ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Elephant Attack: ಕಾಡಾನೆ ದಾಳಿಗೆ ಮತ್ತೊಂದು ಬಲಿ; ಹಾಸನದಲ್ಲಿ ವ್ಯಕ್ತಿ ಸಾವು

Elephant Attack: ರಾಜ್ಯದಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಹಾಸನದಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಹಾಸನ ಜಿಲ್ಲೆ ಆಲೂರು ತಾಲೂಕಿನ ಅಡಿಬೈಲು ಗ್ರಾಮದ ಪುಟ್ಟಯ್ಯ (75) ಎಂದು ಗುರುತಿಸಲಾಗಿದೆ. ಕಾಫಿ ತೋಟದಲ್ಲಿ ನಡೆದುಕೊಂಡು ಬರುತ್ತಿದ್ದ ಅವರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದೆ.

ಸಾಂದರ್ಭಿಕ ಚಿತ್ರ (ಒಳಚಿತ್ರದಲ್ಲಿ ಪುಟ್ಟಯ್ಯ).

ಹಾಸನ: ರಾಜ್ಯದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಹಾಸನದಲ್ಲಿ ವೃದ್ಧರೊಬ್ಬರು ಬಲಿಯಾಗಿದ್ದಾರೆ (Elephant Attack). ಹಾಸನ ಜಿಲ್ಲೆ ಆಲೂರು ತಾಲೂಕಿನ ಅಡಿಬೈಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಪುಟ್ಟಯ್ಯ (75) ಎಂದು ಗುರುತಿಸಲಾಗಿದೆ. ಅವರು ಮಗ್ಗೆ ಗ್ರಾಮದಿಂದ ಸ್ವಗ್ರಾಮ ಅಡಿಬೈಲಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆನೆ ಏಕಾಏಕಿ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟರೂ ಸಾಧ್ಯಾವಾಗಲಿಲ್ಲ. ಕಾಡಾನೆ ತನ್ನ ಕಾಲಿನಿಂದ ತುಳಿದು ಮರಕ್ಕೆ ಅಪ್ಪಳಿಸಿ ಬಿಸಾಡಿದೆ. ಇದರಿಂದ ಪುಟ್ಟಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ʼʼದಿನಸಿ ಖರೀದಿ ಮಾಡಿಕೊಂಡು ಅವರು ಮನೆಗೆ ವಾಪಸ್ ಆಗುತ್ತಿದ್ದರು. ಕಾಫಿತೋಟದಲ್ಲಿ ನಡೆದುಕೊಂಡು ಬರುತ್ತಿದ್ದಾಗ ಒಂಟಿಸಲಗ ದಾಳಿ ಮಾಡಿ ಕೊಂದು ಹಾಕಿದೆ. ರಾತ್ರಿಯಾದರೂ ಮನೆಗೆ ಬರಲಿಲ್ಲವೆಂದು ಹುಡುಕಾಡಿದಾಗ ಬಳಿಕ ಕಾಫಿ ತೋಟದಲ್ಲಿ ಶವ ಪತ್ತೆಯಾಗಿದೆʼʼ ಎಂದು ಪುಟ್ಟಯ್ಯ ಅವರ ಮನೆಯವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ನೋಡನೋಡ್ತಿದ್ದಂತೆ ಮನೆಗೆ ನುಗ್ಗಿದ ಕಾಡಾನೆ- ಆಮೇಲೆ ಏನಾಯ್ತು ಗೊತ್ತಾ? ಬೆಚ್ಚಿಬೀಳಿಸುವ ವಿಡಿಯೊ ವೈರಲ್

ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆನೆ ಹಾವಳಿಯಿಂದ ಶೀಘ್ರ ಮುಕ್ತಿ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಹಾಸನ ಜಿಲ್ಲೆಯ ಆಲೂರು, ಸಕಲೇಶಪುರ ಹಾಗೂ ಬೇಲೂರು ಭಾಗದಲ್ಲಿ ಕಾಡಾನೆಗಳ ಕಾಟ ವಿಪರೀತವಾಗಿದ್ದು, ಜನರು ಮನೆಯಿಂದ ಹೊರ ಬೀಳಲು ಭಯಪಡುವಂತಾಗಿದೆ.

Ramesh Ballamoole

View all posts by this author