿಗೆ ತತ್ತರಿಸಿ 5 ವಿಕೆಟ್ಗೆ 147 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಶಫಾಲಿ ವರ್ಮಾ (80*) ಹಾಗೂ ಜೆಸ್ ಜೊನಾಸೆನ್ (61*) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 15.3 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ಗೆ 151 ರನ್ ಬಾರಿಸಿ ಗೆಲುವು ಸಾಧಿಸಿತು.