Infant murder Case: ಅಕ್ರಮ ಸಂಬಂಧ, ಯುಟ್ಯೂಬ್ ನೋಡಿ ಹೆರಿಗೆ, ತಿಪ್ಪೆಗೆಸೆದು ಹಸುಳೆ ಕೊಲೆ; ಜೋಡಿ ಆರೆಸ್ಟ್
ನವಮಾಸದ ಬಳಿಕ ಪ್ರಸವ ವೇದನೆ ಶುರುವಾದಾಗ ಪ್ರಿಯಕರ ಮಹಾಬಳೇಶ್ಗೆ ವಿಡಿಯೋ ಕಾಲ್ ಮಾಡಿ ಹೇಳಿಕೊಂಡಿದ್ದಾಳೆ. ಆತ ಹೇಳಿದಂತೆ ಯುಟ್ಯೂಬ್ ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ ಮಾಡಿಕೊಂಡಿದ್ದಾಳೆ. ಇದಾದ ಬಳಿಕ ಮಗು ಅತ್ತರೆ ಗೊತ್ತಾಗುತ್ತದೆ ಎಂದು ಬಾಯಿ ಮೂಗು ಹಿಡಿದು ಡಬ್ಬದಲ್ಲಿ ಹಾಕಿದ್ದಾಳೆ. ಈ ವೇಳೆ ತಲೆಗೆ ಬಲವಾಗಿ ಪೆಟ್ಟು ಬಿದ್ದು ಮಗು ಸಾವನ್ನಪ್ಪಿದೆ.


ಬೆಳಗಾವಿ: ಅಕ್ರಮ ಸಂಬಂಧ ಮುಚ್ಚಿಟ್ಟಕೊಳ್ಳುವುದಕ್ಕಾಗಿ, ಅದರಿಂದಲೇ ಹುಟ್ಟಿದ ಮಗುವನ್ನು ಕೊಲೆ ಮಾಡಿ (Infant murder case) ತಿಪ್ಪೆಗೆಸೆದ ಜೋಡಿಯನ್ನು ಪೊಲೀಸರು ಪತ್ತೆ ಹಚ್ಚಿ ಆರೆಸ್ಟ್ (Crime news) ಮಾಡಿದ್ದಾರೆ. ಈ ಘಟನೆ ಬೆಳಗಾವಿ (Belagavi news) ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಮಗುವಿನ ತಾಯಿಯೇ ಯುಟ್ಯೂಬ್ ನೋಡಿಕೊಂಡು ಸ್ವತಃ ಹೆರಿಗೆ ಮಾಡಿಕೊಂಡಿದ್ದಳು. ಹೆರಿಗೆ ಸಂದರ್ಭದಲ್ಲಿಯೇ ಕೊಲೆಯಾಗಿತ್ತು. ತಂದೆಯೂ ಇದರಲ್ಲಿ ಸಾಥ್ ನೀಡಿದ್ದಾನೆ. ಇಬ್ಬರೂ ಈಗ ಜೈಲು ಸೇರಿದ್ದಾರೆ. ಬಂಧಿತರನ್ನು ಸಿಮ್ರಾನ್ ಅಲಿಯಾಸ್ ಮುಸ್ಕಾನ್ ಮಾಣಿಕಬಾಯಿ (22) ಹಾಗೂ ಮಹಾಬಳೇಶ್ ಕಾಳೋಜಿ (31) ಎಂದು ಗುರುತಿಸಲಾಗಿದೆ.
ಮಾ.5ರಂದು ಮನೆಯೊಂದರ ತಿಪ್ಪೆಯಲ್ಲಿ ಶಿಶುವಿನ ಶವವೊಂದು ಸಿಕ್ಕಿತ್ತು. ಎಂಟು ತಿಂಗಳ ನಂತರ ಜನಿಸಿದ್ದ ಹೆಣ್ಣು ಮಗು ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೆಣ್ಣು ಶಿಶು ಎಂಬ ಕಾರಣಕ್ಕೆ ಯಾರೋ ಈ ರೀತಿ ಪ್ಲಾಸ್ಟಿಕ್ನಲ್ಲಿ ಕಟ್ಟಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಅಂದುಕೊಂಡಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರೇ ಅಂತ್ಯಸಂಸ್ಕಾರ ಕೂಡ ನೆರವೇರಿಸಿದ್ದರು. ನಾಲ್ಕು ದಿನದ ಹಿಂದೆ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ಮಗುವಿನ ತಲೆ ಭಾಗಕ್ಕೆ ಗಾಯವಾಗಿ ಮೃತಪಟ್ಟಿದೆ ಎಂದು ಗೊತ್ತಾಗಿತ್ತು. ಕೂಡಲೇ ಈ ಪ್ರಕರಣವನ್ನು ಕಿತ್ತೂರು ಠಾಣೆ ಪೊಲೀಸರು ಕೊಲೆ ಎಂದು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದರು.
ಸ್ಥಳೀಯ ಹಾಗೂ ಅಕ್ಕಪಕ್ಕದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಬಾಣಂತಿಯರ ಹಾಗೂ ಘಟನೆ ನಡೆದ ಒಂದು ವಾರದಲ್ಲಿ ಹೆರಿಗೆ ಆಗಬೇಕಿದ್ದ ಗರ್ಭಿಣಿಯರ ಹೆಸರು ಪತ್ತೆ ಹಚ್ಚಿದರು. ಇದರಲ್ಲಿ ಆರೋಪಿ ತಾಯಿ ಹೆಸರು ಸಿಕ್ಕಿತ್ತು. ಶಿಶು ದೊರೆತ ತಿಪ್ಪೆ ಕೂಡ ಅವರ ಮನೆಯ ಪಕ್ಕದಲ್ಲೇ ಇತ್ತು. ಹೆಚ್ಚಿನ ವಿಚಾರಣೆಗೆ ಮುಂದಾದ ಪೊಲೀಸರಿಗೆ ಅಕ್ರಮ ಸಂಬಂಧದ ಕತೆ ಬಯಲಾಗಿದೆ.
ಅಂಬಡಗಟ್ಟಿ ಗ್ರಾಮದ ನಿವಾಸಿಯಾದ ಸಿಮ್ರಾನ್ ಅಲಿಯಾಸ್ ಮುಸ್ಕಾನ್ ಮಾಣಿಕಬಾಯಿ (22), ಅದೇ ಗ್ರಾಮದ 31 ವರ್ಷದ ಮಹಾಬಳೇಶ್ ಕಾಳೋಜಿ ಎಂಬಾತನ ಜೊತೆಗೆ ಪ್ರಣಯ ಸಂಬಂಧ ಹೊಂದಿದ್ದಳು. ಅದರಿಂದ ಗರ್ಭಿಣಿಯಾಗಿದ್ದ ಈ ಮುಸ್ಕಾನ್ಗೆ ತಾನು ಗರ್ಭಿಣಿ ಎಂಬುದು ಗೊತ್ತಾದಾಗ ಆರು ತಿಂಗಳಾಗಿತ್ತು. ನವಮಾಸದ ಬಳಿಕ ಪ್ರಸವ ವೇದನೆ ಶುರುವಾದಾಗ ಪ್ರಿಯಕರ ಮಹಾಬಳೇಶ್ಗೆ ವಿಡಿಯೋ ಕಾಲ್ ಮಾಡಿ ಹೇಳಿಕೊಂಡಿದ್ದಾಳೆ. ಆತ ಹೇಳಿದಂತೆ ಯುಟ್ಯೂಬ್ ವಿಡಿಯೋ ನೋಡಿಕೊಂಡು ಮಗುವಿಗೆ ಜನ್ಮ ಮಾಡಿಕೊಂಡಿದ್ದಾಳೆ. ಇದಾದ ಬಳಿಕ ಮಗು ಅತ್ತರೆ ಗೊತ್ತಾಗುತ್ತದೆ ಎಂದು ಬಾಯಿ ಮೂಗು ಹಿಡಿದು ಡಬ್ಬದಲ್ಲಿ ಹಾಕಿದ್ದಾಳೆ. ಈ ವೇಳೆ ತಲೆಗೆ ಬಲವಾಗಿ ಪೆಟ್ಟು ಬಿದ್ದು ಮಗು ಸಾವನ್ನಪ್ಪಿದೆ. ಇದಾದ ಬಳಿಕ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಿಪ್ಪೆಗೆಸೆದಿದ್ದಳು.
ಶಿಶು ತಿಪ್ಪೆಯಲ್ಲಿರುವುದನ್ನು ಅಕ್ಕಪಕ್ಕದವರು ಗಮನಿಸಿ ಕಿತ್ತೂರು ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪ್ರಕರಣದಲ್ಲಿ ತಾಯಿ ಪತ್ತೆ ಹಚ್ಚಿದ ಪೊಲೀಸರು ಇದೀಗ ತಂದೆಯಾದ ಮಹಾಬಳೇಶನನ್ನೂ ಹಿಡಿದು ಜೈಲಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: Murder Case: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಟ್ವಿಸ್ಟ್, ಅತ್ತೆಯೇ ಕೊಲೆಗಾತಿ!